ಕಾಂಗ್ರೆಸ್ಗೆ ದೇಶಭಕ್ತಿ ಇಲ್ಲ, ಅವರಿಂದ ನಾವು ಕಲಿಯಬೇಕಿಲ್ಲ: ಅಮಿತ್ ಶಾ
ರಾಜಮಂಡ್ರಿ (ಆಂಧ್ರಪ್ರದೇಶ), ಫೆಬ್ರವರಿ 21: ಪುಲ್ವಾಮಾ ದಾಳಿಯ ವಿಷಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ, ದಾಳಿ ನಡೆದಾಗ ಮೋದಿ ಅವರು ಕಾರ್ಯಕ್ರಮದಲ್ಲಿದ್ದರು, ಇದನ್ನೇ ಮುಂದೆ ಇರಿಸಿ ಅವರ ದೇಶಪ್ರೇಮವನ್ನು ಪ್ರಶ್ನಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.
ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಜಿಕಲ್ ಸ್ಟ್ರೈಕ್ ನಡೆದ ಸಾಕ್ಷ್ಯ ಕೇಳಿದ ಕಾಂಗ್ರೆಸ್, ಉಗ್ರರು ಸತ್ತಾಗ ಕಣ್ಣೀರು ಹಾಕಿದ್ದ ಕಾಂಗ್ರೆಸ್ ಈಗ ಮೋದಿ ಹಾಗೂ ಬಿಜೆಪಿಯ ದೇಶಪ್ರೇಮ ಪ್ರಶ್ನೆ ಮಾಡುತ್ತಿದೆ ಎಂದು ಶಾ ವ್ಯಂಗ್ಯ ಮಾಡಿದರು.
ಜೆಎನ್ಯುನಲ್ಲಿ ರಾಷ್ಟ್ರವಿರೋಧಿ ಘೋಷಣೆ ಕೂಗಿದಾಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಲ್ಲಿಗೆ ಹೋಗಿ ಅವರಿಗೆ ಬೆಂಬಲ ಕೊಡುತ್ತಾರೆ, ಕಾಂಗ್ರೆಸ್ನ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಪ್ರಧಾನಿಯನ್ನು, ಐಎಸ್ಐ ಮುಖ್ಯಸ್ಥನನ್ನು ತಬ್ಬಿಕೊಳ್ಳುತ್ತಾರೆ, ಭಾರತೀಯ ಸೇನಾಧಿಕಾರಿಯನ್ನು ಗಲ್ಲಿಯ ಗೂಂಡಾ ಎಂದು ಕಾಂಗ್ರೆಸ್ ಅವಮಾನಿಸುತ್ತದೆ, ಇವರಿಗೆ ನಿಜವಾಗಿಯೂ ದೇಶಭಕ್ತಿ ಇದೆಯೇ ಎಂದು ಅವರು ಪ್ರಶ್ನೆ ಮಾಡಿದರು.
ಕಾಶ್ಮೀರ ಸಮಸ್ಯೆಯ ಸೃಷ್ಠಿಕರ್ತರೇ ಕಾಂಗ್ರೆಸ್ ಎಂದ ಅಮಿತ್ ಶಾ, ಜವಾಹರ್ಲಾಲ್ ನೆಹರು ಅವರಿಂದಲೇ ಕಾಶ್ಮೀರಿ ಸಮಸ್ಯೆ ಉದ್ಭವವಾಯಿತು, ಸರ್ದಾರ್ ಪಟೇಲರು ಪ್ರಧಾನಿ ಆಗಿದ್ದರೆ ಆ ಸಮಸ್ಯೆ ಇರುತ್ತಿರಲಿಲ್ಲ, ಸರ್ದಾರ ಪಟೇಲರು ಹೈದರಾಬಾದ್ ಸಮಸ್ಯೆಯನ್ನು ಬುದ್ಧಿವಂತಿಕೆಯಿಂದ ಪರಿಹರಿಸಿದರು, ಇಂದು ಹೈದರಾಬಾದ್ ಗೌರವದಿಂದ ಇದೆ, ಆದರೆ ನೆಹರು ಕಾಶ್ಮೀರ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂದು ಅಮಿತ್ ಶಾ ಹೇಳಿದರು.

ಆಂಧ್ರ ಸಿಎಂಗೆ ಪಾಕ್ ಪ್ರಧಾನಿ ಮೇಲೆ ನಂಬಿಕೆ
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಪಾಕಿಸ್ತಾನದ ಪ್ರಧಾನಿ ಬಗ್ಗೆ ನಂಬಿಕೆ ವ್ಯಕ್ತಪಡಿಸುತ್ತಾರೆ, ಆದರೆ ಅವರಿಗೆ ಭಾರತದ ಪ್ರಧಾನಿ ಮೇಲೆ ಮತ್ತು ಸೈನ್ಯದ ಮೇಲೆ ನಂಬಿಕೆ ಇಲ್ಲ ಎಂದು ಅವರು, ಮೋದಿ ಅವರು ಸೈನ್ಯಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ, ಪಾಕಿಸ್ತಾನದ ಮೇಲೆ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಹೇಳಿದರು.

ನಾಯ್ಡು ಮೋಸ ಮಾಡುವುದಕ್ಕೆ ಖ್ಯಾತರು
ಚಂದ್ರಬಾಬು ನಾಯ್ಡು ಮೋಸ ಮಾಡುವುದಕ್ಕೆ ಬಹುವಾಗಿ ಖ್ಯಾತರು, ಅವರು ಎನ್ಟಿಆರ್ಗೆ ಮೋಸ ಮಾಡಿದರು, ನಂತರ ವಾಜಪೇಯಿ ಅವರಿಗೆ ಮೋಸ ಮಾಡಿದರು, ನಂತರ ಈಗ ಮೋದಿಗೆ ಮೋಸ ಮಾಡಿದ್ದಾರೆ. ರಾಜಕಾರಣದಲ್ಲಿ ಮೋಸ ಮಾಡುವ ಬಗ್ಗೆ ಪರಮೋಚ್ಛ ಗೌರವ ಇದ್ದರೆ ಅದು ಚಂದ್ರಬಾಬು ನಾಯ್ಡುಗೆ ನೀಡಬೇಕು ಎಂದರು.

ಬಿಜೆಪಿ ಆಂಧ್ರಕ್ಕೆ ಸಾಕಷ್ಟು ಕೊಟ್ಟಿದೆ
ಆಂಧ್ರದ ಅಭಿವೃದ್ಧಿಗೆ ಬಿಜೆಪಿ ಅಡ್ಡಗಾಲು ಹಾಕಿದೆ ಎಂದು ನಾಯ್ಡು ಅವರು ಆರೋಪ ಮಾಡಿದ್ದಾರೆ ಆದರೆ, ರಾಜ್ಯ ವಿಭಜನೆ ನಂತರ ಮಾಡಲಾಗಿದ್ದ 14 ಬಿಲ್ಗಳಲ್ಲಿ 10 ಬಿಲ್ಗಳನ್ನು ನಾನು ಕೇವಲ ಐದು ವರ್ಷದಲ್ಲಿ ಪೂರೈಸಿದ್ದೇವೆ, ಅಷ್ಟೆ ಅಲ್ಲದೆ 20 ವೈದ್ಯಕೀಯ ಮತ್ತು ಐಐಟಿ, ಐಐಎಂ ನಂತರ ಶಿಕ್ಷಣ ಸಂಸ್ಥೆಗಳನ್ನು ಆಂಧ್ರಕ್ಕೆ ನೀಡಿದ್ದೇವೆ, ಆವಾಸ್ ಯೋಜನಾ ಮತ್ತು ನರೇಗಾ ಯೋಜನೆಯ ಅತಿ ಹೆಚ್ಚು ಲಾಭ ಪಡೆದಿರುವ ರಾಜ್ಯ ಆಂಧ್ರಪ್ರದೇಶ ಎಂದು ಅವರು ಹೇಳಿದರು.

