'ನಕಲಿ ವಜ್ರ' ಅಶ್ವತ್ಥ್ ವಿರುದ್ಧ ಕೆಂಡ; ಕುಮಾರಸ್ವಾಮಿಗೆ ಧಮ್ಕಿ
ಚನ್ನಪಟ್ಟಣ, ಆಗಸ್ಟ್ 12: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಪಕ್ಷ ಪಕ್ಷಗಳ ನಡುವಣ ಜಿದ್ದಾಜಿದ್ದಿಗೆ ಸೀಮಿತವಾಗಿಲ್ಲ. ಆಯಾ ಪಕ್ಷಗಳಲ್ಲೇ ತೀವ್ರಪೈಪೋಟಿಗಳು ಕಂಡುಬರುತ್ತಿವೆ. ಅಸಮಾಧಾನದ ಹೊಗೆ ಹಬೆಯಾಡುತ್ತಿದೆ. ಕಣ ಕ್ಷಣಕ್ಷಣಕ್ಕೂ ಗೋಸುಂಬೆಯಂತೆ ಬಣ್ಣ ಬದಲಿಸುತ್ತಿದೆ.
ಅತ್ತ, ಕಳೆದುಹೋಗಿದ್ದ 24 ಕ್ಯಾರೆಟ್ ಗೋಲ್ಡ್ ಅನ್ನು ಜೆಡಿಎಸ್ ವರಿಷ್ಠರು ಮತ್ತೆ ತಮ್ಮ ತೆಕ್ಕೆಗೆ ಹುಡುಕಿಕೊಳ್ಳುತ್ತಿದ್ದಂತೆ ತಾಲೂಕು ಜೆಡಿಎಸ್ ನಲ್ಲಿ ಅಪಸ್ವರ ಶುರುವಾಗಿದೆ. ಜೆಡಿಎಸ್ ನಿಂದ ಬಿಜೆಪಿ ತೆಕ್ಕೆಗೆ ಹಾರಿಕೊಂಡ ಸಂದರ್ಭದಲ್ಲಿ ಕುಮಾರಸ್ವಾಮಿ ಅಶ್ವತ್ಥ್ ಅವರನ್ನು 'ನಕಲಿ ವಜ್ರ' ಎಂದು ಜರಿದಿದ್ದರು ಎಂಬುದು ಗಮನಾರ್ಹ.
ಮಾಜಿ ಶಾಸಕ ಎಂಸಿ ಅಶ್ವತ್ಥ್ ಅವರನ್ನು ಖುದ್ದು ಮಾಜಿ ಪ್ರಧಾನಿ ದೇವೇಗೌಡರು ಕಳೆದ ವಾರ ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಶುಕ್ರವಾರ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕೂಡ ಅಶ್ವತ್ಥ್ ಮನೆಗೆ ಭೇಟಿ ನೀಡಿದ್ದರು. ಇದಕ್ಕೆ ಪಕ್ಷದ ಕೆಲ ನಿಷ್ಠಾವಂತ ಮುಖಂಡರು ಕೆಂಗಣ್ಣು ಬೀರಿದ್ದಾರೆ.
30 ಕೋಟಿ ರೂಗೆ ಅಶ್ವತ್ಥ್ ಖರೀದಿಯಾಗಿದ್ದರು: ಅಶ್ವತ್ಥ್ ಭಾಜಪಗೆ ಸೇರ್ಪೆಡೆಯಾದ ಸಂದರ್ಭದಲ್ಲಿ 'ಅಶ್ವತ್ಥನನ್ನು ಬಳ್ಳಾರಿ ರೆಡ್ಡಿಗಳು 30 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ' ಎಂದು ಜೆಡಿಎಸ್ ಮುಖಂಡರು ಆಗ (2010ರ ಅಕ್ಟೋಬರಿನಲ್ಲಿ) ಗಂಭೀರವಾಗಿ ಆರೋಪಿಸಿದ್ದರು.

