ವಾದ್ರಾ ಅಕ್ರಮಕ್ಕೆ ಹರ್ಯಾಣ ಸಿಎಂ ಹೂಡಾ ಹಾಥ್
ನವದೆಹಲಿ, ಅಗಸ್ಟ್ 13: ಯಶಸ್ವಿ ಉದ್ಯಮಿಯ ಹಿಂದೆ ಮಹತ್ವಾಕಾಂಕ್ಷಿ ರಾಜಕಾರಣಿಯೊಬ್ಬನ 'ಕೈ'ವಾಡವಿರುತ್ತದೆ ಅಂದರೆ ತಪ್ಪಿಲ್ಲತಾನೆ?
ಏಕೆಂದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಅಕ್ರಮಕ್ಕೆ ಹರ್ಯಾಣ ಮುಖ್ಯಮಂತ್ರಿ ಭುಪಿಂದರ್ ಸಿಂಗ್ ಹೂಡಾ ಅವರು ಬನ್ಸಿಲಾಲ್ ಮಾದರಿ ಹಾಥ್/ ಸಾಥ್ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದಾಗ ಮೇಲಿನ ಮಾತಿಗೆ ಪುಷ್ಟಿ ಸಿಗುತ್ತದೆ. ಇದೇ ವಿಷಯವನ್ನು ಪ್ರಸ್ತಾಪಿಸಿ ಸಂಸತ್ತಿನಲ್ಲಿ ಪ್ರತಿಪಕ್ಷಗಳು ಕೋಲಾಹಲ ಸೃಷ್ಟಿಸಿವೆ.

ಈ ಹಿಂದೆ ಸಾಕ್ಷಾತ್ ಇಂದಿರಾ ಗಾಂಧಿ ಕಾಲದಲ್ಲಿ ಹರ್ಯಾಣ ಮುಖ್ಯಮಂತ್ರಿ ಬನ್ಸಿಲಾಲ್ ಸಹ ಇದೇ ಮಾದರಿ ಸಂಜಯ್ ಗಾಂಧಿಯ ಮಾರುತಿ ಕಾರುಮಾರಿಗೆ ಇಂಧನ ತುಂಬಿದ್ದರು. ಮಾರುತಿ ಕಾರು ಉತ್ಪಾದನಾ ಘಟಕಕ್ಕೆ ತಮ್ಮ ರಾಜ್ಯದಲ್ಲಿ ಅಮೂಲ್ಯ ಭೂಮಿ ನೀಡಿದ್ದರು. ಆದರೆ ಸಂಜಯ್ ಬದುಕಿರುವವರೆಗೂ ಅಲ್ಲಿ ಕಾರು ಉತ್ಪಾದನೆ ಬರಕತ್ತಾಗಲಿಲ್ಲ. 1980ರಲ್ಲಿ ಸಂಜಯ್ ಮರಣಾನಂತರ ಜಪಾನಿನ ಕಂಪನಿ ಮುಂದೆ ಬಂದು ಭಾರತೀಯರ ಕನಸನ್ನು ನನಸಾಗಿಸಿತು.
ಈಗಲೂ ಅಷ್ಟೇ ಹರ್ಯಾಣದ ಹಾಲಿ ಮುಖ್ಯಮಂತ್ರಿ ಭುಪಿಂದರ್ ಸಿಂಗ್ ಕಾಂಗ್ರೆಸ್ ಹೈಕಾಂಡ್ ಅನ್ನು ಓಲೈಸಲು ನಿಯಮಗಳನ್ನೆಲ್ಲ ಗಾಳಿಗೆ ತೂರಿ ರಾಬರ್ಟ್ ವಾದ್ರಾಗೆ ಅಕ್ರಮವಾಗಿ ಅಮೂಲ್ಯ ಭೂಮಿಯನ್ನು ಧಾರೆಯೆರೆದಿದ್ದಾರೆ ಎನ್ನುತ್ತಾರೆ ಐಎಎಸ್ ಅಧಿಕಾರಿ ಅಶೋಕ್ ಖೆಮ್ಕಾ.