'ವಿಭಜನೆ ಮಾಡಿದ ಕಾಂಗ್ರೆಸ್ ಜೊತೆ ನಾಯ್ಡು ದೋಸ್ತಿ'
ಆಂಧ್ರ ರಾಜ್ಯದ ಅನ್ಯಾಯದ ವಿಭಜನೆಗೆ ಕಾರಣವಾದ ಕಾಂಗ್ರೆಸ್ ಜೊತೆಗೆ ನಾಯ್ಡು ಅವರು ಗುರುತಿಸಿಕೊಳ್ಳುತ್ತಿದ್ದಾರೆ, ಎನ್ಟಿಆರ್ ರವರು ಇದೇ ಕಾಂಗ್ರೆಸ್ಗೆ ವಿರುದ್ಧವಾಗಿ ಅಂದು ಹೋರಾಟ ಮಾಡಿದ್ದರು ಆದರೆ ಇಂದು ಚಂದ್ರಬಾಬು ನಾಯ್ಡು ಅವರು ಅದೇ ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

'ನಾಯ್ಡು ತಮ್ಮ ಪಕ್ಷದ ವಿರುದ್ಧವೇ ಪ್ರತಿಭಟನೆ ಮಾಡಲಿ'
ಚಂದ್ರಬಾಬು ನಾಯ್ಡು ಅವರು ಬಂಗಾಳ, ದೆಹಲಿ, ಕರ್ನಾಟಕ ಎಲ್ಲಾ ಕಡೆ ಹೋಗಿ ಧರಣಿ ಕೂರುತ್ತಿದ್ದಾರೆ, ಆದರೆ ಅವರು ತಮ್ಮ ಪಕ್ಷದ ಕಚೇರಿ ಎದುರೇ ಪ್ರತಿಭಟನೆ ಮಾಡಬೇಕು, ಏಕೆಂದರೆ ಆಂಧ್ರಪ್ರದೇಶದ ಅಭಿವೃದ್ಧಿಯನ್ನು ಕಡೆಗಣಿಸಿರುವುದು ತಮ್ಮದೇ ಪಕ್ಷದ ಸರ್ಕಾರ ಎಂದು ಶಾ ಟಾಂಗ್ ನೀಡಿದರು. ಕೇಂದ್ರ ಸಾಕಷ್ಟು ಅನುದಾನ ನೀಡಿದೆ ಆದರೆ ಅದು ಜನರಿಗೆ ತಲುಪಿಸಿಲ್ಲ ಎಂದು ಶಾ ವಾಗ್ದಾಳಿ ನಡೆಸಿದರು.

ಜಗನ್ಮೋಹನ್ ರೆಡ್ಡಿ, ನಾಯ್ಡು ಇಬ್ಬರೂ ಭ್ರಷ್ಟರು
ಆಂಧ್ರದ ಅಭಿವೃದ್ಧಿ ಚಂದ್ರಬಾಬು ನಾಯ್ಡು ಮತ್ತು ಜಗನ್ಮೋಹನ್ ರೆಡ್ಡಿ ಇಬ್ಬರಿಂದಲೂ ಸಾಧ್ಯವಿಲ್ಲ, ಇಬ್ಬರೂ ಸಹ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕೀಯದಲ್ಲಿ ನಂಬಿಕೆ ಇಟ್ಟವರು. ಆಂಧ್ರದ ಅಭಿವೃದ್ಧಿ ಮೋದಿ ಅವರಿಂದ ಹಾಗೂ ಅವರ ನೇತೃತ್ವದ ಬಿಜೆಪಿ ಪಕ್ಷದಿಂದ ಮಾತ್ರವೇ ಸಾಧ್ಯ ಎಂದು ಶಾ ಹೇಳಿದರು.












Click it and Unblock the Notifications