ದುರ್ಗಾಶಕ್ತಿ ಅಮಾನತು ಪ್ರಶ್ನಿಸಿದ್ದ ಪಿಐಎಲ್ ವಜಾ
ನವದೆಹಲಿ, ಆ.16: ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗ್ಪಾಲ್ ಅವರ ಅಮಾನತು ರದ್ದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಅಮಾನತು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ದುರ್ಗಾಶಕ್ತಿ ಅವರು ಸ್ವತಃ ತಮ್ಮ ಬಗ್ಗೆ ಕಾಳಜಿ ವಹಿಸಬಹುದಾಗಿದೆ. ಅವರು ಅಮಾನತು ಆದೇಶವನ್ನು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಬಹುದು ಎಂದು ಹೇಳಿದೆ.
ದಕ್ಷ ಐಎಎಸ್ ಅಧಿಕಾರಿ ದುರ್ಗಾಶಕ್ತಿ ಅವರ ಅಮಾನತು ಆದೇಶವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟಿನ ಲಕ್ನೋ ಬೆಂಚ್ ಕಳೆದ ಶುಕ್ರವಾರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿತ್ತು. ಈ ಪ್ರಕರಣ ಕುರಿತ ಮುಂದಿನ ವಿಚಾರಣೆ ಆ.19ಕ್ಕೆ ಮುಂದೂಡಲಾಗಿದೆ.
ಉತ್ತರ ಪ್ರದೇಶದ ಯಮುನಾ ನದಿ ತೀರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ಮಾಫಿಯಾದ ವಿರುದ್ಧ ಕ್ರಮಕ್ಕೆ ಮುಂದಾಗಿದ್ದ ಗೌತಮ ಬುದ್ಧ ನಗರದ ಐಎಎಸ್ ಅಧಿಕಾರಿ ದುರ್ಗಾಶಕ್ತಿ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸಬ್ ಡಿವಿಜಿನಲ್ ಮ್ಯಾಜಿಸ್ಟ್ರೇಟ್ ಹುದ್ದೆಯಲ್ಲಿದ್ದ ದುರ್ಗಾಶಕ್ತಿ ಅವರನ್ನು ಕಳೆದ ಜುಲೈ 27ರಂದು ಅಮಾನತು ಮಾಡಿದ್ದರು.

ಏನಿದು ಪ್ರಕರಣ?: ದುರ್ಗಾಶಕ್ತಿ ಅವರು ಮುಸ್ಲಿಮರ ಪ್ರಾರ್ಥನಾ ಮಂದಿರದ ಗೋಡೆಯನ್ನು ಕೆಡವಿದ್ದಾರೆ ಎಂದು ಆರೋಪಿಸಲಾಗಿತ್ತು. 2010ರ ಬ್ಯಾಚಿನ ಉತ್ತರಪ್ರದೇಶದವರೇ ಆದ ಐಎಎಸ್ ಅಧಿಕಾರಿ ದುರ್ಗಾ ಅವರು ಸುಪ್ರೀಂಕೋರ್ಟ್ ನಿಯಮದ ಪ್ರಕಾರ ತಮ್ಮ ಕರ್ತವ್ಯ ಪಾಲಿಸಿದ್ದರು.
ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿರುವ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಸುಪ್ರೀಂಕೋರ್ಟ್ ಈ ಮುಂಚೆ ಆದೇಶ ನೀಡಿದೆ. ಸರ್ಕಾರಿ ಭೂ ಪ್ರದೇಶದಲ್ಲಿ ಧಾರ್ಮಿಕ ಮಂದಿರಗಳಾದ ದೇಗುಲ, ಮಸೀದಿ ಅಥವಾ ಚರ್ಚ್ ಅನಧಿಕೃತವಾಗಿ ಕಟ್ಟಿದ್ದರೆ ಅದನ್ನು ಕೂಡಾ ನೆಲಸಮ ಮಾಡಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ದುರ್ಗಾಶಕ್ತಿ ಅವರನ್ನು ಅಮಾನತುಗೊಳಿಸಿದ ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ, ಬಿಎಸ್ ಪಿ ಸೇರಿದಂತೆ ಹಲವಾರು ಪಕ್ಷಗಳು ಕಿಡಿ ಕಾರಿದ್ದವು. ಐಎಎಸ್ ಅಸೋಸಿಯೇಷನ್ ಕೂಡಾ ಯಾದವ್ ಕ್ರಮವನ್ನು ಖಂಡಿಸಿ ಕೇಂದ್ರಕ್ಕೆ ಪತ್ರ ಬರೆದಿತ್ತು.
ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಕೋರಲಾಗಿದೆ. ಹಾಗೂ ದುರ್ಗಾಶಕ್ತಿ ಅವರು ನಡೆಸಿದ ದಾಳಿ ವಿವರಗಳನ್ನು ಕೋರ್ಟಿಗೆ ನೀಡಲಾಗಿತ್ತು. ದೇವಿ ಪ್ರಸಾದ್ ಸಿಂಗ್ ಹಾಗೂ ಜಸ್ಟೀಸ್ ಅಶೋಕ್ ಪಾಲ್ ಸಿಂಗ್ ಅವರಿದ್ದ ನ್ಯಾಯಪೀಠ ನೂತನ್ ಠಾಕರ್ ಅವರ ಅರ್ಜಿ ವಿಚಾರಣೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ನಂತರ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಜೂ.29ರಂದು ಸಾಮಾಜಿಕ ಕಾರ್ಯಕರ್ತ ನೂತನ್ ಠಾಕೂರು ಎಂಬುವವರು ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ಜಸ್ಟೀಸ್ ಎಚ್ ಎಲ್ ದತ್ತು ಅವರು ಪಿಐಎಲ್ ವಜಾಗೊಳಿಸಿ ಆದೇಶ ನೀಡಿದ್ದಾರೆ.
ಈ ನಡುವೆ ದುರ್ಗಾಶಕ್ತಿ ಅವರ ಪತಿ ಐಎಎಸ್ ಆಧಿಕಾರಿ ಅಭಿಷೇಕ್ ಸಿಂಗ್ ಅವರನ್ನು ಉತ್ತರಪ್ರದೇಶ ಸರ್ಕಾರ ನೋಯ್ಡಾ ದಿಂದ ಝಾನ್ಸಿ ಗೆ ವರ್ಗಾವಣೆ ಮಾಡಿದೆ. 2011ನೇ ಬ್ಯಾಚಿನ ಎಎಎಸ್ ಅಧಿಕಾರಿಯಾದ ಅಭಿಷೇಕ್ ಸಿಂಗ್ ಅವರು ಝಾನ್ಸಿಯ ಜಂಟಿ ಮ್ಯಾಜಿಸ್ಟ್ರೇಟ್ ಆಗಿದ್ದಾರೆ.
ಒನ್ ಇಂಡಿಯಾ ಸುದ್ದಿ












Click it and Unblock the Notifications