1 ರು ಗೆ ಎಟಿಎಂ ಆರಂಭಿಸಿದ ಡಿಕೆಶಿ ಬ್ರದರ್ಸ್
ಬೆಂಗಳೂರು, ಸೆ.4: ಜಾಗತಿಕವಾಗಿ ರುಪಾಯಿ ತನ್ನ ಮೌಲ್ಯ ಕುಸಿಯುತ್ತಿದ್ದರೆ, ಕನಕಪುರದ ಡಿಕೆಶಿ ಬ್ರದರ್ಸ್ ಒಂದು ರುಪಾಯಿ ಮಹತ್ವವನ್ನು ಚೆನ್ನಾಗಿ ಅರಿತಿದ್ದಾರೆ. 1 ರುಪಾಯಿಗೆ ಕೆಜಿ ಅಕ್ಕಿ ನೀಡಲು ಕಾಂಗ್ರೆಸ್ ಶುರು ಮಾಡಿದ ಮೇಲೆ ಉತ್ತೇಜನಗೊಂಡ ಡಿಕೆಶಿ ಬ್ರದರ್ಸ್ 1 ರುಗೆ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಿದ್ದಾರೆ. ಇದಕ್ಕಾಗಿ ಹೊಸ ಎಟಿಎಂ ಆರಂಭಿಸಿದ್ದಾರೆ.
ಬೆಂಗಳೂರು, ಮೈಸೂರು ಭಾಗದಲ್ಲಿ ಈ ಋತುವಿನಲ್ಲಿ ಒಳ್ಳೆ ಮಳೆಯಾಗಿದ್ದರೂ ಕುಡಿಯುವ ನೀರಿನ ಅಭಾವ ಇದ್ದೇ ಇದೆ. ನೀರಿನ ಟ್ಯಾಂಕರ್ ಗಳ ಹತ್ತಿರ ಉದ್ದುದ್ದಾ ಸರತಿ ಸಾಲುಗಳಲ್ಲಿ ಕೊಡ ಹಿಡಿದು ಗ್ರಾಮಸ್ಥರು ನಿಂತ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿತ್ತು. ಅದರೆ, ಈಗ ಸ್ಥಳೀಯರ ಬಾಯಲ್ಲಿ 'ವಾಟರ್ ಎಟಿಎಂ' ಎಂದು ಕರೆಸಿಕೊಳ್ಳುವ ಹೊಸ ವ್ಯವಸ್ಥೆ ಯಶಸ್ವಿಯಾಗುತ್ತಿದೆ. 1 ರುಗೆ ಶುದ್ಧ ನೀರು ನೀಡುವ ಈ ಯೋಜನೆಯಿಂದ ಜನ ಸಂತುಷ್ಟರಾಗಿದ್ದಾರೆ.
ಸಂಸದ ಡಿಕೆ ಸುರೇಶ್ ಹಾಗೂ ಶಾಸಕ ಡಿಕೆ ಶಿವಕುಮಾರ್ ಅವರು ಆರಂಭಿಸಿದ ಹೊಸ ಕಿಯೋಸ್ಕ್ ಗಳು ಗಮನ ಸೆಳೆಯುತ್ತದೆ. ಈ ಬಗ್ಗೆ ಎನ್ ಡಿಟಿವಿಗೆ ಡಿಕೆ ಶಿವಕುಮಾರ್ ಅವರು ವಿಶೇಷ ಸಂದರ್ಶನ ಕೂಡಾ ನೀಡಿದ್ದಾರೆ. ವಾಟರ್ ಎಟಿಎಂ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ...
ನೀರಿನ ಬಗ್ಗೆ ಜನ
"ಮುಂಚೆ ಬೋರ್ ವೆಲ್ ನೀರು ಕುಡಿಯುತ್ತಿದ್ದೆವು. ಆದರೆ, ಆ ನೀರು ಅಶುದ್ಧವಾಗಿತ್ತಲ್ಲದೆ, ಅಡುಗೆಗೆ ಬಳಸಲು ಬರುತ್ತಿರಲಿಲ್ಲ. ಈ ವಾಟರ್ ಎಟಿಎಂ ಬಂದ ಮೇಲೆ ನಾವು ಕೂಡಾ ಶುದ್ಧ ನೀರು ಕುಡಿಯುವಂತಾಗಿದೆ. ನಮ್ಮ ಕುಟುಂಬದಲ್ಲಿ ಐವರು ಮಂದಿ ಇದ್ದೇವೆ. ಅಡುಗೆ, ಕುಡಿಯುವ ನೀರು ಬಳಕೆಗೆ ನಮಗೆ 20 ಲೀಟರ್ ಬೇಕಾಗುತ್ತದೆ. ಕಡಿಮೆ ದರಕ್ಕೆ ಒಳ್ಳೆ ನೀರು ಸಿಗುತ್ತಿದೆ" ಎಂದು ಸ್ಥಳೀಯರಾದ ಜಯಮ್ಮ ಹೇಳಿದ್ದಾರೆ.