ಮದೀನ ಚೌಕ್ ನಲ್ಲಿ ಪ್ರತ್ಯೇಕ ಸಭೆ
ಅಶ್ವತ್ಥ್ ಮನೆಗೆ ಕುಮಾರಸ್ವಾಮಿ ಬರುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಇಲ್ಲಿನ ಮದೀನ ಚೌಕ್ ನಲ್ಲಿ ಪ್ರತ್ಯೇಕ ಸಭೆ ಸೇರಿದ್ದ ಸದರಿ ಮುಖಂಡರು, 'ಅಶ್ವತ್ಥ್ ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದವರು. ನೀವು ಅವರ ಮನೆಗೆ ಹೋಗುವುದು ಬೇಡ. ಅವರು ಪಕ್ಷಕ್ಕೆ ಮರಳಿರುವುದು ಸಂತೋಷವಾದರೂ ಅವರು ಪಕ್ಷಕ್ಕೆ ಈಗ ನಾಯಕರಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನಷ್ಟೇ. ಅದ್ದರಿಂದ ನೀವು ಅವರ ಮನೆ ಅಂಗಳಕ್ಕೆ ಹೋಗಬೇಡಿ' ಎಂದು ಅಶ್ವತ್ಥ್ ಮನೆಗೆ ಹೋಗುವ ಮುನ್ನವೇ ಕುಮಾರಸ್ವಾಮಿಗೆ ದೂರವಾಣಿ ಮೂಲಕ ಮನವರಿಕೆ ಮಾಡಿದ್ದರು.
ಆದರೆ, ಮದೀನ ಚೌಕ್ ನಲ್ಲಿ ನಡೆದ ಸಭೆಗೆ ಹಾಜರಾಗದ ಕುಮಾರಸ್ವಾಮಿ ಸಭೆ ಆಯೋಜಿಸಿದ್ದ ಕೆಲ ಮುಖಂಡರನ್ನು ಶೇರ್ವ ಹೊಟೇಲ್ ಬಳಿಗೆ ಕರೆಸಿಕೊಂಡು 'ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ. ಈಗ ಚುನಾವಣಾ ಸಮಯ. 15 ದಿನಗಳು ಕಳೆಯಲಿ. ನಂತರ ಕೂತು ಸೂಕ್ತ ನಿರ್ಧಾರ ಕೈಗೊಳ್ಳೊಣ' ಎಂದು ಅತೃಪ್ತರನ್ನು ಮನವೊಲಿಸಿದ್ದಾರೆ.

ಪಕ್ಷದ ಕೃಪಾಕಟಾಕ್ಷದಲ್ಲಿ ಅಶ್ವತ್ಥ್
'ಅಶ್ವತ್ಥ್ ಪಕ್ಷದ ಕೃಪಾಕಟಾಕ್ಷದಿಂದ ಶಾಸಕ ಸ್ಥಾನ ಅನುಭವಿಸಿ, ಅವರಿಗೆ ದುಡಿದ ಕಾರ್ಯಕರ್ತರ ಶ್ರಮವನ್ನು ಬಿಜೆಪಿಗೆ ಮಾರಿಕೊಂಡು, ಈಗ ತಮ್ಮ ರಾಜಕೀಯ ಬೆಳವಣಿಗೆಗಾಗಿ ಹಪಹಪಿಸುತ್ತಿದ್ದಾರೆ.ಅವರಿಗೆ ಯಾವುದೇ ಕಾರಣಕ್ಕೂ ನಾಯಕತ್ವ ಕೊಡಬಾರದು. ಕಾರ್ಯಕರ್ತರೇ ಪಕ್ಷಕ್ಕೆ ನಾಯಕರು. ಅಶ್ವತ್ಥ್ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಇನ್ನಿಲ್ಲದ ಸರ್ಕಸ್ ನಡೆಸುತ್ತಿದ್ದಾರೆ. ಇದಕ್ಕೆ ಪಕ್ಷದ ವರಿಷ್ಠರು ಮಣೆ ಹಾಕಬಾರದು' ಎಂದು ಜೆಡಿಎಸ್ ಯುವ ಮುಖಂಡ ಕೂರಣಗೆರೆ ರವಿ 'ಒನ್ ಇಂಡಿಯಾಕನ್ನಡ'ಕ್ಕೆ ತಿಳಿಸಿದ್ದಾರೆ.

