ದಟ್ಟಾರಣ್ಯವಾಸಿ ಏಕೈಕ ಮತದಾರ, ಆತನಿಗೊಂದು ಮತಗಟ್ಟೆ
ಜುನಾಗಢ, ಏಪ್ರಿಲ್ 23: ಜುನಾಗಢದ ಗಿರ್ಅರಣ್ಯ ಪ್ರದೇಶದಲ್ಲಿ ಆಗಾಗ ಕೇಳಿ ಬರುವ ಸಿಂಹ ಘರ್ಜನೆಯ ನಡುವೆ ಕೂಡಾ ಇಂದು ಮತದಾನ ಯಶಸ್ವಿಯಾಗಿದೆ. ಅರಣ್ಯವಾಸಿಯಾಗಿರುವ ಏಕೈಕ ಮತದಾರನಿಗಾಗಿ ಇಲ್ಲಿ ಮತಗಟ್ಟೆಯನ್ನು ತೆರೆಯಲಾಗಿತ್ತು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
'No one is left behind' ಎಂಬ ಧ್ಯೇಯದೊಂದಿಗೆ ಚುನಾವಣೆ ಪ್ರಕ್ರಿಯೆ ನಡೆಸುತ್ತಿರುವ ಚುನಾವಣಾ ಆಯೋಗವು ಗಿರ್ ಅರಣ್ಯ ಪ್ರದೇಶದಲ್ಲಿ ಏಕೈಕ ಮತದಾರನಿಗಾಗಿ ಮತಗಟ್ಟೆ ಹಾಗೂ ಸಮುದ್ರ ನಡುವೆ ಇರುವ ನಡುಗಡ್ಡೆಯಲ್ಲಿರುವ 40 ಮಂದಿಗಾಗಿ ವಿಶೇಷ ಮತಗಟ್ಟೆಯನ್ನು ಸ್ಥಾಪಿಸಿದ್ದು ವಿಶೇಷ.
ಗಿರ್ ಅರಣ್ಯ ಪ್ರದೇಶದ ಮತಗಟ್ಟೆಯಲ್ಲಿ ಮತದಾನ ಮಾಡಿದ ವ್ಯಕ್ತಿಯ ಹೆಸರು ಭರತ್ ದಾಸ್ ಬಾಪು. ದಟ್ಟಾರಣ್ಯದ ನಡುವೆ ಇರುವ ಪುರಾಣ ಪ್ರಸಿದ್ಧ ಬನೇಜ್ ದೇಗುಲದ ಬಳಿ ಈ ಮತಗಟ್ಟೆ ಸ್ಥಾಪಿಸುವುದು ಕಷ್ಟಕರವಾಗಿತ್ತು.
ಮಹಾಂತ ಭರತ್ ದಾಸ್ ದರ್ಶನ್ ದಾಸ್
ಈ ದೇಗುಲದ ಅರ್ಚಕರಾದ 62 ವರ್ಷ ವಯಸ್ಸಿನ ಮಹಾಂತ ಭರತ್ ದಾಸ್ ದರ್ಶನ್ ದಾಸ್ ಅವರು ಈ ದೇಗುಲಕ್ಕೆ ಮಹಾಭಾರತ ಕಾಲದ ನಂಟಿದೆ ಎಂದಿದ್ದಾರೆ. ಈ ಮತಗಟ್ಟೆಯಲ್ಲದೆ ಜಾಮ್ ನಗರದ ಓಖಾ ಕರಾವಳಿಯಿಂದ 30 ಕಿ.ಮೀ ದೂರದ ಸಮುದ್ರ ಮಧ್ಯ ಕಾಣಿಸುವ ಅಜಾದ್ ದ್ವೀಪದಲ್ಲಿ ಮತಗಟ್ಟೆ ಸ್ಥಾಪಿಸಿ, ಅಲ್ಲಿನ 40 ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಅನುವು ಮಾಡಿಕೊಳ್ಳಲಾಯಿತು.
ಇಲ್ಲಿ ಶೇ. ನೂರಕ್ಕೆ ನೂರು ಮತದಾನ
ಭರತ್ದಾಸ್ಅವರು ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಒಂದು ವೋಟ್ಗಾಗಿ ಸರ್ಕಾರ ಸಾಕಷ್ಟು ಹಣವನ್ನು ವ್ಯಯಿಸಿದೆ. ನಾನು ಮತ ಚಲಾಯಿಸುವ ಮೂಲಕ ಇಲ್ಲಿ ಶೇ. ನೂರಕ್ಕೆ ನೂರು ಮತದಾನ ಮಾಡಿದಂತಾಗಿದೆ. ಇದೇ ರೀತಿ ಎಲ್ಲೆಡೆ ಮತದಾನವಾಗಬೇಕು. ಎಲ್ಲರಿಗೂ ನಾನು ಮನವಿ ಮಾಡಿಕೊಳ್ಳುತ್ತೇನೆ ಹೋಗಿ ಮತ ಚಲಾಯಿಸಿ ಎಂದು ಹೇಳಿದ್ದಾರೆ.
400ಕ್ಕೂ ಅಧಿಕ ವಿಶೇಷ ಮತಗಟ್ಟೆಗಳು
ಗುಜರಾತಿನಲ್ಲಿ 51,851 ಮತಗಟ್ಟೆಗಳ ಪೈಕಿ 400ಕ್ಕೂ ಅಧಿಕ ಮತಗಟ್ಟೆಗಳು ಒಂದಿಲ್ಲೊಂದು ರೀತಿಯಲ್ಲಿ ವಿಶೇಷವೆನಿಸಿವೆ. ಗುಜರಾತಿನ 4 ಕೋಟಿಗೂ ಅಧಿಕ ಮತದಾರರು 371 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಜೊತೆಗೆ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಕಣದಲ್ಲಿ 45 ಅಭ್ಯರ್ಥಿಗಳಿದ್ದಾರೆ.
|
ಮೇ 23ರಂದು ಫಲಿತಾಂಶ
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸ್ಪರ್ಧಿಸಿರುವ ಗಾಂಧಿನಗರ ಜೊತೆಗೆ ಕಛ್, ಬನಸ್ಕಾಂತಾ, ಪಟಾಣ್, ಮಹೆಸಾನಾ, ಸಬರ್ಕಾಂತಾ, ಅಹಮದಾಬಾದ್ ಪೂರ್ವ, ಅಹಮದಾಬಾದ್ ಪಶ್ಚಿಮ, ಸುರೇಂದ್ರನಗರ್, ರಾಜ್ ಕೋಟ್, ಪೋರ್ ಬಂದರ್, ಜಾಮ್ನ್ ನಗರ್, ಜುನಾಗಢ, ಅಮ್ರೇಲಿ, ಭಾವ್ ನಗರ್, ಆನಂದ್, ಖೇಡಾ, ಪಂಚ್ ಮಹಲ್, ದಹೋದ್, ವಡೋದರಾ, ಉದಯಪುರ್, ಬರೂಚ್, ಬರ್ದೋಲಿ, ಸೂರತ್, ನವ್ಸಾರಿ, ವಲ್ಸದ್ ಕ್ಷೇತ್ರಗಳಲ್ಲಿ ಮತದಾನ ನಡೆಸಲಾಗಿದೆ. ಮೇ 23ರಂದು ಫಲಿತಾಂಶ ಹೊರಬರಲಿದೆ.