ಬಿಜಾಪುರ : ಭೀಕರ ರಸ್ತೆ ಅಪಘಾತ 18 ಸಾವು

ಮಹಾರಾಷ್ಟ್ರದಿಂದ ಆಗಮಿಸಿದ್ದ ಕ್ರೂಸರ್ ಬಿಜಾಪುರ-ಸಿಂಧಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕ್ರೂಸರ್ ನಲ್ಲಿದ್ದ 18 ಮಂದಿ ಸಾವನ್ನಪ್ಪಿದ್ದಾರೆ. ಆರು ಜನರು ಗಾಯಗೊಂಡಿದ್ದು, ಸಿಂದಗಿ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದಾಗಿ ಬಿಜಾಪುರ-ಸಿಂದಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳಕ್ಕೆ ಧಾವಿಸಿರುವ ಪೊಲೀಸರು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲು ಪ್ರಯತ್ನ ನಡೆಸಿದ್ದಾರೆ.
ಬೆಂಗಳೂರು : ಹೃದಯಾಘಾತದಿಂದ ದಿನೇಶ್ ಎಂಬ ಬಸ್ ಕಂಡಕ್ಟರ್ ಮೃತಪಟ್ಟ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಂದಿನಿ ಲೇಔಟ್ ನಿಂದ ಮೆಜೆಸ್ಟಿಕ್ ಗೆ ಬಂದ 80 ಎ ಬಸ್ ನಲ್ಲಿ ಕಂಡಕ್ಟರ್ ಆಗಿ ದಿನೇಶ್ ಕಾರ್ಯ ನಿರ್ವಹಿಸುತ್ತಿದ್ದರು. ಬಸ್ ಮೆಜೆಸ್ಟಿಕ್ ಗೆ ಆಗಮಿಸಿದ ಕೂಡಲೇ ದಿನೇಶ್ ಅವರಿಗೆ ಎದೆನೋವು ಕಾಣಿಸಿಕೊಂಡು, ಬಸ್ ನಲ್ಲೇ ಕುಸಿದು ಬಿದ್ದರು. ಅವರನ್ನು ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಉಡುಪಿ : ಮೂಡುಬಿದಿರೆ ಪುರಸಭೆಯ ಕಾಂಗ್ರೆಸ್ ಸದಸ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ಶಿವರಾಜ್ ರೈ (41) ಆತ್ಮಹತ್ಯೆ ಮಾಡಿಕೊಂಡ ಸದಸ್ಯರು. ಮಾರಿಯಾಡಿ ವಾರ್ಡ್ನಿಂದ ಪುರಸಭೆಗೆ ಆಯ್ಕೆಯಾಗಿದ್ದ ಇವರು, ಇಂದು ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಹುಬ್ಬಳ್ಳಿ : ಮುತ್ತೂಟ್ ಫೈನಾನ್ಸ್ ಕಚೇರಿಯ ಸ್ಟೇರ್ ಕೇಸ್ ಕುಸಿದು ಸಂದರ್ಶನಕ್ಕೆ ಬಂದಿದ್ದ 22 ಜನರು ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಕಚೇರಿಯಲ್ಲಿ ನಡೆದಿದೆ. ಕಚೇರಿಯೊಳಗೆ ಜನರು ತುಂಬಿ ಹೋಗಿದ್ದರಿಂದ 150 ಮಂದಿ ಸ್ಟೇರ್ ಕೇಸ್ ಮೇಲೆ ನಿಂತಿದ್ದರು. ಈ ಸಮಯದಲ್ಲಿ ಅದು ಕುಸಿದು ಬಿದ್ದು, ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು : ಸೆಕ್ಯುರಿಟಿ ಗಾರ್ಡ್ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿಯೋರ್ವ ಗಾಯಗೊಂಡಿರುವ ಘಟನೆ ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆ ಎಸ್ ಬಿಐ ಬ್ಯಾಂಕಿನ ಎಟಿಎಂ ಬಳಿ ನಡೆದಿದೆ. ಎಟಿಎಂಗೆ ಹಣ ತುಂಬಿಸುವವರ ಜೊತೆಗೆ ಬಂದಿದ್ದ ಸೆಕ್ಯುರಿಟಿ ಗಾರ್ಡ್ ನ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು, ಎಟಿಎಂ ಬಳಿ ಹೋಗುತ್ತಿದ್ದ ಚಂದ್ರು ಎಂಬುವವರ ಕಾಲಿಗೆ ತಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಡ್ಯ : ಮಳವಳ್ಳಿ ಪಟ್ಟಣದಲ್ಲಿ ಡೆಂಗ್ಯೂ ಜ್ವರಕ್ಕೆ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. ಸುಮಾರು ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಪಟ್ಟಣದ ಸಾರಿಕಾ(7) ಮತ್ತು ಪಾರ್ವತಿ (10) ಅವರನ್ನು ಸೋಮವಾರ ಮೈಸೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕಳೆದ ವಾರವೂ 4 ವರ್ಷದ ಮಗುವೊಂದು ಪಟ್ಟಣದಲ್ಲಿ ಡೆಂಗ್ಯೂದಿಂದ ಮೃತಪಟ್ಟಿತ್ತು.
ಚಿತ್ರದುರ್ಗ : ಅನುಕಂಪದ ಆಧಾರದ ಮೇಲೆ ತಂದೆಯ ಸರ್ಕಾರಿ ನೌಕರಿ ಪಡೆಯಲು ಅವರನ್ನೇ ಕೊಲೆ ಮಾಡಿದ್ದ ಪಾಪಿ ಮಗನನ್ನು ಚಳ್ಳಕೆರೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮೂರು ದಿನಗಳ ಹಿಂದೆ ಚಳ್ಳಕೆರೆ ಪುರಸಭೆಯ ಡಿ ದರ್ಜೆ ನೌಕರ ಶಿವಾನಂದ(54) ಅವರನ್ನು ಪುತ್ರ, ಅರ್ಜುನ್ ಕೊಲೆ ಮಾಡಿ, ಬುಡ್ಡನಹಟ್ಟಿ ಸೇತುವೆ ಬಳಿ ಶವ ಎಸೆದಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸೋಮವಾರ, ಅರ್ಜುನ್ ಮತ್ತು ಆತನ ಮೂವರು ಸ್ನೇಹಿತರನ್ನು ಬಂಧಿಸಿದ್ದಾರೆ. ಉದ್ಯೋಗಕ್ಕಾಗಿ ತಂದೆಯನ್ನು ಕೊಲೆ ಮಾಡಿರುವುದಾಗಿ ಅರ್ಜುನ್ ಒಪ್ಪಿಕೊಂಡಿದ್ದಾನೆ.












Click it and Unblock the Notifications