ಗುಜರಾತ್ ಸರ್ಕಾರದ ವಿವಾದಾತ್ಮಕ ಭಯೋತ್ಪಾದನಾ ನಿಗ್ರಹ ಕಾನೂನಿಗೆ ರಾಷ್ಟ್ರಪತಿ ಒಪ್ಪಿಗೆ
ಅಹಮದಾಬಾದ್, ನವೆಂಬರ್ 5: ಗುಜರಾತ್ ಸರ್ಕಾರದ ವಿವಾದಾತ್ಮಕ 'ಗುಜರಾತ್ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಯಂತ್ರಣ ಮಸೂದೆಗೆ (ಜಿಸಿಟಿಓಸಿ) ಕೊನೆಗೂ ರಾಷ್ಟ್ರಪತಿಗಳ ಅನುಮೋದನೆ ದೊರಕಿದೆ.
2015ರ ಮಾರ್ಚ್ನಲ್ಲಿ ಗುಜರಾತ್ನ ಬಿಜೆಪಿ ಸರ್ಕಾರ ಭಯೋತ್ಪಾದನಾ ನಿಗ್ರಹದ ಸಂಬಂಧ ವಿಧಾನಸಭೆಯಲ್ಲಿ ಅನುಮೋದನೆ ಪಡೆದ ಈ ಮಸೂದೆ ಭಾರಿ ವಿವಾದ ಸೃಷ್ಟಿಸಿತ್ತು. ಅದಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಒಪ್ಪಿಗೆ ನೀಡಿದ್ದಾರೆ.
ದೂರವಾಣಿ ಸಂಭಾಷಣೆಯನ್ನೂ ಪ್ರಮುಖ ಸಾಕ್ಷ್ಯವನ್ನಾಗಿ ಪರಿಗಣಿಸುವುದು ಈ ಹೊಸ ಕಾಯ್ದೆಯಲ್ಲಿನ ಅಂಶಗಳಲ್ಲಿ ಒಂದಾಗಿದೆ. ಈ ಕಾಯ್ದೆಗೆ ರಾಷ್ಟ್ರಪತಿಗಳ ಅನುಮೋದನೆ ದೊರಕಿದೆ ಎಂದು ಗುಜರಾತ್ ಗೃಹ ಸಚಿವ ಪ್ರದೀಪ್ಸಿನ್ಹ ಜಡೇಜಾ ಗಾಂಧಿನಗರದಲ್ಲಿ ಮಂಗಳವಾರ ಪ್ರಕಟಿಸಿದರು.

ಆರಂಭದಲ್ಲಿ 'ಗುಜರಾತ್ ಸಂಘಟಿತ ಅಪರಾಧಗಳ ನಿಯಂತ್ರಣ ಮಸೂದೆ' (ಜಿಯುಜೆಸಿಓಸಿ) ಎಂದು ಕರೆಯಲಾಗಿದ್ದ ಈ ಮಸೂದೆಯನ್ನು 2004ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಲಾಗಿತ್ತು. ಅಲ್ಲಿಂದ ಮೂರು ಬಾರಿ ರಾಷ್ಟ್ರಪತಿಗಳ ಅನುಮೋದನೆ ಪಡೆಯುವ ಪ್ರಯತ್ನ ವಿಫಲವಾಗಿತ್ತು.
2015ರಲ್ಲಿ ಈ ಮಸೂದೆಯನ್ನು ಜಿಸಿಟಿಓಸಿ ಎಂದು ಮರುನಾಮಕರಣ ಮಾಡಿ ಪುನಃ ಮಂಡನೆ ಮಾಡಿದ್ದ ಗುಜರಾತ್ ಸರ್ಕಾರ ಅದಕ್ಕೆ ಅನುಮೋದನೆ ಪಡೆದುಕೊಂಡಿತ್ತು. ಆದರೆ ದೂರವಾಣಿ ಸಂಭಾಷಣೆಯನ್ನು ಟ್ಯಾಪ್ ಮಾಡಿ ಅದನ್ನು ನ್ಯಾಯಾಲಯಕ್ಕೆ ಪ್ರಮುಖ ಸಾಕ್ಷ್ಯವನ್ನಾಗಿ ಸಲ್ಲಿಸಲು ಪೊಲೀಸರಿಗೆ ಅನುಮತಿ ನೀಡುವ ವಿವಾದಾತ್ಮಕ ಅಂಶವನ್ನು ಕೈಬಿಟ್ಟಿರಲಿಲ್ಲ.
ಭಯೋತ್ಪಾದನೆ, ಕೊಲೆ, ವಂಚನೆ ಯೋಜನೆಗಳು, ಮಾದಕ ಪದಾರ್ಥಗಳ ಮಾರಾಟ, ಸುಲಿಗೆ ಜಾಲದಂತಹ ಸಂಘಟಿತ ಅಪರಾಧ ಪ್ರಕರಣಗಳಲ್ಲಿ ಈ ಮಸೂದೆ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ. ಈ ಮಸೂದೆಯನ್ನು ಜಾರಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಕೊನೆಗೂ ಸಾಕಾರಗೊಂಡಿದೆ ಎಂದು ಜಡೇಜಾ ಹೇಳಿದ್ದಾರೆ.












Click it and Unblock the Notifications