ರಮ್ಯಾ ಗೌಡ್ತಿ ಆಗಿದ್ದರೆ ತಂದೆ ಹೆಸರು ಹೇಳೋಕೆ ಏನು?
ಮಂಡ್ಯ, ಆಗಸ್ಟ್ 19: ರಾಜ್ಯದಲ್ಲಿ ನಡೆಯಲಿರುವ ಲೋಕಸಭೆ ಉಪಚುನಾವಣೆ ಪ್ರಚಾರವು ಅಬ್ಬಬ್ಬಾ ನಿಜಕ್ಕೂ ಕುಲಗೆಟ್ಟು ಹೋಗಿದೆ. ಅವರ ಜನ್ಮವನ್ನು ಇವರು ಜಾಲಾಡುವುದು ಇವರ ಜನ್ಮವನ್ನು ಅವರು ಜಾಲಾಡುವುದು. ಯಾರದೋ ತಂದೆ, ಯಾರದೋ ತಾತಾ. ಅನೈತಿಕ ಒಪ್ಪಂದಗಳು, ಒಳ ಒಪ್ಪಂದಗಳು ಒಂದಾ ಎರಡಾ? ಇಷ್ಟೆಲ್ಲಾ ಆದಮೇಲೆ ಕೊನೆಗೆ ಕಣದಲ್ಲಿ ಉಳಿದಿರುವುದು ಅದೇ ಕಾಂಗ್ರೆಸ್ ಮತ್ತು ಅದೇ ದೇವೇಗೌಡರ ಕುಟುಂಬ.
ತೀರಾ ವೈಯಕ್ತಿಕ ವಿಷಯಗಳನ್ನು ಕೆದಕುವುದಕ್ಕೆ ವೇದಿಕೆಯಾದ ಪ್ರಚಾರ ಕಾರ್ಯದಲ್ಲಿ ಯಾವುದೇ ಎಗ್ಗುಸಿಗ್ಗು ಇಲ್ಲದೆ ಎಲ್ಲ ಘನಂಧಾರಿ ನಾಯಕರೂ ತಮ್ಮ ಶಕ್ತ್ಯಾನುಸಾರ ಬೆಟ್ಟವನ್ನು ಅಗೆದು ಇಲಿ ಹಿಡಿಯಲು ಶ್ರಮ ಹಾಕುತ್ತಿದ್ದಾರೆ.

ರಮ್ಯಾ ತಂದೆಯ ಬಗ್ಗೆ ತಲೆಗೊಂದು ಮಾತು
ಹೆಚ್ಚು ವಿವಾದಕ್ಕೀಡಾದ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ, ನಟಿ ರಮ್ಯಾ ಒಂದರಮೇಲೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅತ್ತ ಸಾಕು ತಂದೆ ದೈವಾಧೀನರಾಗಿದ್ದೇ ಬಂತು ಇತ್ತ ಮಂಡ್ಯದ ಬೋರೇಗೌಡರ ಮೊಮ್ಮಗಳು ಎಂದು ಸ್ವಯಂ ಘೋಷಿಸಿಕೊಂಡಿರುವ ರಮ್ಯಾರ ತಂದೆಯ ಬಗ್ಗೆ ಒಬ್ಬೊಬ್ಬರೂ ತಲೆಗೊಂದು ಮಾತು ಮಾತನಾಡಿದರು.

ಯಥಾ ರಾಜ ತಥಾ ಪ್ರಜಾ
ಅದರಲ್ಲಿ ಮೊದಲು ಕಿಡಿ ಹಚ್ಚಿದ್ದು ಜೆಡಿಎಸ್ ಮಾಜಿ ಶಾಸಕ ಮಹಾಶಯ. ಅದು ಕೊನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರವರೆಗೂ ಬಂದು ನಿಂತಿದೆ. ಸನ್ಮಾನ್ಯ ಕುಮಾರಸ್ವಾಮಿ ಅವರೂ ಸಹ ಮೊದಲ ಮೊದಲು ಹೆಣ್ಮಗಳ ಬಗ್ಗೆ ಹಂಗೆಲ್ಲಾ ಮಾತನಾಡಬಾರದು ಎಂದಿರಾದರೂ ಈ ಖುದ್ದು ಅವರೇ ರಮ್ಯಾ ಅವರ ತಂದೆ ಬಗ್ಗೆ ತಮಗಿರುವ ಕೆಟ್ಟ ಕುತೂಹಲವನ್ನು ಹೊರಹಾಕಿದ್ದಾರೆ.

