ಆನೆದಂತ ಸುಟ್ಟು ಹಾಕಲು ಕರ್ನಾಟಕವೂ ಸಿದ್ಧ!
ಕರ್ನಾಟಕ ಅರಣ್ಯ ಇಲಾಖೆ ಸುಮಾರು 40 ವರ್ಷಗಳಿಂದ ಸುಮಾರು 2,353 ಆನೆ ದಂತಗಳನ್ನು ಸಂಗ್ರಹಿಸಿದೆ. ಸತ್ತ ಆನೆಗಳಿಂದ, ಕಳ್ಳಸಾಗಣೆ ಮಾಡುವವರಿಂದ ವಶಪಡಿಸಿಕೊಳ್ಳಲಾದ ಇವುಗಳನ್ನು ಮೈಸೂರಿನಲ್ಲಿ ಬಿಗಿ ಭದ್ರತೆಯಲ್ಲಿ ಸಂಗ್ರಹಿಸಿಡಲಾಗಿದೆ. ಸದ್ಯ ಇದು ಇಲಾಖೆ ಪಾಲಿಗೆ ತಲೆನೋವಾಗಿದ್ದು, ದಂತಗಳನ್ನು ಸುಡಲು ನಿರ್ಧರಿಸಿದೆ.
ಕೇಂದ್ರ ಸರ್ಕಾರ ಆನೆ ದಂತಗಳನ್ನು ಸಂರಕ್ಷಿಸುವುದು ಕಷ್ಟವಾದರೆ ಅದನ್ನು ಸುಟ್ಟು ಬಿಡಿ ಎಂದು ಎರಡು ವರ್ಷಗಳ ಹಿಂದೆಯೇ ಎಲ್ಲಾ ರಾಜ್ಯಗಳಿಗೂ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಈ ಆದೇಶ ಪಾಲಿಸಲು ಮುಂದಾಗಿದ್ದು, ದಂತಗಳನ್ನು ಸುಟ್ಟು ಹಾಕಲು ಸಿದ್ದತೆ ನಡೆಸಿದೆ.
ಕರ್ನಾಟಕದ ಅರಣ್ಯ ಇಲಾಖೆಯ 2013 ಫೆಬ್ರವರಿಯ ಮಾಹಿತಿಯಂತೆ 9,44.37 ಕೆ.ಜಿ. ಆನೆದಂತವನ್ನು ಮೈಸೂರಿನಲ್ಲಿ ಸಂರಕ್ಷಿಸಿ ಇಡಲಾಗಿದೆ. ಇವುಗಳ ಸಂರಕ್ಷಣೆಗೆ ಭಾರೀ ಹಣ ಖರ್ಚಾಗುತ್ತಿದ್ದು, ಅವುಗಳನ್ನು ನಾಶಪಡಿಸಲು ಅರಣ್ಯ ಇಲಾಖೆ ಸಿದ್ದವಾಗಿದೆ.
ಕೆಲವು ದಿನಗಳ ಹಿಂದೆ ಕೇರಳ ಅರಣ್ಯ ಇಲಾಖೆ ಸುಮಾರು 50 ಕೋಟಿ ರೂ. ಮೌಲ್ಯದ ಆನೆದಂತವನ್ನು ಸುಡುವುದಾಗಿ ಹೇಳಿಕೆ ನೀಡಿತ್ತು. ಕೇರಳ ಸರ್ಕಾರ ಆನೆದಂತವನ್ನು ಸುಟ್ಟು ಹಾಕಿದರೆ, ದಂತವನ್ನು ನಾಶ ಪಡಿಸಿದ ಮೊದಲ ರಾಜ್ಯವಾಗಲಿದೆ. (50 ಕೋಟಿಯ ಆನೆ ದಂತ ಸುಡಲು ಕೇರಳ ನಿರ್ಧಾರ!)
ವನ್ಯಜೀವಿ ಸಂರಕ್ಷಣಾ ಕಾಯ್ದೆ 1991ರಲ್ಲಿ ತಿದ್ದುಪಡಿ ಮಾಡಿ, ಆನೆದಂತಗಳ ಮಾರಾಟವನ್ನು ನಿಷೇಧಿಸಲಾಗಿದೆ. ಆದ್ದರಿಂದ ದಾಸ್ತಾನಿರುವ ದಂತಗಳನ್ನು ಏನು ಮಾಡುವುದು ಎಂಬುದು ಇಲಾಖೆ ಪಾಲಿಗೆ ಬಗೆಹರಿಯದ ಪ್ರಶ್ನೆಯಾಗಿದೆ.
ಕೇಂದ್ರ ಸರ್ಕಾರದ ಆದೇಶವನ್ನು ಬೇರೆ ರಾಜ್ಯಗಳು ಪಾಲಿಸಿ, ಆನೆದಂತವನ್ನು ನಾಶಪಡಿಸಿದರೆ, ಕರ್ನಾಟಕ ಅರಣ್ಯ ಇಲಾಖೆಯು ದಂತವನ್ನು ಸುಟ್ಟು ಹಾಕಲು ಸಿದ್ದವಾಗಿದೆ. ಕಠಿಣ ಕಾನೂನು ಕ್ರಮದಿಂದಾಗಿ ಕೋಟ್ಯಾಂತರ ರೂ. ಬೆಲೆಬಾಳುವ ಆನೆದಂತ ಅಗ್ನಿಗೆ ಆಹುತಿಯಾಗಲಿದೆ.