ಮೋದಿ ವಿರೋಧಿಗಳಿಗೆ ಆರ್ಎಸ್ಎಸ್ ಎಚ್ಚರಿಕೆ
ಶನಿವಾರ ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಸುರೇಶ್ ಸೋನಿ, ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂದು ದೇಶದ ಜನರು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ದೇಶದಲ್ಲಿ ಉತ್ತಮ ಸರ್ಕಾರ ರಚನಗೆ ಎಲ್ಲರೂ ಸಹಕರಿಸಬೇಕು. ಮೋದಿ ವಿರುದ್ಧ ಮಾತನಾಡುವ ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಬಿಜೆಪಿ ನಾಯಕರಿಗೆ ಸೋನಿ ಸಲಹೆ ನೀಡಿದ್ದಾರೆ.
ದೇಶದ ತುಂಬಾ ಕಾಂಗ್ರೆಸ್ ವಿರೋಧಿ ಅಲೆ ಇದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಬಿಜೆಪಿ ಅಧಿಕಾರ ಪಡೆಯಬೇಕು. ಅದಕ್ಕಾರಿ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಸೋನಿ ಕರೆ ನೀಡಿದ್ದಾರೆ.
ಸೋನಿ ಅವರ ಹೇಳಿಕೆಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬೆಂಬಲಿಸುತ್ತದೆ ಎಂದು ಹೇಳಬಹುದು. ಪ್ರಧಾನಿ ಅಭ್ಯರ್ಥಿ ಹೆಸರನ್ನು ಬಿಜೆಪಿ ಎಂದು ಘೋಷಿಸುತ್ತದೆ ಎಂದು ಕಾದು ನೋಡಬೇಕು.
ಮೋದಿ ವಿರೋಧಿಗಳಿಗೆ ಎಚ್ಚರಿಕೆ : ಆರ್ಎಸ್ಎಸ್ ಬಹಿರಂಗವಾಗಿ ನರೇಂದ್ರ ಮೋದಿ ಅವರನ್ನು ಟೀಕಿಸುವ ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಸಲಹೆ ನೀಡಿದೆ. ಆ ಮೂಲಕ ಶತ್ರುಘ್ನ ಸಿನ್ಹಾ ಮುಂತಾದ ಮೋದಿಯನ್ನು ವಿರೋಧಿಸುವ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.