ಮದರಸಗಳಲ್ಲಿ ಭಗವದ್ಗೀತೆ : ಸರಕಾರಿ ಸುತ್ತೋಲೆ ವಾಪಸ್
ಭೋಪಾಲ್, ಆ 7: ಭಾರೀ ವಿವಾದಕ್ಕೆ ಈಡಾಗಿದ್ದ ಮದರಸಗಳಲ್ಲಿ, ಸರಕಾರೀ ಉರ್ದು ಶಾಲೆಗಳಲ್ಲಿ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಭಗವದ್ಗೀತೆ ಭೋದನೆಯ ಆದೇಶವನ್ನು ಮಧ್ಯಪ್ರದೇಶದ ಬಿಜೆಪಿ ಸರಕಾರ ಹಿಂದಕ್ಕೆ ಪಡೆದಿದೆ.
ಇದೊಂದು ಉತ್ತಮ ನಿರ್ಧಾರವಾಗಿದ್ದರೂ ವಿರೋಧ ಪಕ್ಷಗಳು ಇದಕ್ಕೆ ಜಾತಿ ಲೇಪ ಹಚ್ಚುತ್ತಿರುವುದರಿಂದ ಒಲ್ಲದ ಮನಸ್ಸಿನಿಂದ ಈ ಆದೇಶವನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಅಲ್ಪಸಂಖ್ಯಾತರ ಶಾಲೆಗಳೂ ಸೇರಿದಂತೆ, ಇತರ ಶಾಲೆ ಮತ್ತು ಮದರಸಗಳಲ್ಲಿ ಹಿಂದೂ ಪವಿತ್ರ ಗ್ರಂಥ ಭಗವದ್ಗೀತೆ ಬೋಧಿಸಬೇಕೆಂದು ಮಧ್ಯಪ್ರದೇಶ ಸರಕಾರ ಸುತ್ತೋಲೆ ಹೊರಡಿಸಿತ್ತು.
ಆಗಸ್ಟ್ ಒಂದರಿಂದಲೇ ಅನ್ವಯವಾಗುವಂತೆ, ಬಿಜೆಪಿ ಸರಕಾರದ ಈ ಆದೇಶದಿಂದ ವಿವಾದದ ಬೆಂಕಿ ಸೃಷ್ಟಿಯಾಗಿ ಆಡಳಿತ ಸರಕಾರ ವಿರೋಧ ಪಕ್ಷಗಳ ಬಾಯಿಗೆ ಸುಖಾಸುಮ್ಮನೆ ಆಹಾರವಾದಂತಾಗಿತ್ತು.
ರಾಜ್ಯದ ಆಂಗ್ಲ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಮೂರು ಅಥವಾ ನಾಲ್ಕನೇ ತರಗತಿಯಿಂದ ಮತ್ತು ಉರ್ದು ಶಾಲೆಗಳಲ್ಲಿ ಒಂದು ಅಥವಾ ಎರಡನೇ ತರಗತಿಯಿಂದಲೇ ಭಗವದ್ಗೀತೆ ಬೋಧಿಸುವಂತೆ ರಾಜ್ಯದ ಶಿಕ್ಷಣ ಸಚಿವಾಲಯ ಆದೇಶ ಹೊರಡಿಸಿತ್ತು.
ವಿರೋಧ ಪಕ್ಷಗಳ ತೀವ್ರ ಟೀಕೆಯ ನಡುವೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಆಡಳಿತಾರೂಢ ಬಿಜೆಪಿ, ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಾಗಿದೆ.
ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಬೋಧಿಸುವುದರಿಂದ ಮಕ್ಕಳ ಜ್ಞಾನಾರ್ಜನೆಗೆ ಅನುಕೂಲವಾಗಲಿದೆ. ಶೈಕ್ಷಣಿಕ ವಿಚಾರದಲ್ಲಿ ರಾಜಕೀಯ ತರಬೇಡಿ ಎಂದು ಮಧ್ಯಪ್ರದೇಶದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಅಜಯ್ ವಿಷ್ಣೋಯ್ ಸರಕಾರದ ನಿರ್ಧಾರವನ್ನು ಈ ಹಿಂದೆ ಸಮರ್ಥಿಸಿಕೊಂಡಿದ್ದರು.
ಎಲ್ಲಾ ಧರ್ಮದ ಗ್ರಂಥಗಳಲ್ಲೂ ಪಾವಿತ್ರ್ಯತೆ ಇದೆ. ನಿಮಗೇ ಬರೀ ಭಗವದ್ಗೀತೆ ಮಾತ್ರ ಕಾಣಿಸಿತೇ? ಬೈಬಲ್ ಮತ್ತು ಕುರಾನ್ ಕಾಣಿಸಲಿಲ್ಲವೇ ಎಂದು ವಿರೋಧ ಪಕ್ಷ ಕಾಂಗ್ರೆಸ್ ಪಕ್ಷ ಬಿಜೆಪಿ ಸರಕಾರವನ್ನು ಟೀಕಿಸಿತ್ತು.
ಇನ್ನು ಕೆಲವೇ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ.