ಬೆಂಗಳೂರಿನ ಕಸದ ಸಮಸ್ಯೆ ನಿವಾರಣೆಗೆ ವಿದೇಶಿ ತಜ್ಞರು
ಬೆಂಗಳೂರು, ಆ.2 : ಮಹಾನಗರ ಬೆಂಗಳೂರಿನ ಕಸದ ಸಮಸ್ಯೆ ಬಗೆಹರಿಯಲಿದೆ. ನಗರಕ್ಕೆ ಆಗಮಿಸಿರುವ ವಿದೇಶಿ ಪರಿಸರ ವಿಜ್ಞಾನಿಗಳ ತಂಡ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದೆ. ತಜ್ಞರ ಪ್ರಸ್ತಾವನೆಯನ್ನು ಸರ್ಕಾರ ಜಾರಿಗೆ ತಂದರೆ, ಕಸದಿಂದ ಮುಕ್ತಿ ದೊರೆಯಲಿದೆ.
ಕೆಪಿಸಿಸಿ ಕಾನೂನು ಮತ್ತು ಮಾನವಹಕ್ಕುಗಳ ವಿಭಾಗ ಮಂಡೂರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿದೇಶಿ ಪರಿಸರ ವಿಜ್ಞಾನಿಗಳನ್ನು ಆಹ್ವಾನಿಸಿತ್ತು. ನಗರದ ಕಸದ ಸಮಸ್ಯೆ ನಿವಾರಣೆ ಮಾಡಲು ಮಾರ್ಗಸೂಚಿಗಳನ್ನು ನೀಡುವಂತೆ ಮನವಿ ಮಾಡಿತ್ತು.
ಗುರುವಾರ ಮಂಡೂರು ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ತಂಡ, ಒಂದು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿತು. ಅವೈಜ್ಞಾನಿಕ ಕಸ ವಿಲೇವಾರಿಯಿಂದ ನಗರದಲ್ಲಿ ಕಸದ ಸಮಸ್ಯೆ ಉಂಟಾಗಿದೆ ಎಂದು ವಿಶ್ಲೇಷಿಸಿತು.
ಸರ್ಕಾರ ಅವಕಾಶ ನೀಡಿದರೆ, ವೈಜ್ಞಾನಿಕ ವಿಲೇವಾರಿ ಮಾಡಿ, ಕಸದ ಸಮಸ್ಯೆ ಬಗೆಹರಿಸಲಾಗುವುದು ಎಂದು ಸ್ವಿಜರ್ ಲೆಂಡ್ ಮತ್ತು ಜರ್ಮನಿಯ ಒಬ್ಬರು. ಕೆನಡಾದ ಇಬ್ಬರು ಪರಿಸರ ವಿಜ್ಞಾನಿಗಳಿದ್ದ ತಂಡ ಈ ಭರವಸೆ ನೀಡಿತು.

ಪ್ರಾಯೋಗಿಕ ಮಾಹಿತಿ : ನಗರದ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಮರುಬಳಕೆ ಮಾಡಲು ಸಾಕಷ್ಟು ಅವಕಾಶಗಳಿವೆ. ಸರ್ಕಾರಕ್ಕೆ ಈ ಕುರಿತು ಪ್ರಾಯೋಗಿಕವಾಗಿ ಮಾಹಿತಿ ನೀಡಲಾಗುವುದು. ಸರ್ಕಾರ ಅವಕಾಶ ನೀಡಿದರೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮತ್ತು ಮರುಳಬಕೆ ಮಾಡುವ ವಿಧಾನವನ್ನು ತಿಳಿಸಲಾಗುವುದು ಎಂದು ತಂಡ ಹೇಳಿದೆ.
ಪೀಟರ್ ಸ್ಪಿಲ್ ಮಾನ್, ಡಾ. ಅರ್ನಾಂಡ್, ಅನಿತಾ ಸೋಯಿನ್, ಜಕಾರಿಯ ನೌರಿಯ ಈ ತಂಡ, ಕಳೆದ ವರ್ಷ ದುಬೈನಲ್ಲಿ ಕಸದ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಿದೆ. ಲ್ಯಾಂಡ್ಫಿಲ್ ಗ್ಯಾಸ್ ರಿಕವರಿ ಪ್ಲಾಂಟ್ ಸ್ಥಾಪಿಸಿ, ಕಸದ ವಾಸನೆಯೂ ಇಲ್ಲದಂತೆ ಮಾಡಿ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ತಂತ್ರಜ್ಞಾನ ತಂಡದ ಬಳಿ ಇದೆ.
ಶನಿವಾರ ಈ ತಂಡ ಸರ್ಕಾರಕ್ಕೆ ವರದಿ ನೀಡಲಿದೆ. ಬೆಂಗಳೂರಿನ ಕಸದ ಸಮಸ್ಯೆ ನಿವಾರಣೆಗೆ ಸರ್ಕಾರಕ್ಕೆ ವಿದೇಶಿ ತಜ್ಞರ ತಂಡ ಕೆಲವೊಂದು ಮಾರ್ಗಸೂಚಿಗಳನ್ನು ನೀಡಲಿದೆ. ಇದನ್ನು ಸರ್ಕಾರ ಜಾರಿಗೆ ತಂದರೆ, ಮಹಾನಗರ ಬೆಂಗಳೂರು ಸೇರಿದಂತೆ ವಿವಿಧ ಮಹಾನಗರ ಪಾಲಿಕೆಗಳ ಕಸದ ಸಮಸ್ಯೆ ಬಗೆಹರಿಯಬಹುದು.












Click it and Unblock the Notifications