ಮಂಡ್ಯದಲ್ಲಿ ಚುನಾವಣೆ ಅಂದ್ರೆ ಜಿದ್ದಾಜಿದ್ದಿ-ವರ್ಲ್ಡ್ ಫೇಮಸ್!
ಸಕ್ಕರೆ ನಾಡು ಮಂಡ್ಯ ಲೋಕಸಭೆ ಉಪಚುನಾವಣೆಯ ಕಣ ಗರಿಗೆದರಿದೆ. ಮಂಡ್ಯದ ಅಖಾಡ ನಟಿ ರಮ್ಯಾಳ ಉಮೇದುವಾರಿಕೆಯಿಂದ ರಮ್ಯವಾಗಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಜೋರಾಗಿದೆ. ಒಂದೆಡೆ ದೇವೇಗೌಡರ ಪ್ರತಿಷ್ಠೆ.. ಮತ್ತೊಂದೆಡೆ ನಟಿ ಮತ್ತು ಮಂಡ್ಯದ ಶಾಸಕ ಅಂಬರೀಷ್ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೂ ಇದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಒಕ್ಕಲಿಗರೇ ಬಹುಸಂಖ್ಯಾತರಾಗಿರೋ ಕ್ಷೇತ್ರದಲ್ಲಿ, ಕಾಂಗ್ರೆಸ್ನಿಂದ ಚಿತ್ರನಟಿ ರಮ್ಯಾ ಹಾಗೂ ಜೆಡಿಎಸ್ನಿಂದ ಸಿಎಸ್ ಪುಟ್ಟರಾಜು ಸ್ಪರ್ಧಿಸಿದ್ದಾರೆ. ಜೆಡಿಎಸ್ ಉಸ್ತುವಾರಿಯನ್ನ ಸ್ವತಃ ದೇವೇಗೌಡರೇ ವಹಿಸಿಕೊಂಡಿದ್ರೆ, ಕಾಂಗ್ರೆಸ್ ಉಸ್ತುವಾರಿಯನ್ನ ಅಂಬಿ ಮತ್ತು ಎಸ್.ಎಂ.ಕೃಷ್ಣ ವಹಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸಮಬಲದ ಹೋರಾಟವಿದೆ. ಕ್ಷೇತ್ರದ ರಾಜಕೀಯ ಇತಿಹಾಸ ಗಮನಿಸಿದರೆ, ಆರಂಭದಿಂದಲೂ ಕಾಂಗ್ರೆಸ್ ಪ್ರಾಬಲ್ಯ ಎದ್ದು ಕಾಣುತ್ತೆ.

ಸಮರ ಚರಿತ್ರೆ: ಅಂದಿನಿಂದ ಇಂದಿನವರೆಗೆ
1951-71 - ಎಂ.ಕೆ. ಶಿವನಂಜಪ್ಪ - ಕಾಂಗ್ರೆಸ್
1971ರ ಉಪಚುನಾವಣೆ - ಎಸ್ಎಂಕೆ - ಕಾಂಗ್ರೆಸ್
1977 - ಚಿಕ್ಕಲಿಂಗಯ್ಯ - ಕಾಂಗ್ರೆಸ್
1980 - ಎಸ್.ಎಂ. ಕೃಷ್ಣ - ಕಾಂಗ್ರೆಸ್
1984 - ಕೆ.ವಿ. ಶಂಕರೇಗೌಡ - ಜನತಾ ಪಾರ್ಟಿ
1989-1991 - ಜಿ. ಮಾದೇಗೌಡ - ಕಾಂಗ್ರೆಸ್
1996 - ಕೆ.ಆರ್.ಪೇಟೆ ಕೃಷ್ಣ - ಜನತಾದಳ
1998-2004 - ಅಂಬರೀಶ್
2009 - ಚೆಲುವರಾಯಸ್ವಾಮಿ - ಜೆಡಿಎಸ್
1951 ರಿಂದ 71ರವರೆಗೆ ಮಂಡ್ಯದಲ್ಲಿ, ಕಾಂಗ್ರೆಸ್ನ ಎಂ.ಕೆ. ಶಿವನಂಜಪ್ಪ ಅವರದ್ದೇ ಕಾರುಬಾರು. ಸತತ 4 ಬಾರಿ ಗೆದ್ದಿದ್ದ ಶಿವನಂಜಪ್ಪ 1971ರಲ್ಲಿ ನಿಧನ ಹೊಂದಿದ ಪರಿಣಾಮ ನಡೆದ ಉಪಚುನಾವಣೆಯಲ್ಲಿ, ಎಸ್ಎಂ ಕೃಷ್ಣ ಜಯ ಸಾಧಿಸಿದರು. ನಂತರ 1977ರಲ್ಲಿ ಕಾಂಗ್ರೆಸ್ನವರೇ ಆದ ಚಿಕ್ಕಲಿಂಗಯ್ಯ ಗೆದ್ದರು. ಆ ನಂತರ 1980ರಲ್ಲಿ ಮತ್ತೆ ಸ್ಪರ್ಧಿಸಿದ ಎಸ್.ಎಂ.ಕೆ.ಕೃಷ್ಣ ಗೆಲುವು ಸಾಧಿಸಿದರು. 1984ರಲ್ಲಿ ಜನತಾ ಪಾರ್ಟಿಯ ಕೆ.ವಿ.ಶಂಕರೇಗೌಡ ಆಯ್ಕೆಯಾದರು. ನಂತರ 1989ರಿಂದ 1991ರವರೆಗೆ ಸತತ 2 ಬಾರಿ ಕಾಂಗ್ರೆಸ್ನ ಜಿ.ಮಾದೇಗೌಡ ಗೆಲುವು ಸಾಧಿಸಿದರು. ಇದಾದ ಬಳಿಕ 1996ರಲ್ಲಿ ಜನತಾ ದಳದ ಕೆ.ಆರ್.ಪೇಟೆ ಆಯ್ಕೆಯಾದರು. ಆ ನಂತರ, 1998, 1999 ಹಾಗೂ 2004ರಲ್ಲಿ ಸತತ 3 ಬಾರಿ ಅಂಬರೀಶ್ ಗೆಲುವು ಸಾಧಿಸಿದರು. ಜೆಡಿಎಸ್ನಿಂದ ಮೊದಲ ಬಾರಿ ಗೆದ್ದರೆ, ಮಿಕ್ಕೆರಡು ಬಾರಿ ಕಾಂಗ್ರೆಸ್ನಿಂದ ಆಯ್ಕೆಯಾದರು. ಆದರೆ, 2009ರ ಚುನಾವಣೆಯಲ್ಲಿ ಜೆಡಿಎಸ್ ಕೈಹಿಡಿದ ಮತದಾರ, ಚೆಲುವರಾಯಸ್ವಾಮಿ ಅವರಿಗೆ ಸಂಸದ ಪಟ್ಟ ಕಟ್ಟಿದರು.












Click it and Unblock the Notifications