ಕಾಂಗ್ರೆಸ್ಗಿಂತ ಆಪ್, ಬಿಜೆಪಿ ಉತ್ತಮ ಎಂದ ಹಾರ್ದಿಕ್ ಪಟೇಲ್
ಅಹಮದಾಬಾದ್, ಮೇ 25: ವಾರದ ಹಿಂದಷ್ಟೇ ಕಾಂಗ್ರೆಸ್ ತೊರೆದಿದ್ದ ಗುಜರಾತ್ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಹಾರ್ದಿಕ್ ಪಟೇಲ್ ನೀಡಿರುವ ಹೇಳಿಕೆ ಅವರು ಬಿಜೆಪಿಗೆ ಸೇರುವುದು ಖಚಿತ ಎನ್ನುವುದಕ್ಕೆ ಸಾಕ್ಷಿ ಎಂಬಂತಿದೆ.
ಕೆಲವೇ ತಿಂಗಳಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ಇದೆ. ಹಾರ್ದಿಕ್ ಪಟೇಲ್ ಮುಂದಿನ ರಾಜಕೀಯ ನಡೆ ಬಗ್ಗೆ ಇನ್ನೂ ಯಾವುದೇ ಅಧಿಕೃತ ನಿರ್ಧಾರ ತೆಗೆದುಕೊಳ್ಳದಿದ್ದರೂ, ಬಿಜೆಪಿ ಅವರ ಮುಂದಿನ ಆಯ್ಕೆ ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.
ಬಿಜೆಪಿಗೆ ಹಾರ್ದಿಕ್ ಪಟೇಲ್ ದುಷ್ಮನ್ ಕಾ ದುಷ್ಮನ್, 'ದೋಸ್ತ್'
ಈ ನಡುವೆ ಪತ್ರಕರ್ತರೊಬ್ಬರು ಬಿಜೆಪಿಗೆ ಸೇರುತ್ತೀರಾ? ಎಂದು ಪ್ರಶ್ನಿಸಿದ ವೇಳೆ "ಯಾಕಾಗಬಾರದು?" ಎಂದು ಉತ್ತರ ನೀಡಿದ್ದಾರೆ. ಅಲ್ಲದೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಏಳನೇ ಬಾರಿಗೆ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳುವ ಮೂಲಕ ಬಿಜೆಪಿ ಸೇರುವ ಸೂಚನೆ ನೀಡಿದ್ದಾರೆ.
ಕೈ ನಾಯಕರಿಗೆ 'ಚಿಕನ್ ಸ್ಯಾಂಡ್ವಿಚ್' ಎಂದು ಕೆಣಕಿದ ಹಾರ್ದಿಕ್ ಪಟೇಲ್
ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದ ಪಟೇಲ್
"ಚುನಾವಣೆ ಸಂದರ್ಭದಲ್ಲಿ ನಾನು ಪ್ರಮುಖ ಪಾತ್ರ ವಹಿಸುತ್ತೇನೆ" ಎಂದು ಹೇಳಿರುವ ಹಾರ್ದಿಕ್ ಪಟೇಲ್ ಮುಂದಿನ ನಡೆ ಏನೆಂದು ಹೇಳುವುದಾಗಿ ತಿಳಿಸಿದ್ದಾರೆ. ಪಾಟಿದಾರ್ ಸಮುದಾಯದ ನಾಯಕನಾಗಿರುವ ಹಾರ್ದಿಕ್ ಪಟೇಲ್ ಇದುವರೆಗೂ ಮುಂದಿನ ರಾಜಕೀಯ ನಡೆ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ.
"ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ, ಸ್ನೇಹಿತರು, ಹಿತೈಷಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಜನರಿಗೆ ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೇನೆ. ನನ್ನ ಉದ್ದೇಶ ಜನಗಳ ಜೊತೆ ಇರುವುದು ಜನರಿಗೆ ಅನುಕೂಲವಾಗುವಂತೆ ಆಯ್ಕೆಗಳನ್ನು ಮಾಡುವುದು" ಎಂದು ಹೇಳಿದ್ದಾರೆ.
ಯುವಕರಿಗೆ ಕಿರುಕುಳ ನೀಡಬಾರದು
"ಬಿಜೆಪಿಗೆ ಸೇರಲು ಅವರ ವಿರುದ್ಧ2015 ರಲ್ಲಿ ಪಾಟಿದಾರ್ ಆಂದೋಲನದ ಸಮಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಷರತ್ತು ಹಾಕುವುದಿಲ್ಲ. ಆದರೆ ಸಮುದಾಯದ ಯುವಕರ ವಿರುದ್ಧ ಹಾಕಿರುವ ಪ್ರಕರಣ ಹಿಂಪಡೆಯಬೇಕು, ಅವರು ತಮಗಾಗಿ ಬಂದಿಲ್ಲ, ಅವರಿಗೆ ಕಿರುಕುಳ ನೀಡಬಾರದು" ಎಂದಿದ್ದಾರೆ.
