ಬೆಳಗಾವಿ ಗಡಿ ವಿವಾದ ಕಿಡಿ ಹಚ್ಚಿದ ಎಂಇಎಸ್
ಬೆಳಗಾವಿ, ಆ.7: ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡ ಕಿರಣ್ ಠಾಕೂರ್ ಕೇಂದ್ರ ಸರ್ಕಾರ ಬರೆದಿದ್ದ ಪತ್ರವನ್ನು ಗೃಹ ಸಚಿವಾಲಯ ಸ್ವೀಕರಿಸಿದೆ. ಈ ಮೂಲಕ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಮತ್ತೆ ಎಂಇಎಸ್ ಚಾಲನೆ ನೀಡಿದೆ.
ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಹೆಚ್ಚಾಗಿದ್ದಾರೆ. ಕರ್ನಾಟಕ ಸರ್ಕಾರ ಮರಾಠಿಗರ ಬಗ್ಗೆ ದಿವ್ಯ ನಿರ್ಲಕ್ಷ ತಾಳಿದೆ. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿದರೆ ಸಮಸ್ಯೆ ಬಗೆಹರಿಸಿದ್ದಂತಾಗುತ್ತದೆ.
ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ವಾರದ ಹಿಂದೆ ಕಿರಣ್ ಠಾಕೂರ್ ಪತ್ರ ಬರೆದಿದ್ದರು. ಆದರೆ, ಹೊಸ ರಾಜ್ಯ ಬೇಡಿಕೆ, ಕೇಂದ್ರಾಡಳಿತ ಪ್ರದೇಶ ನಿರ್ಮಾಣದ ಬಗ್ಗೆ ಯಾವುದೇ ಹೊಸ ನಿರ್ಣಯ ಕೈಗೊಳ್ಳದ ಯುಪಿಎ ಸರ್ಕಾರ ಭಾಷಾವಾರು ರಾಜ್ಯ ಸ್ಥಾಪನೆ ಉಪ ಸಮಿತಿ ರಚನೆ ಬಗ್ಗೆ ಕೂಡಾ ವಿಳಂಬ ಧೋರಣೆ ಅನುಸರಿಸಿತ್ತು.

ಈ ಮಧ್ಯೆ ಕೇಂದ್ರ ಸರ್ಕಾರಕ್ಕೆ ಎಂಇಎಸ್ ಮುಖಂಡ ಬರೆದ ಬರೆದ ಪತ್ರ ಗೃಹ ಸಚಿವಾಲಯ ತಲುಪಿರುವ ಬಗ್ಗೆ ಅಲ್ಲಿನ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ, ಈ ಹಿಂದೆ ಇಂಥ ಅನೇಕ ಅರ್ಜಿಗಳು ಸಚಿವಾಲಯದ ಮುಂದೆ ಬಂದಿದ್ದವಾದರೂ ಗಡಿ ವಿವಾದ ಸದ್ಯಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ. ಕೋರ್ಟ್ ತೀರ್ಪು ಹೊರಬೀಳುವ ತನಕ ಯಾವುದೇ ಹೊಸ ಅರ್ಜಿಯನ್ನು ಸ್ವೀಕರಿಸದಂತೆ ಗೃಹ ಸಚಿವಾಲಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.
ಇತ್ತೀಚೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡ ಕಿರಣ ಠಾಕೂರ್ ಅವರು ಮಾತನಾಡಿ, 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಮಾಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಾಡಿದ ಲೋಪದ ಫಲವಾಗಿ ಇಂದು ಮರಾಠಿಗರು ಕಷ್ಟದ ದಿನಗಳನ್ನು ಕಾಣುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ತಾನು ಮಾಡಿದ ತಪ್ಪನ್ನು ತಿದ್ದುಕೊಳ್ಳಲು ಇದು ಸೂಕ್ತ ಸಮಯ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕೂಡಾ ಸಂಸತ್ತಿನಲ್ಲಿ ಮರಾಠಿಗರಿಗೆ ಅನ್ಯಾಯವಾಗುತ್ತಿರುವುದನ್ನು ಒಪ್ಪಿಕೊಂಡಿದ್ದರು. 1977ರ ವೇಳೆಗೆ ಎಲ್ಲವನ್ನು ಸರಿಪಡಿಸುವ ಭರವಸೆ ನೀಡಿದ್ದರು. ಆದರೆ, ಯಾವುದೇ ಭರವಸೆ ಈಡೇರಿಲ್ಲ.
ಮಹಾರಾಷ್ಟ್ರ ಸರ್ಕಾರ ಗಡಿ ವಿವಾದವನ್ನು 2004ರಲ್ಲಿ ಸುಪ್ರೀಂಕೋರ್ಟಿಗೆ ತೆಗೆದುಕೊಂಡು ಹೋಯಿತು. ಆದರೆ, ಇನ್ನೂ ಸಮಸ್ಯೆ ಬಗೆಹರಿದಿಲ್ಲ. 25 ಲಕ್ಷ ಮರಾಠಿಗರ ಭವಿಷ್ಯದ ಜತೆ ಆಟವಾಡುವುದನ್ನು ನಿಲ್ಲಿಸಿ. ಗಡಿ, ಭಾಷಾ ಸಮಸ್ಯೆ ಬಗೆಹರಿಯುವ ತನಕ ಬೆಳಗಾವಿಯನ್ನು ಕೇಂದ್ರ ಸರ್ಕಾರದ ವಶಕ್ಕೆ ಒಪ್ಪಿಸಿಬಿಡಿ ಎಂದು ಹೇಳಿದರು. (ಪಿಟಿಐ)












Click it and Unblock the Notifications