ಅನೇಕ ದೇಶಗಳಲ್ಲಿ ಕಾಣಿಸಿಕೊಂಡಿದ್ದ ನಿಗೂಢ ಏಕಶಿಲೆ ಈಗ ಭಾರತದಲ್ಲಿಯೂ ಪ್ರತ್ಯಕ್ಷ!
ಅಹಮದಾಬಾದ್, ಡಿಸೆಂಬರ್ 31: ಜಗತ್ತಿನ ಸುಮಾರು 30 ಸ್ಥಳಗಳಲ್ಲಿ ವಿಸ್ಮಯಕಾರಿ ರೀತಿಯಲ್ಲಿ ಕಾಣಿಸಿಕೊಂಡು ನಾಪತ್ತೆಯಾಗಿದ್ದ 'ನಿಗೂಢ ಏಕಶಿಲೆ' ಈಗ ಗುಜರಾತ್ನ ಅಹಮದಾಬಾದ್ನಲ್ಲಿರುವ ಸಾರ್ವಜನಿಕ ಉದ್ಯಾನವೊಂದಲ್ಲಿ ಪ್ರತ್ಯಕ್ಷವಾಗಿದೆ.
ಅಹಮದಾಬಾದ್ನಲ್ಲಿ ಪತ್ತೆಯಾಗಿರುವ ಲೋಹದಿಂದ ಮಾಡಿದ ಶಿಲೆಯು ಸುಮಾರು ಆರು ಅಡಿ ಎತ್ತರವಿದೆ. ಭಾರತದಲ್ಲಿ ಇಂತಹ ನಿಗೂಢ ಏಕಶಿಲೆ ಕಾಣಿಸಿಕೊಂಡಿರುವುದು ಇದೇ ಮೊದಲು. ಅಹಮದಾಬಾದ್ನ ತಲ್ತೇಜ್ ಪ್ರದೇಶದಲ್ಲಿನ ಸಿಂಫೋನಿ ಪಾರ್ಕ್ನಲ್ಲಿ ಈ ವಿಸ್ಮಯಕಾರಿ ರಚನೆ ಕಾಣಿಸಿಕೊಂಡು ಬೆರಗು ಮೂಡಿಸಿದೆ.
ವಿಚಿತ್ರವೆಂದರೆ ಈ ಏಕಶಿಲೆ ಅಲ್ಲಿಗೆ ಹೇಗೆ ಮತ್ತು ಯಾವಾಗ ಬಂತು ಎನ್ನುವುದು ಯಾರಿಗೂ ತಿಳಿದಿಲ್. ಈ ಲೋಹದ ರಚನೆಯನ್ನು ನೆಲದಲ್ಲಿ ಹುಗಿದಂತೆ ಇರಿಸಲಾಗಿದೆ. ಆದರೆ ಭೂಮಿಯನ್ನು ಅಗೆದ ಯಾವ ಕುರುಹೂ ಇಲ್ಲ. ಉದ್ಯಾನದ ಮಾಲಿ ಆಸರಾಮ್ಗೆ ಕೂಡ ಈ ಲೋಹದ ಮೂಲದ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಈ ಏಕಶಿಲೆ ಈ ಹಿಂದೆ ಇರಲಿಲ್ಲ. ಹಾಗೆಯೇ ಅದನ್ನು ಅಲ್ಲಿಗೆ ಯಾರೂ ತಂದು ನಿಲ್ಲಿಸಿದ್ದನ್ನು ತಾನು ಕಂಡಿಲ್ಲ ಎಂದು ಆತ ತಿಳಿಸಿದ್ದಾನೆ. ಮುಂದೆ ಓದಿ.

ಮನೆಗೆ ಹೋಗುವಾಗ ಇರಲಿಲ್ಲ
'ನಾನು ಸಂಜೆ ಮನೆಗೆ ಹೋರಡುವಾಗ ಅಲ್ಲಿ ಏನೂ ಇರಲಿಲ್ಲ. ಆದರೆ ಮರುದಿನ ಬೆಳಿಗ್ಗೆ ಕೆಲಸಕ್ಕೆ ಮರಳಿದಾಗ ಈ ರಚನೆಯನ್ನು ಕಂಡು ಅಚ್ಚರಿಯಾಯಿತು' ಎಂದು ಹೇಳಿದ್ದಾನೆ. ಅದನ್ನು ಕಂಡ ಕೂಡಲೇ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾನೆ.