ಕಳೆದ ವಾರ ಕಾಂಗ್ರೆಸ್ ತೊರೆದ ನಂತರ ಮಾತನಾಡಿದ್ದ ಹಾರ್ದಿಕ್ ಪಟೇಲ್, "ನಾನು ಬಿಜೆಪಿಯಲ್ಲಿಲ್ಲ, ಬಿಜೆಪಿ ಸೇರಲು ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ" ಎಂದು ಹೇಳಿದ್ದರು. ಈ ವರ್ಷ ಪಂಜಾಬ್ನಲ್ಲಿ ಕಾಂಗ್ರೆಸ್ ಸೋಲಿಸಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷಕ್ಕೆ ಸೇರುವ ಆಯ್ಕೆಯೂ ಪಟೇಲ್ಗೆ ಇದೆ.
ಕಾಂಗ್ರೆಸ್ಗಿಂದ ಆಪ್ ಉತ್ತಮವಾಗಿದೆ
ಉತ್ತಾರಖಂಡ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ನಿರಾಶಾದಾಯಕ ಫಲಿತಾಂಶ ಬಂದರೂ, 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.
"ಎಎಪಿ ಚುನಾವಣಾ ತಂತ್ರವು ಖಂಡಿತವಾಗಿಯೂ ಕಾಂಗ್ರೆಸ್ಗಿಂತ ಉತ್ತಮವಾಗಿದೆ. ಕಾಂಗ್ರೆಸ್ಗೆ ಈ ವಿಚಾರವನ್ನು ಅರ್ಥ ಮಾಡಿಸಲು ನನಗೆ ಆಗಲಿಲ್ಲ" ಎಂದು ಕಾಂಗ್ರೆಸ್ ವಿರುದ್ಧ ಅಸಹನೆಯನ್ನು ಪಟೇಲ್ ವ್ಯಕ್ತಪಡಿಸಿದ್ದಾರೆ.
"ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿರುವುದು, ಗುಜರಾತ್ ರಾಜ್ಯದ ಜನರೊಂದಿಗೆ ಕಾಂಗ್ರೆಸ್ ಸಂಪರ್ಕ ಸಾಧಿಸುವ ಚುನಾವಣಾ ತಂತ್ರದಲ್ಲಿ ತಪ್ಪು ಲೆಕ್ಕಾಚಾರಗಳಿಂದ ಗುಜರಾತ್ನಲ್ಲಿ ಕಾಂಗ್ರೆಸ್ ಸೋತಿತು" ಎಂದು ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ಸಮರ್ಥ ನಾಯಕತ್ವ ಇಲ್ಲ
ಪಕ್ಷ ತೊರೆದ ವೇಳೆಯೂ ಈ ವಿಚಾರಗಳನ್ನು ಪ್ರಸ್ತಾಪಿಸಿದ್ದ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಹಿರಿಯ ನಾಯಕರ ವರ್ತನಗೆ ಆಕ್ರೋಶ ವ್ಯಕ್ತಪಡಿಸಿದ್ದರು. "ಕಾಂಗ್ರೆಸ್ಗೆ ಸ್ಪಷ್ಟವಾದ ಮಾರ್ಗಸೂಚಿ ಇರಲಿಲ್ಲ. ಗುಜರಾತ್ ಮತ್ತು ಗುಜರಾತಿ ಜನರನ್ನು ದ್ವೇಷಿಸುವ ರೀತಿ ವರ್ತಿಸುತ್ತಿದೆ" ಎಂದು ಹೇಳಿದ್ದರು. "ದೇಶದಲ್ಲಿ ಸವಾಲಿನ ಪರಿಸ್ಥಿತಿ ಇದ್ದಾಗ ಕಾಂಗ್ರೆಸ್ಗೆ ಉತ್ತಮ ನಾಯಕತ್ವದ ಅಗತ್ಯವಿದ್ದಾಗ ಕಾಂಗ್ರೆಸ್ ನಾಯಕರು ವಿದೇಶದಲ್ಲಿ ಆನಂದಿಸುತ್ತಿದ್ದರು" ಎಂದು ಹೇಳಿದ್ದಾರೆ
ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಪ್ ಚುನಾವಣೆ ಭವಿಷ್ಯದ ಬಗ್ಗೆ ಕೇಳಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಆದರೆ ಮುಂದಿನ ಚುನಾವಣೆಯಲ್ಲಿ ಗುಜರಾತ್ನಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತದೆ ಎಂದು ಹೇಳಿದ್ದಾರೆ.