ವಿಪ್ರ ಸಂಘಟನೆಗಳ ಪ್ರತಿಭಟನೆ:ಕವಡೆ ಕಾಸಿನ ಕಿಮ್ಮತ್ತಿದೆಯೇ?
ಕರ್ನಾಟಕದಲ್ಲಿ ನೂರಾರು ಬ್ರಾಹ್ಮಣ ಸಂಘಗಳು, ತ್ರಿಮತಸ್ಥ ವಿಪ್ರ ಸಂಘಗಳು ಅಸ್ಥಿತ್ವದಲ್ಲಿವೆ. ಇವುಗಳಲ್ಲಿ ಪ್ರಮುಖವಾಗಿ ಕಳೆದ 13 ವರ್ಷಗಳಿಂದ ಮುಜರಾಯಿ ದೇವಾಲಯಗಳ ಅರ್ಚಕರುಗಳು ತಮ್ಮ ಬೇಡಿಕೆಗಳನ್ನು ಈಡೇರಿಸಲು 1999-2000 ಸಾಲಿನಿಂದ ಸಂಘಟಿತರಾಗಿ ಧಾರ್ಮಿಕ ಭಾವನೆಗಳೊಂದಿಗೆ ಅಧಿಕಾರಿಗಳನ್ನು ಮತ್ತು ಮುಜರಾಯಿ ಸಚಿವರಲ್ಲಿ ಮನವಿಗಳನ್ನು ಭಿನ್ನವಿಸುವುದರೊಂದಿಗೆ ತಮ್ಮ ಕೆಲಸ-ಕಾರ್ಯ ಗಳನ್ನು ಯಶಸ್ವಿ ಗೊಳಿಸಿಕೊಂಡಿದ್ದಾರೆ.
ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ನೌಕರರ ಹಲವಾರು ಸಂಘಟನೆಗಳಿವೆ. ಈ ಎಲ್ಲಾ ಸಂಘಟನೆಗಳ ಸದಸ್ಯರು ಬೆಂಗಳೂರಿನಲ್ಲಿ ಹೋರಾಟ ಮಾಡುತ್ತಿದ್ದಾರೆ. ಯಾವುದೇ ಸರ್ಕಾರವಿರಲಿ ವಿಪ್ರ ಸಮುದಾಯಗಳಿಗೆ ಮಾರಕವಾದ ಸರ್ಕಾರಿ ಆದೇಶಗಳು ಹೊರಬಿದ್ದದ್ದೇ ಆದಲ್ಲಿ ಕಾನೂನು ಹೋರಾಟ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದಾರೆ.
ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸ ಕಾರ್ಯಗಳನ್ನು ಮತ್ತು ಅರ್ಚಕ ವೃತ್ತಿ ನಡೆಸುತ್ತಿದ್ದ 36 ಸಾವಿರಕ್ಕೂ ಹೆಚ್ಚು ದೇವಾಲಯಗಳ ಆದಾಯ ಮೂಲವಾಗಿದ್ದ ಇನಾಂ ಜಮೀನುಗಳು ಉಳುವವನಿಗೆ ಭೂಮಿ ಎಂದು ಕಾನೂನು ಬಂದ ಮೇಲೆ ರಾಜ್ಯದ ಎಲ್ಲಾ ದೇವಾಲಯಗಳ ಭೂಮಿ ರೈತರ ಪಾಲಾಯ್ತು. ಆಗ ಯಾವುದೇ ವಿಪ್ರ ಸಂಘಟನೆಗಳು ಪ್ರತಿಭಟನೆಗೆ ಇಳಿಯಲಿಲ್ಲ.
ಸುಮಾರು ನಾಲ್ಕು ದಶಕಗಳಿಂದ ದೇವಾಲಯದ ಅರ್ಚಕರಿಗೆ ಯಾವುದೇ ಸರ್ಕಾರಿ ವೇತನವಾಗಲಿ ಅಥವಾ ಗೌರವ ಧನವಾಗಲಿ ಸಿಗುತ್ತಿಲ್ಲ. ಈ ವಿಚಾರವಾಗಿ ಯಾವುದೇ ವಿಪ್ರ ಸಂಘಟನೆಗಳು ಬೀದಿಗಿಳಿದ ಉದಾಹರಣೆಗಳಿಲ್ಲ ಅಥವಾ ನ್ಯಾಯಾಂಗ ಹೋರಾಟವೂ ಸಹ ಮಾಡಲಿಲ್ಲ. ಇಂತಹ ವಿಪ್ರ ಸಂಘಟನೆಗಳು ನಮ್ಮ ನಮ್ಮ ಕರ್ಮಫಲಗಳೆಂದು ನೊಂದು ದೇವರ ಮೇಲೆ ಭಾರ ಹಾಕಿ ತಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿದ್ದರು. ಯಾವುದೇ ಸರ್ಕಾರವಿರಲಿ ವಿಪ್ರರ ಶಾಪ ನಮಗೆ ತಾಟಬಹುದು ಎನ್ನುವ ಗೋಜಿಗೇ ಹೋಗಿಲ್ಲ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದ ಮುಜರಾಯಿ ದೇವಾಲಯಗಳನ್ನು ಸಂರಕ್ಷಿಸಲು ಧಾರ್ಮಿಕ ದತ್ತಿ ವಿಧೇಯಕ ತಿದ್ದುಪಡಿ ತಂದು ರಾಜ್ಯಧಾರ್ಮಿಕ ಪರಿಷತ್ತು ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಜಾರಿಗೆ ತಂದಿತು. ಮೂರು ತಿಂಗಳು ಕಳೆದರೂ ಯಾವ ಅರ್ಚಕ ಸಂಘಟನೆಗಳು, ರಾಜ್ಯ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ನಮಗೆ ವಿಧೇಯಕ ಮಾರಕ ಎಂದು ನ್ಯಾಯಾಲಯದ ಮೊರೆ ಹೋಗಲೇ ಇಲ್ಲ.
ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಆದ ಮೇಲೆ ಗಂಟಾನಾದ ಚಳುವಳಿ ಎಂಬ ವಿನೂತನ ಪ್ರತಿಭಟನೆ ನಡೆಸಿದವು. ಆಗಿನ ಬಿಜೆಪಿ ಸರ್ಕಾರ ಈ ಪ್ರತಿಭಟನೆಗೆ "ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ". ಇತ್ತೀಚೆಗೆ ಒಂದು ಪ್ರತಿಭಟನೆಯೊಂದು ನಡೆಯಿತು. ಅದು ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ಈ ಪ್ರತಿಭಟನೆಯಲ್ಲಿ ಬಂದ ಜನಕ್ಕೆ ಪ್ರತಿಭಟನೆ ಯಾಕೆ ಮಾಡುತ್ತಿದ್ದೇವೆ ಎನ್ನುವ ಕನಿಷ್ಠ ಅರಿವಿರಲಿಲ್ಲ.
ಇಲ್ಲಿ ಕಾಡುವ ಪ್ರಶ್ನೆಯೆಂದರೆ ಅರ್ಚಕ ವರ್ಗ ಪ್ರತಿಭಟನೆ ನಡೆಸುವುದರಲ್ಲಿ ಅರ್ಥವಿದೆಯೇ? ಮುಜರಾಯಿ ದೇವಾಲಯಗಳ ಅರ್ಚಕರು ಮತ್ತು ನೌಕರರು ಪ್ರತಿಭಟನೆ ನಡೆಸುವಷ್ಟು ಸಮರ್ಥರಿದ್ದಾರೆಯೇ? ಪ್ರತಿಭಟನೆ, ಮುಷ್ಕರಗಳಿಂದ ಏನನ್ನಾದರೂ ಸಾಧಿಸಲು ಸಾದ್ಯವಿದೆಯೇ? ಮುಂದುವರೆದ ಜನಾಂಗ ಎಂದೆನಿಸಿಕೊಳ್ಳುವ ವಿಪ್ರರು, ದೇವಾಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಅರ್ಚಕರು ಆತ್ಮಸಾಕ್ಷಿಯಾಗಿ ಪ್ರತಿಭಟನೆ ಮುಷ್ಕರಗಳನ್ನು ನಡೆಸಲು ಸಾಧ್ಯವಿದೆಯೇ ಎಂದು ಸ್ವಲ್ಪ ಯೋಚಿಸಬೇಕು.
ದೇವಾಲಯದ ಅರ್ಚಕರು ಪ್ರತಿಭಟನೆ- ಮುಷ್ಕರ ನಡೆಸಲು ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಬರಬೇಕಾಗಿಲ್ಲ. ಅರ್ಚಕರಿಗೆ ಆತ್ಮಸಾಕ್ಷಿಯಾಗಿ ಮುಷ್ಕರ ನಡೆಸಬೇಕು ಎಂದಿದ್ದರೆ, ತಾವು ಪೂಜೆ ಸಲ್ಲಿಸುವ ದೇವಾಲಯದ ಮುಂದೆ ಅಥವಾ ದೇವರ ಮುಂದೆ ಕುಳಿತು ಮುಷ್ಕರ ಮಾಡಿದರೆ ಅದು ದೇವರಿಗೆ ಮುಟ್ಟುತ್ತದೆ. ಅದು ಬಿಟ್ಟು ದೇವರಿಲ್ಲದ, ಖೈದಿಗಳೂ ಇಲ್ಲದ ಹಳೆಯ ಕೇಂದ್ರ ಕಾರಾಗೃಹದ ಮುಂದೆ ಪ್ರತಿಭಟನೆ ಮುಷ್ಕರಗಳನ್ನು ನಡೆಸಿದರೆ ಸಮಸ್ಯೆಗಳು ಬಗೆಹರಿಯುತ್ತದೆಯೇ?