ಭೂ ದಾಖಲೆ ಇಲಾಖೆಯ ಮಹಾನಿರ್ದೇಶಕರಾಗಿದ್ದಾಗ ಅಶೋಕ್ ಖೆಮ್ಕಾ ಅವರು ಮುಖ್ಯಮಂತ್ರಿ ಮತ್ತು ಕಾಂಗೈ ಅಧ್ಯಕ್ಷೆ ಸೋನಿಯಾ ಅಳಿಯನ ನಡುವಣ ಭೂ ಅಕ್ರಮವನ್ನು ಎತ್ತಿತೋರಿಸಿದ್ದರು.
Sky Light Hospitality ಕಂಪನಿಯು Onkareshwar Properties ಕಂಪನಿಯಿಂದ 3.53 ಎಕರೆ ಜಮೀನನ್ನು 7.5 ಕೋಟಿ ರೂ.ಗೆ 2008ರ ಫೆಬ್ರವರಿ 12ರಂದು ಖರೀದಿಸಿತ್ತು.
Ministry of Corporate Affairs ಸಾರ್ವಜನಿಕ ವೆಬ್ ಸೈಟಿನಲ್ಲಿ ಕಂಡುಬಂದ ಮಾಹಿತಿ ಪ್ರಕಾರ Sky Light Hospitality ಬೇರೆ ಯಾರುದೂ ಅಲ್ಲ- ಸ್ವತಃ ರಾಬರ್ಟ್ ವಾದ್ರಾಗೆ ಸೇರಿದ್ದು. ಈ ಕಂಪನಿಯೇ ಈಗ ವಿವಾದದ ಕೇಂದ್ರಬಿಂದುವಾಗಿರುವುದು.
2012ರ ಆಗಸ್ಟ್ 12ರಂದು ವಾದ್ರಾರ Sky Light Hospitality ಕಂಪನಿಯು DLFಗೆ 3.53 ಎಕರೆ ಜಮೀನನ್ನು ಬರೂಬ್ಬರಿ 58 ಕೋಟಿ ರೂ. ಗೆ ಮಾರಾಟ ಮಾಡಿದೆ. ಅಂದರೆ 7.5 ಕೋಟಿ ರೂ.ಗೆ ಖರೀದಿಸಿದ ಭೂಮಿ ನಾಲ್ಕೇ ವರ್ಷಗಳಲ್ಲಿ 58 ಕೋಟಿ ರೂ. ಗೆ ಮಾರಾಟವಾಗುತ್ತದೆ. ಇದು ಭುಪಿಂದರ್ ಸಿಂಗ್ ಹೂಡಾ ಎಂಬ ಭೂಪನ ಕರಾಮತ್ತು ಎಂಬುದು ಈಗ ಜಗಜ್ಜಾಹೀರಾತಾಗಿದೆ.
ಅಂದಹಾಗೆ, ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಎದುರಿಸುತ್ತಿದ್ದ ವಿವಾದಾತ್ಮಕ DLF ಭೂ ಅಕ್ರಮ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿದ್ದಾರೆ, ಗೊತ್ತಾ?
ಈ ಪ್ರಕರಣದ ವಿಚಾರಣೆಗೆ ಹರ್ಯಾಣ ಸರ್ಕಾರದಿಂದ ನೇಮಕಗೊಂಡಿದ್ದ ತ್ರಿಸದಸ್ಯ ಸಮಿತಿಯು, ಐಎಎಸ್ ಅಧಿಕಾರಿ ಅಶೋಕ ಖೇಮ್ಕಾ ಅವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವಾದ್ರಾ-ಡಿಎಲ್ಎಫ್ ನಡುವಿನ ಭೂ ಒಪ್ಪಂದ ರದ್ದುಗೊಳಿಸಿದ್ದರು ಎಂದು ವರದಿ ಸಲ್ಲಿಸುವ ಮೂಲಕ ವಾದ್ರಾರನ್ನು ಬಚಾವ್ ಮಾಡಿದೆ. ಖೇಮ್ಕಾ ಇಲ್ಲಸಲ್ಲದ ಆರೋಪಗಳನ್ನು ರಾಬರ್ಟ್ ವದ್ರಾ ಅವರ ಮೇಲೆ ಹೊರಿಸಿದ್ದಾರೆ ಎಂದೂ ವರದಿ ಹೇಳಿದೆ.












Click it and Unblock the Notifications