ಬಿಜೆಪಿ ಅಭ್ಯರ್ಥಿಯಾಗಿ ಗಾಂಧಿನಗರದಿಂದ ನಾಮಪತ್ರ ಸಲ್ಲಿಸಿದ ಅಮಿತ್ ಶಾ
ಗಾಂಧಿನಗರ, ಮಾರ್ಚ್ 30: ಗುಜರಾತಿನ ಪ್ರತಿಷ್ಠಿತ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶನಿವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಮಿತ್ ಶಾ ನಮನ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರಾಜನಾಥ್ ಸಿಂಗ್, ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಉಪಸ್ಥಿತರಿದ್ದರು.
ಬಿಜೆಪಿ ಹಿರಿಯ ಮುಖಂಡ, ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಈ ಬಾರಿ ಅವರಿಗೆ ಬಿಜೆಪಿ ಟಿಕೆಟ್ ನೀಡದೆ, ಸ್ವತಃ ಅಮಿತ್ ಶಾ ಅವರೇ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ 54 ವರ್ಷ ವಯಸ್ಸಿನ ಅಮಿತ್ ಶಾ, ಬಿಜೆಪಿ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ.

2014 ರ ಚುನಾವಣೆಯಲ್ಲಿ ಎಲ್ ಕೆ ಅಡ್ವಾಣಿ 4 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದರು.
ಅಮಿತ್ ಶಾ ನಾಮಪತ್ರ ಸಲ್ಲಿಕೆಯ ಹಿನ್ನೆಲೆಯಲ್ಲಿ ಗಾಂಧಿನಗರದಲ್ಲಿ ನಡೆಸಲಾದ ಬಿಜೆಪಿ ಸಮಾವೇಶದಲ್ಲಿ ಉದ್ದವ್ ಠಾಕ್ರೆ, ಪ್ರಕಾಶ್ ಸಿಂಗ್ ಬಾದಲ್, ರಾಮ್ ವಿಲಾಸ್ ಪಾಸ್ವಾನ್ ಸಹ ಭಾಗವಹಿಸಿದ್ದರು. ಇದು ಲೋಕಸಭಾ ಚುನಾವಣೆಗೆ ಮುನ್ನ ಎನ್ ಡಿಎ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು.
ನಾಮಪತ್ರ ಸಲ್ಲಿಕೆಗೂ ಮುನ್ನ ಮಾತನಾಡಿದ ಅಮಿತ್ ಶಾ, "ಅಡ್ವಾಣಿಜೀ ಅವರು ಪ್ರತಿನಿಧಿಸುತ್ತಿದ್ದ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ನನ್ನನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಈ ಕ್ಷೇತ್ರವನ್ನು ಅಭಿವೃದ್ಧಿ ಹೊಮದಿದ ಕ್ಷೇತ್ರಗಳಲ್ಲೊಂದನ್ನಾಗಿ ಮಾಡಲು ಅಡ್ವಾಣಿ ಅವರು ಶ್ರಮಿಸಿದ್ದಾರೆ. ಅವರ ಪರಂಪರೆಯನ್ನು ನಾನು ಉಳಿಸಿಕೊಂಡು ಹೋಗಲು ಪ್ರಯತ್ನಿಸುತ್ತೇನೆ" ಎಂದು ಅಮಿತ್ ಶಾ ಹೇಳಿದರು.












Click it and Unblock the Notifications