ರಮ್ಯಾ ತಂದೆಯ ಹೆಸರು ಕೇಳೋದರಲ್ಲಿ ತಪ್ಪೇನು?
ಕನ್ನಡಪ್ರಭಕ್ಕೆ ನೀಡಿರುವ ಸಂದರ್ಶನದಲ್ಲಿ ಕುಮಾರಸ್ವಾಮಿ ಮೂಲಭೂತ ಪ್ರಶ್ನೆಯನ್ನು ಎತ್ತಿದ್ದಾರೆ.
ಬೋರೇಗೌಡ ನಮ್ಮ ತಾತ ಎಂದೆಲ್ಲಾ ಹೇಳುತ್ತಿರುವ ರಮ್ಯಾ ಅವರಿಗೆ ತಂದೆ ಹೆಸರು ಹೇಳಲು ಏನು ಭಯ? ಮಣ್ಣಿನ ಮಗಳು, ಒಕ್ಕಲಿಗರ ಮಗಳು, ನಾನು ಗೌಡ್ತಿ ಎಂದು ಅವರು ಹೇಳುತ್ತಾರೆ. ನಿಜವಾಗಿ ಗೌಡ್ತಿ ಆಗಿದ್ದರೆ ತಂದೆ ಹೆಸರು ಹೇಳೋಕೆ ಏನು ಕಷ್ಟ? ಅವರು ಬೋರೇಗೌಡರ ಹೆಸರು ಧೈರ್ಯವಾಗಿ ಹೇಳುತ್ತಾರೆ. ಆದರೆ ತಂದೆ ಯಾರೆಂದು ಹೇಳುವುದಿಲ್ಲ.

ರಮ್ಯಾ ತಾಯಿ ರಂಜಿತಾರಂತೆ ಧೈರ್ಯವಾಗಿ ಹೇಳಲಿ
'ಸಾಮಾನ್ಯವಾಗಿ ನಾವು ತಂದೆ ಹೆಸರು ಮೊದಲು ಹೇಳುತ್ತೇವೆ. ಆಮೇಲೆ ತಾತನ ಹೆಸರು.ರಮ್ಯಾ ಅವರ ತಾಯಿ ರಂಜಿತಾ ಅವರು ಧೈರ್ಯವಾಗಿ, ಬೋರೇಗೌಡರ ಮಗಳು ಎಂದು ಹೇಳುತ್ತಾರೆ. ಹಾಗೆಯೇ ರಮ್ಯಾ ಸಹ ಅಷ್ಟೇ ಧೈರ್ಯವಾಗಿ ತಂದೆಯ ಹೆಸರೇಳಲಿ' ಎಂದು ಕುಮಾರಸ್ವಾಮಿ ಸವಾಲು ಎಸೆದಿದ್ದಾರೆ.

ಜೆಡಿಎಸ್ ನನ್ನ ತಾಳ್ಮೆ ಪರೀಕ್ಷಿಸುತ್ತಿದೆ
ಈ ಮಧ್ಯೆ, ಮಳವಳ್ಳಿ ತಾಲೂಕಿನ ಬೆಳಕವಾಡಿಯಲ್ಲಿ ಭಾನುವಾರ ಪ್ರಚಾರದಲ್ಲಿ ಪಾಳ್ಗೊಂಡಿದ್ದ ನಟಿ ರಮ್ಯಾ ಅವರು ಜೆಡಿಎಸ್ ಮುಖಂಡರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
'ತಂದೆ ಕಳೆದುಕೊಂಡು ದುಃಖದಲ್ಲಿರುವ ನನ್ನ ವಿರುದ್ಧ ಜೆಡಿಎಸ್ಸಿನವರು ಪದೇ ಪದೇ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ನನ್ನ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ರಮ್ಯಾಳಿಗೆ ಮಾತನಾಡಲು ಬರುವುದಿಲ್ಲ ಎಂದಿರುವ ಈ ಮುಖಂಡರು ಇಲ್ಲಿವರೆಗೆ ಪಾರ್ಲಿಮೆಂಟಿನಲ್ಲಿ ಎಷ್ಟು ಮಾತನಾಡಿದ್ದಾರೆ? ಇದೀಗ ಸಂಸದಸ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ವಿಧಾನಸಭೆಯಲ್ಲಿ ಒಂದೇ ಒಂದು ಸಮಸ್ಯೆ ಚರ್ಚಿಸಿದ ಉದಾಹರಣೆಯಿಲ್ಲ. ಇದನ್ನು ಮತದಾರರು ಗಮನಿಸಬೇಕು' ಎಂದು ರಮ್ಯಾ ತಿರುಗೇಟು ನೀಡಿದ್ದಾರೆ.












Click it and Unblock the Notifications