ನಮ್ಮ ಸೇನೆ ಹೇಳಿದನ್ನೂ ನೀವು ನಂಬುವುದಿಲ್ಲವೇ? ಮೋದಿ ಪ್ರಶ್ನೆ
ಜಾಮ್ನಾನಗರ(ಗುಜರಾತ್), ಮಾರ್ಚ್ 04: "ನಮ್ಮ ಸೇನೆ ಹೇಳಿದ್ದನ್ನೂ ನೀವು ನಂಬುವುದಿಲ್ಲವೇ?" ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ಟಾಂಗ್ ನೀಡುವಂತೆ ಜನರನ್ನು ಪ್ರಶ್ನಿಸಿದರು.
ಗುಜರಾತಿನ ಜಾಮ್ನಾನಗರದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಮೋದಿ, ಭಯೋತ್ಪಾದನೆ ದಮನವಾಗಬೇಕು ಎಂದು ಇಡೀ ದೇಶವೂ ಹೇಳುತ್ತಿದೆ. ನಮ್ಮ ವಾಯುಸೇನೆಯು ಉಗ್ರ ನೆಲೆಯ ಮೇಲೆ ದಾಳಿ ನಡೆಸಿದೆ ಎಂದರೆ ಕೆಲವರು ಅದನ್ನು ನಂಬುವುದಕ್ಕೆ ತಯಾರಿಲ್ಲ. ನಮ್ಮ ಮಾತನ್ನು ನಂಬದಿದ್ದರೆ ಬೇಡ, ನೀವು ನಮ್ಮ ಸೈನಿಕರ ಮಾತನ್ನೂ ನಂಬುವುದಿಲ್ಲವೇ? ನಮ್ಮ ಸೇನೆಯ ಬಗ್ಗೆ ನಮ್ಮಲ್ಲಿ ಹೆಮ್ಮೆ ಇರಬೇಕು" ಎಂದು ಮೋದಿ ಹೇಳಿದರು.
ಫೆಬ್ರವರಿ 14 ರಂದು ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ಆದಿಲ್ ದಾರ್, ಸಿಆರ್ ಪಿಎಫ್ ಯೋಧರಿದ್ದ ವಾಹನದ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ಒಟ್ಟು 44 ಯೋಧರು ಮೃತರಾಗಿದ್ದರು. ಈ ದಾಳಿಗೆ ಪ್ರತಿಕ್ರಿಯೆ ಎಂಬಂತೆ ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಉಗ್ರನೆಲೆಯ ಮೇಲೆ ಭಾರತ ದಾಳಿ ನಡೆಸಿತ್ತು. ಆದರೆ ಈ ದಾಳಿ ನಡೆದಿದ್ದೇ ಸುಳ್ಳು, ಭಾರತ ಸುಳ್ಳು ಹೇಳುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿತ್ತು.

ಪಾಕಿಸ್ತಾನ ಮಾತ್ರವಲ್ಲ, ಭಾರತದಲ್ಲೂ ಕೆಲವು ವಿರೋಧಪಕ್ಷಗಳು ಮತ್ತು ಮೋದಿ ವಿರೋಧಿಗಳು ಈ ದಾಳಿ ನಡೆದಿದ್ದೇ ಸುಳ್ಳು ಎಂದಿದ್ದವು. ಇದೀಗ ವಾಯುಸೇನೆಯೇ ತಾನು ಏರ್ ಸ್ಟ್ರೈಕ್ ನಡೆಸಿದ್ದನ್ನು ಸ್ಪಷ್ಟಪಡಿಸಿದೆ.












Click it and Unblock the Notifications