30ಕ್ಕೂ ಹೆಚ್ಚು ಕಡೆ ಪ್ರತ್ಯಕ್ಷ
ಈ ನಿಗೂಢ ಏಕಶಿಲೆಯು ತ್ರಿಭುಜಾಕೃತಿಯಲ್ಲಿದ್ದು, ಅದರ ಮೇಲೆ ಕೆಲವು ಸಂಖ್ಯೆ ಹಾಗೂ ಸಂಕೇತಗಳಿವೆ. ಇದು ಹೇಗೆ ಬಂತು ಎಂದು ಮೂಲದ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. ಇದೇ ರೀತಿಯ ಏಕಶಿಲೆ ಮೊದಲ ಬಾರಿ ಅಮೆರಿಕದ ಉಟಾಹ್ನ ಮರುಭೂಮಿಯಲ್ಲಿ ಕಾಣಿಸಿಕೊಂಡಿತ್ತು. ಬಳಿಕ ಅಲ್ಲಿಂದ ಮಾಯವಾಗಿತ್ತು. ಬಳಿಕ ರೊಮೇನಿಯಾ, ಫ್ರಾನ್ಸ್, ಪೊಲ್ಯಾಂಡ್, ಬ್ರಿಟನ್ ಮತ್ತು ಕೊಲಂಬಿಯಾ ಸೇರಿದಂತೆ ಸುಮಾರು 30 ಕಡೆ ಪ್ರತ್ಯಕ್ಷವಾಗಿತ್ತು.

ಖಾಸಗಿ ಸಂಸ್ಥೆಯಿಂದ ರಚನೆ
ಆದರೆ ಅದು ಬೇರೆ ದೇಶಗಳಲ್ಲಿ ಕಂಡಿರುವ ನಿಗೂಢ ಏಕಶಿಲೆಯಂತೆ ಅಲ್ಲ. ಈ ಉದ್ಯಾನವನ್ನು ಅಭಿವೃದ್ಧಿಪಡಿಸಿದ ಮತ್ತು ನಿಭಾಯಿಸುತ್ತಿರುವ ಖಾಸಗಿ ಸಂಸ್ಥೆಯವರು ಈ ತ್ರಿಭುಜಾಕೃತಿಯ ರಚನೆಯನ್ನು ಸ್ಥಾಪಿಸಿದೆ ಎಂದು ಅಹಮದಾಬಾದ್ ಮುನಿಸಿಪಲ್ ಪಾಲಿಕೆಯ ಉದ್ಯಾನಗಳ ಸಹಾಯಕ ನಿರ್ದೇಶಕ ದಿಲೀಪ್ ಭಾಯ್ ಪಟೇಲ್ ತಿಳಿಸಿದ್ದಾರೆ.

ಜೀವನ-ಸೌಂದರ್ಯದ ಸಂಕೇತ
ಈ ಆಕೃತಿಯಲ್ಲಿನ ಸಂಖ್ಯೆ ಮತ್ತು ಸಂಕೇತಗಳು ಜೀವನ ಹಾಗೂ ಸೌಂದರ್ಯದ ಕುರಿತಾದ ಸಂಭಾಷಣೆಗಳನ್ನು ಪ್ರತಿನಿಧಿಸುತ್ತವೆ ಎಂದು ಅದರ ಕಲಾವಿದರು ತಿಳಿಸಿದ್ದಾರೆ. ಸಿಂಧು ಭವನ್ ರಸ್ತೆ ಸಮೀಪ ಇರುವ ಈ ಉದ್ಯಾನವನ್ನು ಮೂರು ತಿಂಗಳ ಹಿಂದೆ ಪೂರ್ಣಗೊಳಿಸಲಾಗಿತ್ತು. ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ಉದ್ಯಾನವನ್ನು ಉದ್ಘಾಟಿಸಿದ್ದರು.












Click it and Unblock the Notifications