ಕೂರಣಗೆರೆ ರವಿ ಆರೋಪ:
ಅದರೂ 'ಅಶ್ವತ್ಥ್ ನಮ್ಮ ನಾಯಕರಲ್ಲ, ನಾವು ಅವರ ಹಿಂದೆ ಬರುವುದಿಲ್ಲ. ನಾವು ಪ್ರತ್ಯೇಕವಾಗಿ ಪಕ್ಷದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರವಾಗಿ ಕೆಲಸ ಮಾಡುತ್ತೇವೆ. ಆದರೆ, ಒಂದು ಬಾರಿ ಪಕ್ಷಕ್ಕೆ ದ್ರೋಹ ಮಾಡಿದವರಿಗೆ ನಾಯಕತ್ವದ ಕೀಲಿ ಕೊಡಬೇಡಿ' ಎಂದು ಕುಮಾರಸ್ವಾಮಿ ಅವರಿಗೆ ಸದರಿ ಮುಖಂಡರಾದ ಕೂರಣಗೆರೆ ರವಿ (ಚಿತ್ರದಲ್ಲಿರುವವರು), ಫರೀದ್ ಖಾನ್ ಘೋರಿ, ನಗರಸಭೆ ಮಾಜಿ ಉಪಾಧ್ಯಕ್ಷ ವಾಸಿಲ್ ಆಲಿ ಖಾನ್, ನಗರಸಭೆ ಸದಸ್ಯರಾದ ಭವಾಸ, ಮುಖಂಡರಾದ ಅರಸೇಗೌಡ, ಕೂರಣಗೆರೆ ಪುಟ್ಟಸ್ವಾಮಿ, ಅಕ್ರಂ ಮುಂತಾದವರು ಎಚ್ಚರಿಕೆ ಮಿಶ್ರಿತ ಮನವಿ ಮಾಡಿದ್ದಾರೆ.

ಮಸಾಲೆ ಅರೆಯುತ್ತಿರುವ ಅಶ್ವತ್ಥ್
ರಾಜಕೀಯವಾಗಿ ತಾಲೂಕಿನಲ್ಲಿ ಸಕ್ರಿಯವಾಗಲು ಮಾಜಿ ಶಾಸಕ ಅಶ್ವತ್ಥ್ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ. ಖುದ್ದು ಜೆಡಿಎಸ್ ವರಿಷ್ಠ ದೇವೇಗೌಡರು ತಮ್ಮ ನಿವಾಸಕ್ಕೆ ಬಂದು ಹೋದ ಮೇಲೆ ತಮ್ಮಿಂದ ದೂರವಾಗಿದ್ದ ಜೆಡಿಎಸ್ ಮುಖಂಡರನ್ನು ತಮ್ಮತ್ತ ಸೆಳೆಯಲು ಕುವೆಂಪುನಗರದ 6ನೇ ಕ್ರಾಸ್ನ ತಮ್ಮ ನಿವಾಸದಲ್ಲಿ ನಿತ್ಯ ಮಟನ್ ಮತ್ತು ಚಿಕನ್ಗೆ ಮಾಸಲೆ ಹಾಕಿಸುತ್ತಿದ್ದಾರೆ. ನಿತ್ಯ ಹಲವು ಮುಖಂಡರನ್ನು ಅಶ್ವತ್ಥ್ ಮತ್ತು ಅವರ ಸಹೋದರ ಕರಿಯಪ್ಪ ಮುಖಂಡರನ್ನು ಕರೆದು ಔತಣ ನೀಡಿ ಅವರ ಒಲೈಕೆಗೆ ಮುಂದಾಗಿದ್ದಾರೆ ಎಂದು ಜೆಡಿಎಸ್ ಮುಖಂಡರು ಪಿಸುಗುಡುತ್ತಿದ್ದಾರೆ.

ಅತೃಪ್ತರಿಗೆ ಕಾಂಗ್ರೆಸ್ ಗಾಳ
ಜೆಡಿಎಸ್ ಮುಖಂಡರಲ್ಲಿ ಮೂಡುವ ಅಸಮಾಧಾನದ ಲಾಭ ಪಡೆಯಲು ಕಾಂಗ್ರೆಸ್ ಇನ್ನಿಲ್ಲದ ಸರ್ಕಸ್ ನಡೆಸುತ್ತಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯರಾಗಿದ್ದು, ಈಗ ವರಿಷ್ಠರ ಅವಕೃಪೆಗೆ ಒಳಗಾಗಿರುವ ಮುಖಂಡರು ಮತ್ತು ಜೆಡಿಎಸ್ ಸ್ಥಳೀಯ ನಾಯಕರ ಬಗ್ಗೆ ಅಸಮಧಾನ ಹೊಂದಿರುವ ಮುಖಂಡರ ರಾಜಿ ಕಬೂಲಿಗೆ ಕಾಂಗ್ರೆಸ್ ಮುಖಂಡರು ಇಳಿದಿದ್ದಾರೆ ಎನ್ನಲಾಗಿದೆ.












Click it and Unblock the Notifications