ಹೇಗೆ ನೀರು ಪಡೆಯುವುದು?
ವಾಟರ್ ಎಟಿಎಂನಲ್ಲಿ ಒಂದು ರುಪಾಯಿಯ ಕಾಯಿನ್ ಹಾಕಿದ ಮೇಲೆ ಶುದ್ಧ ನೀರು ನಿಮಿಷಗಳಲ್ಲೇ ಸಿಗುತ್ತದೆ. 1 ರುಪಾಯಿಗೆ 10 ಲೀಟರ್ ಶುದ್ಧ ಕುಡಿಯುವ ನೀರು ಸಿಗುತ್ತಿದೆ. ಬಹುತೇಕ ಗ್ರಾಮಸ್ಥರು ದಿನಕ್ಕೆ 20 ಲೀಟರ್ ಗೂ ಅಧಿಕ ನೀರು ಬಳಸುತ್ತಿದ್ದಾರೆ. ಕೇವಲ 2 ರುಪಾಯಿ ಖರ್ಚು ಮಾಡಿ ಒಳ್ಳೆ ನೀರು ಕುಡಿಯುತ್ತಿದ್ದಾರೆ.
ಎಷ್ಟು ಕಿಯೋಸ್ಕ್ ಗಳಿವೆ
ಸುಮಾರು 33 ವಾಟರ್ ಕಿಯೋಸ್ಕ್ ಅಥವಾ ವಾಟರ್ ಎಟಿಎಂಗಳನ್ನು ಕನಕಪುರ ಕ್ಷೇತ್ರ ಹೊಂದಿದೆ. ವಾಟರ್ ಎಟಿಎಂ ಸ್ಥಾಪನೆಗೆ 12 ರಿಂದ 13 ಲಕ್ಷ ರು ವೆಚ್ಚವಾಗಿದೆ. ಶಾಸಕ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಅವರು ಪ್ರತಿನಿಧಿಸುವ ಕನಕಪುರ ಕ್ಷೇತ್ರದಲ್ಲಿ ಸದ್ಯಕ್ಕೆ ನೀರಿನ ಬವಣೆ ನೀಗುತ್ತಿದೆ.
ಡಿಕೆಶಿ ಹೇಳಿದ್ದೇನು?
ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ದೇಶದ ಪ್ರಮುಖ ರಾಜಕಾರಣಿಗಳು 'ಮಿನರಲ್ ವಾಟರ್' ಕುಡಿಯುವಾಗ ಬಡವರು ಏಕೆ ಅಶುದ್ಧ ಕುಡಿಯುವ ನೀರು ಕುಡಿಯಬೇಕು. ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀರು ಒದಗಿಸುವ ಯೋಜನೆಯನ್ನು ಹಮ್ಮಿಕೊಂಡೆವು. ಜನರಿಂದ ಉತ್ತಮವಾಗಿ ಸ್ಪಂದನೆ ಸಿಕ್ಕಿದೆ. ನೀರು ಶುದ್ಧೀಕರಣ ಘಟಕಗಳ ಸ್ಥಾಪನೆ ಉತ್ಸಾಹ ಹೆಚ್ಚಿದೆ ಎಂದು ಶಾಸಕ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕನಕಪುರ ನೀರಿನ ಬವಣೆ
ಕನಕಪುರದಲ್ಲಿ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸುಮಾರು 1300 ಅಡಿ ಆಳಕ್ಕಿಳಿದರೂ ತೊಟ್ಟು ನೀರು ಸಿಗುತ್ತಿಲ್ಲ. ಕಳೆದ ವರ್ಷದ ಬರ ಪರಿಸ್ಥಿತಿ ಮುಂದುವರೆದಿದೆ. ಬೋರ್ ವೆಲ್ ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬೋರ್ ವೆಲ್ ನೀರು ಸಿಗುವ ಕಡೆ ಶುದ್ಧತೆಯ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ವಾಟರ್ ಎಟಿಎಂ ಕ್ಲಿಕ್ ಆಗಿದೆ.
ನೀರಿನ ಋಣ
ಇತ್ತೀಚಿನ ಲೋಕಸಭೆ ಉಪ ಚುನಾವಣೆಗೂ ಮುಂಚೆ ಈ ಯೋಜನೆಯನ್ನು ಡಿಕೆಶಿ ಬ್ರದರ್ಸ್ ಕಾರ್ಯಗತಗೊಳಿಸಿದ್ದು ಫಲ ನೀಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದೆ.
ಡಿಕೆ ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಸಂಪುಟ ಸೇರುವ ತವಕದಲ್ಲಿದ್ದಾರೆ. ನೀರಿನ ಋಣಕ್ಕೆ ಬಿದ್ದ ಜನತೆ ಈ ಇಬ್ಬರು ಕಾಂಗ್ರೆಸ್ ನಾಯಕರನ್ನು ಹರಸಿದ್ದಾರೆ.