ಮೊಳಕಾಲ್ಮೂರು ಸೀರೆಗೂ ಹತ್ತಿದ ತೆಲಂಗಾಣ ಕಿಚ್ಚು
ಚಿತ್ರದುರ್ಗ, ಆ.17 : ತೆಲಂಗಾಣ ಪ್ರತಿಭಟನೆಯ ಬಿಸಿ ಕರ್ನಾಟಕಕ್ಕೆ ತಟ್ಟಿ ಹಲವು ದಿನಗಳು ಕಳೆದಿವೆ. ಮಹಿಳೆಯರ ಮೆಚ್ಚಿನ ಮೊಳಕಾಲ್ಮೂರು ರೇಷ್ಮೆ ಸೀರೆಗೂ ತೆಲಂಗಾಣ ಕಿಚ್ಚು ಹತ್ತಿದ್ದು, ಸೀರೆ ಉತ್ಪಾದನೆ ಕುಸಿತಗೊಂಡಿದೆ. ಇದರಿಂದ ಶ್ರಾವಣಮಾಸದಲ್ಲಿ ರೇಷ್ಮೆ ಸೀರೆ ಕೊಳ್ಳುವ ಮಹಿಳೆಯರಿಗೆ ನಿರಾಸೆಯಾಗಿದೆ.
ತೆಲಂಗಾಣ ಪ್ರತಿಭಟನೆಯಿಂದಾಗಿ ಆಂಧ್ರಪ್ರದೇಶದಕ್ಕೆ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಕರ್ನಾಟಕದ ಗಡಿದಾಟಿ ಆಂಧ್ರಪ್ರದೇಶಕ್ಕೆ ಜನರು ತೆರಳುವುದು ಕಷ್ಟವಾಗಿದೆ. ಆದ್ದರಿಂದ ಮೊಳಕಾಲ್ಮೂರು ಸೀರೆಗೆ ಅಗತ್ಯವಿದ್ದ ಕಚ್ಚಾವಸ್ತು ಪೂರೈಕೆಗೆ ತೊಂದರೆ ಉಂಟಾಗಿದೆ.

ಮೊಳಕಾಲ್ಮೂರು ರೇಷ್ಮೆ ಸೀರೆ ಉದ್ಯಮ ಕಚ್ಚಾ ವಸ್ತುಗಳಿಗಾಗಿ ಆಂಧ್ರಪ್ರದೇಶದ ರಾಯದುರ್ಗವನ್ನು ಅವಲಂಭಿಸಿದೆ. ಮೊಳಕಾಲ್ಮೂರಿನಿಂದ 10 ರೂ.ದರದಲ್ಲಿ ರಾಯದುರ್ಗಕ್ಕೆ ಸಾಗಿ ಸೀರೆ ಉತ್ಪಾದಕರು ಕಚ್ಚಾ ವಸ್ತುಗಳನ್ನು ತರುತ್ತಿದ್ದರು.
ಆದರೆ, ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಸೀರೆ ಉತ್ಪಾದಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಟೋ ರಿಕ್ಷಾ ಮೂಲಕ ಎರಡು ಬಸ್ ಗಳನ್ನು ಬದಲಾವಣೆ ಮಾಡಿ, ರಾಯದುರ್ಗಕ್ಕೆ ಹೋಗಿಬರಲು ಉತ್ಪಾದಕರಿಗೆ 50 ರೂ.ಗಳಿಗಿಂತಲೂ ಹೆಚ್ಚು ಖರ್ಚಾಗುತ್ತಿದೆ.
ಹೆಚ್ಚು ಖರ್ಚು ಮಾಡಿಕೊಂಡು ಹೋದರೂ ರಾಯದುರ್ಗದಲ್ಲಿ ಕಚ್ಚಾವಸ್ತುಗಳು ದೊರೆಯುತ್ತಿಲ್ಲ. ಪ್ರತಿಭಟನೆಯ ಬಿಸಿಯಿಂದಾಗಿ ಅಲ್ಲಿ ಮಾರುಕಟ್ಟೆಗಳಲ್ಲಿ ವಸ್ತುಗಳ ಕೊರತೆ ಉಂಟಾಗಿದೆ. ಆದ್ದರಿಂದ ಸೀರೆ ಉತ್ಪಾದಕರು ಬರಿಗೈಲಿ ಮರಳುವಂತಾಗಿದೆ.
ತಮ್ಮ ಬಳಿ ಸಂಗ್ರಹವಾಗಿದ್ದ ಕಚ್ಚಾ ವಸ್ತುಗಳು ಖಾಲಿ ಆಗಿರುವುದರಿಂದ ನೇಕಾರರು, ತೆಲಂಗಾಣ ಪ್ರತಿಭಟನೆ ಯಾವಾಗ ಮುಗಿಯುತ್ತದೆ ಎಂದು ಕಾದು ಕುಳಿತಿದ್ದಾರೆ. ಪ್ರತಿಭಟನೆಯ ಕಾವು ಆರಿದರೆ, ಈ ಜನರಿಗೆ ಉದ್ಯೋಗ ದೊರೆಯುತ್ತದೆ.
ಮಾರುಕಟ್ಟೆಯೂ ಆಂಧ್ರ ಪ್ರದೇಶ : ಮೊಳಕಾಲ್ಮೂರು ರೇಷ್ಮೆ ಸೀರೆಗೆ ಆಂಧ್ರಪ್ರದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ನೇಕಾರರು ತಾವು ತಯಾರಿಸಿದ ಸೀರೆಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ.
ಸದ್ಯ ಪ್ರತಿಭಟನೆ ಬಿಸಿಯಿಂದಾಗಿ ಅಲ್ಲಿಗೆ ತೆರಳಲಾಗದೆ ಮಾರಾಟವೂ ಕುಸಿದಿದೆ. ಇದರಿಂದ ವ್ಯಾಪಾರಿಗಳಿಗೆ ನಷ್ಟ ಉಂಟಾಗುತ್ತಿದೆ. ಮೊಳಕಾಲ್ಮೂರಿನಲ್ಲಿ 1,500ಕ್ಕೂ ಹೆಚ್ಚು ಸೀರೆ ತಯಾರಿಕಾ ಘಟಕಗಳಿವೆ. ಆದರೆ, ಕಚ್ಚಾ ವಸ್ತುಗಳ ಕೊರತೆ ಮತ್ತು ಮಾರಾಟ ಕಡಿಮೆ ಆಗಿರುವುದರಿಂದ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.












Click it and Unblock the Notifications