ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಜನರಲ್ಲಿ ಪ್ರಧಾನಿ ಮನವಿ
ಅಹಮದಾಬಾದ್, ಡಿಸೆಂಬರ್ 31: ವಿಶ್ವದ ಬೃಹತ್ ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ಭಾರತ ಸಜ್ಜಾಗುತ್ತಿದೆ. ಈ ಸಮಯದಲ್ಲಿ ಯಾವುದೇ ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಜನರಲ್ಲಿ ಮನವಿ ಮಾಡಿದ್ದಾರೆ.
ಗುಜರಾತ್ ನ ರಾಜಾಕೋಟ್ ನಲ್ಲಿನ ಏಮ್ಸ್ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಸಂದರ್ಭ ಮಾತನಾಡಿದ ಪ್ರಧಾನಿ ಮೋದಿ, "ಭಾರತದಲ್ಲಿ ಪ್ರಸ್ತುತ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ನಾವು ಮುಂಬರುವ ವರ್ಷದಲ್ಲಿ ವಿಶ್ವದ ಬೃಹತ್ ಲಸಿಕಾ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದೇವೆ" ಎಂದು ತಿಳಿಸಿದರು.
"ಆರೋಗ್ಯವೇ ಸಂಪತ್ತು ಎಂಬುದನ್ನು ಎಲ್ಲರಿಗೂ 2020 ಬಹಳ ಚೆನ್ನಾಗಿ ಅರ್ಥ ಮಾಡಿಸಿದೆ. ಈ ವರ್ಷವೇ ಒಂದು ಸವಾಲೆನಿಸಿತ್ತು. ಜೊತೆಗೆ ಭಾರತವು ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. 2021ರಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಭಾರತದ ಪಾತ್ರವನ್ನು ಇನ್ನಷ್ಟು ಬಲಪಡಿಸಬೇಕಿದೆ" ಎಂದು ಹೇಳಿದರು.

"ಔಷಧಿ ಹಾಗೂ ಎಚ್ಚರಿಕೆ ಎರಡೂ 2021ರ ನಮ್ಮ ಮಂತ್ರವಾಗಿರಬೇಕು. ಮೊದಲು ನಾನು ಲಸಿಕೆ ಬರುವವರೆಗೂ ಎಚ್ಚರಿಕೆಯಿಂದಿರಿ ಎಂದು ಹೇಳಿದ್ದೆ, ಆದರೆ ಈಗ ಲಸಿಕೆ ಜತೆ ಎಚ್ಚರಿಕೆಯೂ ಮುಖ್ಯ ಎಂದು ಹೇಳುತ್ತಿದ್ದೇನೆ. ಔಷಧ ಹಾಗೂ ಎಚ್ಚರಿಕೆ ಎರಡಕ್ಕೂ ನೀವು ಹೌದು ಎನ್ನಲೇಬೇಕು" ಎಂದು ಸಲಹೆ ನೀಡಿದ್ದಾರೆ.
ನಮ್ಮ ದೇಶದಲ್ಲಿ ಗಾಳಿಸುದ್ದಿಗಳು ಬೇಗ ಹರಡಿಬಿಡುತ್ತವೆ. ತಮ್ಮ ಸ್ವಂತ ಲಾಭಕ್ಕೆ ಅಥವಾ ಬೇಜವಾಬ್ದಾರಿ ನಡೆಯಿಂದ ಹಲವರು ಲಸಿಕೆ ವಿರುದ್ಧ ಹಲವು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಲಸಿಕೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ವದಂತಿಗಳೂ ಹುಟ್ಟಿಕೊಳ್ಳಬಹುದು. ಈಗಾಗಲೇ ಆರಂಭವಾಗಿದೆ ಕೂಡ. ಆದರೆ ಇದ್ಯಾವುದಕ್ಕೂ ಕಿವಿಗೊಡಬೇಡಿ, ಎಚ್ಚರಿಕೆಯಿಂದಿರಿ. ಜವಾಬ್ದಾರಿಯುತ ಪ್ರಜೆಗಳಂತೆ ವರ್ತಿಸಿ ಎಂದು ಮನವಿ ಮಾಡಿದ್ದಾರೆ.
ಶತ್ರುವಾಗಿರುವ ಕೊರೊನಾ ವಿರುದ್ಧ ನಾವು ಹೋರಾಡಬೇಕು. ಯಾವುದೇ ವದಂತಿಗಳು ಬಂದರೂ ಎಚ್ಚರಿಕೆಯಿಂದಿರಿ. ಏನನ್ನೂ ಪರಿಶೀಲಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಬೇಡಿ ಎಂದು ಕೇಳಿಕೊಂಡಿದ್ದಾರೆ.












Click it and Unblock the Notifications