ಜಗನ್ ಮೋಹನ್ ರೆಡ್ಡಿ ಹಿಂದೂ ವಿರೋಧಿ: ಬಿಜೆಪಿ ಆರೋಪ
ಅಮರಾವತಿ, ಆಗಸ್ಟ್ 22: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ ರೆಡ್ಡಿ ವಿರುದ್ಧ ಆಚರಣೆಗೆ ಸಂಬಂಧಿಸಿದಂತೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಆಂಧ್ರಪ್ರದೇಶ ಬಿಜೆಪಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಜಗನ್ ವಿರುದ್ಧ ಹರಿಹಾಯ್ದಿರುವ ಪಕ್ಷ, ಅಮೆರಿಕದ ಸಭೆಯೊಂದರಲ್ಲಿ ದೀಪ ಬೆಳಗುವ ಮೂಲಕ ಉದ್ಘಾಟನೆ ನಡೆಸಲು ನಿರಾಕರಿಸಿದ್ದಕ್ಕಾಗಿ ಅವರನ್ನು 'ಹಿಂದೂ ವಿರೋಧಿ' ಎಂದು ಆರೋಪಿಸಿದೆ.
ಇದರ ಜತೆಗೆ ಬಿಜೆಪಿ ವಿಡಿಯೋ ಕ್ಲಿಪ್ಒಂದನ್ನು ಸಹ ಪೋಸ್ಟ್ ಮಾಡಿದೆ. ಅದರಲ್ಲಿ ಜಗನ್ ಅವರಿಗೆ ಸಂಘಟಕರೊಬ್ಬರು ದೀಪ ಬೆಳಗಿಸುವ ಸಲುವಾಗಿ ಬೆಂಕಿಪೊಟ್ಟಣವನ್ನು ನೀಡುತ್ತಾರೆ. ಆದರೆ ಜಗನ್, ದೀಪದತ್ತ ಕೈ ಚಾಚಿ ನಗುತ್ತಾ ಅಲ್ಲಿಂದ ತೆರಳುವುದು ಕಾಣಿಸುತ್ತದೆ.

ಇದರ ವಿರುದ್ಧ ಕಿಡಿಕಾರಿರುವ ಬಿಜೆಪಿ, 'ಅಮೆರಿಕದಲ್ಲಿ ಕಾರ್ಯಕ್ರಮವೊಂದನ್ನು ಉದ್ಘಾಟಿಸುವಾಗ ದೀಪ ಬೆಳಗಿಸಲು ಜಗನ್ ನಿರಾಕರಿಸಿದ್ದಾರೆ. ಅವರು ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಮತಕ್ಕಾಗಿ ಆಂಧ್ರಪ್ರದೇಶದ ಜನರನ್ನು ಮೂರ್ಖರನ್ನಾಗಿಸಿದ್ದಾರೆ. ಅವರು ರಾಹುಲ್ ಗಾಂಧಿಯಂತೆ ಮತಕ್ಕಾಗಿ ಹಿಂದೂ' ಎಂದು ಆರೋಪಿಸಿದೆ.
ಜತೆಗೆ ಜಗನ್ ಅವರ ಚುನಾವಣಾ ಪ್ರಚಾರ ಸಲಹೆಗಾರರಾಗಿದ್ದ ಪ್ರಶಾಂತ್ ಕಿಶೋರ್ ಅವರನ್ನು ಕೂಡ ಬಿಜೆಪಿ ಇಲ್ಲಿ ಎಳೆದುತಂದಿದೆ. 'ಪ್ರಶಾಂತ್ ಕಿಶೋರ್ ಅವರು ಕಥೆಯನ್ನು ಚೆನ್ನಾಗಿ ಬರೆದಿದ್ದರು. ಇದರಿಂದ ಬಂಗಾಳ ಕೂಡ ಕಲಿಯಬಹುದು' ಎಂದು ಹೇಳಿದೆ. ಪ್ರಶಾಂತ್ ಕಿಶೋರ್ ಅವರು ಈಗ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ನ ಚುನಾವಣಾ ಪ್ರಚಾರ ಸಲಹೆಗಾರರಾಗಿದ್ದಾರೆ.
ಬಿಜೆಪಿ ಸಂಸದ ಸಿಎಂ ರಮೇಶ್, ಜಗನ್ ಮೋಹನ್ ರೆಡ್ಡಿ ಅವರು ಜ್ಯೋತಿ ಬೆಳಗಲು ನಿರಾಕರಿಸಿರುವುದು ಹಿಂದೂಗಳಿಗೆ ಮಾಡಿದ ಅವಮಾನ ಎಂದು ಆರೋಪಿಸಿದ್ದಾರೆ.
ಆದರೆ, ಈ ಆರೋಪಗಳಲ್ಲಿ ಹುರುಳಿಲ್ಲ ಎಂದು ವೈಎಸ್ಆರ್ ಕಾಂಗ್ರೆಸ್ ಹೇಳಿದೆ. ಅಲ್ಲಿನ ದೀಪವನ್ನು ಬೆಂಕಿಕಡ್ಡಿ ಹಚ್ಚಿ ಬೆಳಗುವಂತಿರಲಿಲ್ಲ. ಅದು ವಿದ್ಯುತ್ ದೀಪವಾಗಿತ್ತು. ಆ ಕಟ್ಟಡದಲ್ಲಿ ಸುರಕ್ಷತೆಯ ದೃಷ್ಟಿಯಿಂದ ದೀಪ ಮತ್ತು ಬೆಂಕಿಯ ಬಳಕೆಗೆ ನಿರ್ಬಂಧವಿದೆ. ಹೀಗಾಗಿ ಸಂಘಟಕರು ವಿದ್ಯುದ್ದೀಪವನ್ನೇ ಪರ್ಯಾಯವಾಗಿ ಬಳಸಿದ್ದರು. ದೀಪ ಹಚ್ಚುತ್ತಿರುವಂತೆ ನಟಿಸಿ ಎಂದು ಸಂಘಟಕರು ಕೋರಿದ್ದರು ಎಂದು ಪಕ್ಷ ಸ್ಪಷ್ಟೀಕರಣ ನೀಡಿದೆ.












Click it and Unblock the Notifications