ಭಾಜಪ ಶಾಸಕರಿಂದ ಮತ್ತೊಮ್ಮೆ ಯಡಿಯೂರಪ್ಪ ಜಪ
ಬೆಂಗಳೂರು, ಜುಲೈ30: ಮಾಜಿ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ತಮ್ಮ ಪಕ್ಷಕ್ಕೆ ಮರಳಿ ಕರೆಸಿಕೊಳ್ಳುವ ಪ್ರಯತ್ನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಬಿಜೆಪಿ ನಾಯಕರು ಸಮಾಜವಾದಿ ಪಕ್ಷದ ನಾಯಕರ ಜತೆ ಯಡಿಯೂರಪ್ಪ ಭಾನುವಾರ ಸುಮಾರು ಹೊತ್ತು ಏಕಾಂತದಲ್ಲಿ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಮತ್ತೆ ಅದೇ ರಾಗ ಹಾಡಲಾರಂಭಿಸಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಜತೆ ಮಾತುಕತೆ ನಡೆಸುವ ಮೂಲಕ ಬಿಜೆಪಿ ಮಂದಿಗೆ ಬಿಸಿ ಮುಟ್ಟಿಸಿದ್ದ ಯಡಿಯೂರಪ್ಪಗೆ ಸದ್ಯದಲ್ಲೇ ನಡೆಯಲಿರುವ ಎರಡು ಲೋಕಸಭಾ ಕ್ಷೇತ್ರಗಳು ಹಾಗೂ ಮೂರು ವಿಧಾನಪರಿಷತ್ ಕ್ಷೇತ್ರಗಳ ಉಪಚುನಾವಣೆಗಳು ವರವಾಗಿ ಪರಿಣಮಿಸಿವೆ.

ಎಲ್ಲಿ, ಯಾವಾಗ, ಏನಾಯ್ತು?
ಚುನಾವಣೆಗೆ ಪಕ್ಷದ ವತಿಯಿಂದ ಸಿದ್ಧತೆ ನಡೆಸಲು ಸೋಮವಾರ ರಾತ್ರಿ ನಗರದ ಮಲ್ಲೇಶ್ವರದಲ್ಲಿನ ಪಕ್ಷದ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಬಿಎಸ್ವೈ ಅವರನ್ನು ವಾಪಸ್ ಕರೆತನ್ನಿ ಎಂಬ ಆಗ್ರಹ ಶಾಸಕರಿಂದ ಮತ್ತೂಮ್ಮೆ ಬಲವಾಗಿ ಕೇಳಿಬಂದಿದೆ.

ಅನಂತ ಕುಮಾರ್ ಮನಸ್ಸು ಮಾಡಿದರೆ ಸುಗಮ
ಈ ಸಭೆಯಲ್ಲಿ ಶಾಸಕರಾದ ಕೆಜಿ ಬೋಪಯ್ಯ, ಡಿಎನ್ ಜೀವರಾಜ್, ಎಸ್ಆರ್ ವಿಶ್ವನಾಥ್, ಗೋ ಮಧುಸೂದನ್, ಬಸವರಾಜ ಬೊಮ್ಮಾಯಿ ಮೊದಲಾದವರು ಉಪಸ್ಥಿತರಿದ್ದು, ಉಪಚುನಾವಣೆ ಸೇರಿದಂತೆ ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ವಾಪಸ್ ಕರೆತರುವುದು ಅಗತ್ಯ. ಈ ಬಗ್ಗೆ ಕೂಡಲೇ ಪ್ರಯತ್ನ ನಡೆಸಿ ಎಂಬ ಆಗ್ರಹವನ್ನು ಮುಂದಿಟ್ಟರು ಎಂದು ತಿಳಿದು ಬಂದಿದೆ.

ರಾಗ-ದ್ವೇಷ ಬದಲಿಸಿದ ಯಲಹಂಕ ಶಾಸಕ ವಿಶ್ವನಾಥ್:
ಶಾಸಕ ವಿಶ್ವನಾಥ್ ಅವರಂತೂ ನೇರವಾಗಿ ವೇದಿಕೆ ಮೇಲಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಅವರನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಅನಂತ್ + ಯಡಿಯೂರಪ್ಪ ಒಂದೇ ರೂಮಿನಲ್ಲಿ
ಅನಂತಕುಮಾರ್ ಮನಸ್ಸು ಮಾಡಿದರೆ ಯಡಿಯೂರಪ್ಪ ಅವರನ್ನು ಕರೆತರುವುದು ದೊಡ್ಡ ವಿಚಾರವೇನಲ್ಲ. ಅವರಿಬ್ಬರೂ ಒಂದು ಕೋಣೆಯಲ್ಲಿ ಒಂದು ಗಂಟೆ ಚರ್ಚೆ ಮಾಡಿ ಹೊರಬಂದರೆ ಸಾಕು. ಭಿನ್ನಾಭಿಪ್ರಾಯಗಳೆಲ್ಲ ಇತ್ಯವಾಗುತ್ತವೆ ಎಂದು ಹೇಳಿದಾಗ ಅದಕ್ಕೆ ಅನಂತ ಕುಮಾರ್ ಮುಗುಳ್ನಗುವೇ ಉತ್ತರವಾಗಿತ್ತು.

ಎಲ್ಲಾ ಹೈಕಮಾಂಡ್ ನಿರ್ಧಾರಕ್ಕೆ
ಆದರೆ ಶಾಸಕರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಪಕ್ಷದ ನಾಯಕರು, ಇದರಲ್ಲಿ ನಮ್ಮ ಪಾತ್ರವೇನೂ ಹೆಚ್ಚು ಇಲ್ಲ. ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಹೈಕಮಾಂಡಿಗೆ ಬಿಡಲಾಗಿದೆ. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಎಂಬ ಸಮಜಾಯಿಷಿಯನ್ನು ನೀಡಿದರು ಎಂದು ಮೂಲಗಳು ತಿಳಿಸಿವೆ.

ವೇದಿಕೆಯ ಮೇಲಿದ್ದ ರಾಜ್ಯ ನಾಯಕರು ಯಾರು?
ವೇದಿಕೆಯ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಸಂಸದ ಅನಂತಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಸದಾನಂದ ಗೌಡ ಮತ್ತಿತರರು ಆಸೀನರಾಗಿದ್ದರು.












Click it and Unblock the Notifications