ಗಂಡ ಕುಡುಕ: ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು
ಬೆಂಗಳೂರು, ಆ 28: ಗಂಡ ಕುಡುಕ ಎಂದು ಅವನಿಗೆ ಮತ್ತು ಅವನ ಕುಟುಂಬಕ್ಕೆ ಹೆಂಡತಿ ಮತ್ತು ಅವಳ ಮನೆಯವರು ಇನ್ನು ಮುಂದೆ ಕಿರುಕುಳ ನೀಡುವಂತಿಲ್ಲ. ಹೀಗೊಂದು ಅಪರೂಪದ ಆದೇಶವನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಹೊರಡಿಸಿದೆ.
ಕೆಲಸಕ್ಕೆ ಹೋಗದೇ ಗಂಡ ಮದ್ಯವಸ್ಯಸಿಯಾಗಿ, ದುಡ್ಡು ನೀಡುವಂತೆ ಹೆಂಡತಿಗೆ ದಂಬಾಲು ಬಿದ್ದರೆ ಅದನ್ನು ಚಿತ್ರಹಿಂಸೆ, ಕ್ರೌರ್ಯ ಅಥವಾ ಕಿರುಕುಳ ಎಂದು ಹೇಳುವುದು ಸರಿಯಲ್ಲ.
ಇದೇ ಕಾರಣಕ್ಕೆ ಗಂಡ ಹೆಂಡತಿಯರ ನಡುವೆ ಮನಸ್ತಾಪ ಉಂಟಾಗಿ ಹೆಂಡತಿ ಆತ್ಮಹತ್ಯೆ ಮಾಡಿಕೊಂಡರೆ ಅವಳ ಸಾವಿಗೆ ಗಂಡನೇ ಪ್ರಚೋದನೆ ನೀಡಿದ್ದು ಎಂದು ಆತನ ಮೇಲೆ ಆಪಾದನೆ ಹೊರಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿದೆ.

ಈ ಪ್ರಕರಣದ ಹಿಂದೆ ಮುಂದೆ : ವೆಂಕಟಾಚಲಪತಿ ಮತ್ತು ರಾಧಿಕಾ ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ದಂಪತಿಗಳು. ಎಪ್ರಿಲ್ 1999ರಲ್ಲಿ ಮದುವೆಯಾದ ನಂತರ ವೆಂಕಟಾಚಲಪತಿ ಉಪನ್ಯಾಸಕ ಹುದ್ದೆಗೆ ವಿಶ್ರಾಂತಿ ನೀಡಿ ಮನೆಯಲ್ಲೇ ಟ್ಯೂಷನ್ ಆರಂಭಿಸಿದ್ದರು.
ಟ್ಯೂಷನ್ ಜೊತೆಗೆ ಕುಡಿತದ ಚಟ ಆರಂಭಿಸಿಕೊಂಡಿದ್ದ ವೆಂಕಟಾಚಲಪತಿ, ಕುಡಿಯಲು ದುಡ್ಡು ನೀಡುವಂತೆ ಹೆಂಡತಿಯನ್ನು ಪೀಡಿಸಲಾರಂಭಿಸಿದ್ದ. ಕುಡಿತ ಬಿಡುವಂತೆ ಹೆಂಡತಿ ಮಾಡಿದ ಒತ್ತಾಯಕ್ಕೆ, ಮನವಿಗೆ ಗಂಡ ಒಪ್ಪದೇ ಇದ್ದಾಗ ಹೆಂಡತಿ ಆಗಸ್ಟ್ 2004ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ತನ್ನ ಸಹೋದರಿಯ ಸಾವಿಗೆ ಬಾವನೇ ಕಾರಣವೆಂದು ಗಂಡನ ಮೇಲೆ ದೂರು ದಾಖಲಾಯಿತು. ಪೊಲೀಸರು ಕೋರ್ಟಿಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಫಾಸ್ಟ್ ಟ್ರ್ಯಾಕ್ ಕೋರ್ಟ್ ವೆಂಕಟಾಚಲಪತಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಫಾಸ್ಟ್ ಟ್ರ್ಯಾಕ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ವೆಂಕಟಾಚಲಪತಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವೆಂಕಟಾಚಲಪತಿಗೆ ಕುಡಿತದ ಚಟ ಬಿಟ್ಟರೆ ಪತ್ನಿಯನ್ನು ಪೀಡಿಸಿಲ್ಲ ಅಥವಾ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸಿಲ್ಲ ಎಂದು ಆತನ ಪರ ವಕೀಲರು ವಾದಿಸಿದ್ದರು.
ಈ ಕುತೂಹಲಕಾರಿ ಕೇಸಿನ ಕೂಲಂಕುಷ ವಿಚಾರಣೆ ನಡೆಸಿದ ನ್ಯಾ.ಪಚ್ಚಾಪುರೆ ಅವರು ಈ ಮೇಲಿನ ಆದೇಶ ನೀಡಿ ವೆಂಕಟಾಚಲಪತಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ನೀಡಿದ್ದ ತೀರ್ಪನ್ನು ರದ್ದು ಮಾಡಿ, ಶಿಕ್ಷೆಯಿಂದ ವಿಮುಕ್ತರನ್ನಾಗಿ ಮಾಡಿದ್ದಾರೆ.











Click it and Unblock the Notifications