ಅರ್ಕಾವತಿ ಫಲಾನುಭವಿಗಳ ಕೈ ಸೇರಲಿದೆ ನಿವೇಶನ

ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲಿ 2014ರ ವೇಳೆಗೆ ಅರ್ಕಾವತಿ ಬಡಾವಣೆ ನಿರ್ಮಾಣವನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಆದ್ದರಿಂದ 8,813 ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಬಿಡಿಎ ಮುಂದಾಗಿದೆ.
ಬಿಡಿಎ ಆಯುಕ್ತ ಶ್ಯಾಂ ಭಟ್ ಅವರು ಈ ಕುರಿತು ಹೇಳಿಕೆ ನೀಡಿದ್ದು, ಎರಡು ತಿಂಗಳಿನಲ್ಲಿ ಬಡಾವಣೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ. ದಸರಾ ಹಬ್ಬಕ್ಕೆ ಫಲಾನುಭವಿಗಳಿಗೆ ನಿವೇಶನಗಳನ್ನು ವಿತರಿಸಲು ನಾವು ಸಿದ್ದರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಆದರೆ, ಅರ್ಕಾವತಿ ಬಡಾವಣೆಯ ಫಲಾನುಭವಿಗಳ ಸಂಘದ ಅಧ್ಯಕ್ಷ ಜಿ.ಶಿವಪ್ರಕಾಶ್ ಬಿಡಿಎ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ ನಾವು ಬಿಡಿಎಯಿಂದ ಇಂತಹ ಭರವಸೆ ಕೇಳುತ್ತಿದ್ದೇವೆ. ನಮಗೆ ಇನ್ನೂ ನಿವೇಶನಗಳು ಹಸ್ತಾಂತರವಾಗಿಲ್ಲ ಎಂದು ಹೇಳಿದ್ದಾರೆ.
ಅರ್ಕಾವತಿ ಬಡಾವಣೆಗಾಗಿ 3,750 ಎಕರೆ ಭೂಮಿಯನ್ನು 16 ಗ್ರಾಮಗಳಲ್ಲಿ ಸ್ವಾಧೀನ ಪಡಿಸಿಕೊಳ್ಳಲು, ಬಿಡಿಎ 2003ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಆದರೆ, 2,750 ಎಕರೆ ಪ್ರದೇಶಕ್ಕೆ 2004ರಲ್ಲಿ ಅವಕಾಶ ದೊರೆತು ಬಿಡಿಎ ಕಾಮಗಾರಿ ಪ್ರಾರಂಭಿಸಿತು.
ಬಡಾವಣೆಗೆ ನಿರ್ಮಾಣಕ್ಕೆ ಭೂ ಸ್ವಾಧೀನ ಪಡಿಸಿಕೊಳ್ಳುವ ವಿಚಾರದಲ್ಲಿ ಹಲವಾರು ಗೊಂದಲಗಳು ಉಂಟಾದವು. ಭೂ ಸ್ವಾಧೀನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂತು, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ಸುಪ್ರೀಂಕೋರ್ಟ್ ಬಡಾವಣೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಮಾಡಿಕೊಳ್ಳಲು ಬಿಡಿಎಗೆ ಅನುಮತಿ ನೀಡಿತು. ಸಂತ್ರಸ್ತರ ಜೊತೆ ನಿರಂತರ ಮಾತುಕತೆ ನಡೆಸಿದ ಸರ್ಕಾರ ಬಡಾವಣೆ ನಿರ್ಮಾಣವಾದ ನಂತರ ಸಂತ್ರಸ್ತರಿಗೆ ಶೇ 40ರಷ್ಟು ಪಾಲು ನೀಡುವುದಾಗಿ ಭರವಸೆ ನೀಡಿ ವಿವಾದ ಅಂತ್ಯಗೊಳಿಸಿತ್ತು.
ಎಲ್ಲಾ ವಿವಾದಗಳು ಬಗೆಹರಿದು ಅರ್ಕಾವತಿ ಬಡಾವಣೆಯ ಫಲಾನುಭವಿಗಳಿಗೆ ನಿವೇಶನ ಕೈ ಸೇರುವ ಕಾಲ ಹತ್ತಿರವಾಗಿದೆ. ಬಿಡಿಎ ತನ್ನ ಮಾತಿನಂತೆ ದಸರಾ ಹಬ್ಬಕ್ಕೆ ನಿವೇಶನ ಹಸ್ತಾಂತರ ಮಾಡಿದರೆ, ಫಲಾನುಭವಿಗಳಿಗೆ ಅದೇ ದಸರಾ ಹಬ್ಬದ ಉಡುಗೊರೆ.












Click it and Unblock the Notifications