ಜ್ಞಾನಭಾರತಿ ಗ್ಯಾಂಗ್ರೇಪ್: ಆರೋಪ ಸಾಬೀತು ನಾಳೆಯೇ ಶಿಕ್ಷೆ

ಪ್ರಕರಣದಲ್ಲಿ ಒಟ್ಟು 8 ಆರೋಪಿಗಳು ಭಾಗಿಯಾಗಿದ್ದು, ಒಬ್ಬ ಬಾಲ ಅತ್ಯಾಚಾರಿಯೂ ಇದ್ದಾನೆ. ಅವನ ವಿರುದ್ಧ ಬಾಲ ನ್ಯಾಯ ಮಂಡಳಿಯಲ್ಲಿ ವಿಚಾರಣೆ ಇನ್ನೂ ನಡೆಯುತ್ತಿದೆ. ಹಾಗಾಗಿ 6 ಮಂದಿಯ ವಿರುದ್ಧ ಮಾತ್ರವೇ ಸೆಪ್ಟೆಂಬರ್ 6ರಂದು ಶಿಕ್ಷೆಯ ಪ್ರಮಾಣ ಪ್ರಕಟಗೊಳ್ಳಲಿದೆ.
ದೆಹಲಿ ಅರೆವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್- ಮರ್ಡರ್ ಪ್ರಕರಣದ ಸಂಬಂಧವೂ 5 ತಪ್ಪಿತಸ್ಥರ ವಿರುದ್ಧ ಸೆ. 10ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದ್ದು, ನಾಳೆಯ ಈ ತೀರ್ಪಿಗೆ ಹೆಚ್ಚಿನ ಮಹತ್ವ ಬಂದಿದೆ.
ರಾಮನಗರ ಕೈಲಾಂಚ ಹೋಬಳಿಯ ಮೆಟ್ಟಾರೆದೊಡ್ಡಿ ಗ್ರಾಮದ ರಾಮ, ಮದ್ದೂರು ಮರಿಯಯ್ಯ, ಶಿವಣ್ಣ , ಈರಯ್ಯ, ಯಲಿಯಯ್ಯ ಅಲಿಯಾಸ್ ಕುಮಾರ ಹಾಗೂ ಮೈಸೂರು ಜಿಲ್ಲೆ ಮಾಸ್ತಿಗುಡಿಯ ದೊಡ್ಡ ಈರಯ್ಯ ವಿರುದ್ಧದ ಆರೋಪ ಸಾಬೀತಾಗಿದೆ. ಗಮನಾರ್ಹವೆಂದರೆ ಮತ್ತೊಬ್ಬ ಆರೋಪಿ ರಾಜಾ ಎಂಬುವವನು ಇದುವರೆಗೂ ಪೊಲೀಸರ ಕಣ್ಣಿಗೆ ಬಿದ್ದಿಲ್ಲ!
ಬುಧವಾರ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂಗಣ್ಣನವರ್, ವಾದ-ಪ್ರತಿವಾದ ಆಲಿಸಿದ ಬಳಿಕ ಆರೋಪಿಗಳು ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ. ಸೆ. 6ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು ಎಂದು ಆದೇಶಿಸಿದರು.
ಪ್ರಕರಣ ಇದು: ಜ್ಞಾನಭಾರತಿ ಕ್ಯಾಂಪಸ್ ಆವರಣದ ಹಳೇ ಪರೀಕ್ಷಾ ಭವನದ ಬಳಿ 2012ರ ಅಕ್ಟೋಬರ್ 13 ರ ರಾತ್ರಿ 9.30 ರ ಸುಮಾರಿನಲ್ಲಿ ರಾಷ್ಟ್ರೀಯ ಕಾನೂನು ಕಾಲೇಜು ವಿದ್ಯಾರ್ಥಿನಿ (NLSIU) ತನ್ನ ಪ್ರಿಯಕರನೊಂದಿಗೆ (ಕೇರಳದ ಕೊಲ್ಲಂ ಮೂಲದ, ಬೆಂಗಳೂರು IBM ಕಂಪನಿಯ ಟೆಕ್ಕಿ) ಕಾರಿನಲ್ಲಿ ಮಾತನಾಡುತ್ತಾ ಕುಳಿತಿದ್ದ ವೇಳೆ ಎಂಟೂ ಆರೋಪಿಗಳು ಶ್ರೀಗಂಧದ ಮರ ಕದಿಯಲು ವಿದ್ಯಾರ್ಥಿನಿ ಇದ್ದ ಪ್ರದೇಶಕ್ಕೆ ಆಗಮಿಸಿದ್ದರು.
ಶ್ರೀಗಂಧದ ಮರಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಹಳೇ ಪರೀಕ್ಷಾ ಭವನದ ಬಳಿ ಪ್ರಿಯಕರನ ಜತೆ ಕಾರಿನಲ್ಲಿದ್ದ ನೇಪಾಳ ಮೂಲದ ಯುವತಿಯನ್ನು ನೋಡಿ ಅವರ ಮೇಲೆ ದಾಳಿಗೆ ಸಂಚು ರೂಪಿಸಿದ್ದಾರೆ. ಕಾರಿನ ಗಾಜು ಒಡೆದು ಅವರಿಬ್ಬರನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಆಕೆಯ ಪ್ರಿಯಕರನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ಬಿಟ್ಟು ಯುವತಿಯನ್ನು ಮತ್ತೆ 2 ಕಿಮೀ ದೂರದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು.
ಆರೋಪಿಗಳ ಬಂಧನಕ್ಕಾಗಿ ರಚಿಸಲಾಗಿದ್ದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ನಾಲ್ವರನ್ನು ರಾಮನಗರದ ಕಂದಾಯ ಭವನದ ಬಳಿ ಹಾಗೂ ಇಬ್ಬರನ್ನು ಮೆಟ್ಟಾರದೊಡ್ಡಿ ಗುಡ್ಡದಲ್ಲಿ ಸೆರೆ ಹಿಡಿದಿದ್ದರು. ಕೆಲವು ದಿನಗಳ ಬಳಿಕ ಮತ್ತೂಬ್ಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.












Click it and Unblock the Notifications