ಆಸಿಡ್ ದಾಳಿ ಜಾಮೀನು ರಹಿತ ಅಪರಾಧ : ಸುಪ್ರೀಂ
ಆಸಿಡ್ ಮಾರಾಟವನ್ನು ನಿರ್ಬಂಧಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸುವಂತೆ ಕೋರಿ, ದಾಳಿಗೊಳಗಾಗಿದ್ದ ಲಕ್ಷ್ಮಿ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಎಂ.ಲೋಧಾ ನೇತೃತ್ವದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.
ಆದೇಶವೇನು : ಆಸಿಡ್ ದಾಳಿಗೆ ಗುರಿಯಾದ ಸಂತ್ರಸ್ತರಿಗೆ ನೀಡುವ ಪರಿಹಾರದ ಧನವನ್ನು 50 ಸಾವಿರದಿಂದ 3 ಲಕ್ಷಕ್ಕೆ ಹೆಚ್ಚಿಸಬೇಕು ಎಂಬುದು ಸುಪ್ರೀಂಕೋರ್ಟ್ ನೀಡಿರುವ ಪ್ರಮಖವಾದ ಆದೇಶ.
ಪರಿಹಾರ ಮೊತ್ತದಲ್ಲಿ ಒಂದು ಲಕ್ಷವನ್ನು ಘಟನೆ ನಡೆದ 15 ದಿನಗಳೊಗೆ ಸಂತ್ರಸ್ತೆಗೆ ನೀಡಬೇಕು. ಉಳಿದ ಹಣವನ್ನು 2 ತಿಂಗಳಿನಲ್ಲಿ ನೀಡಬೇಕು ಎಂದು ತಿಳಿಸಿದೆ. ಆಸಿಡ್ ದಾಳಿಯನ್ನು ಜಾಮೀನುರಹಿತ ಅಪರಾಧವೆಂದು ಪರಿಗಣಿಸಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯ ಸರ್ಕಾರಗಳಿಗೆ ನಿರ್ದೇಶನ : ರಾಜ್ಯ ಸರ್ಕಾರಗಳು ಆಸಿಡ್ನ ಮುಕ್ತ ಮಾರಾಟವನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳಬೇಕು.1919ರ ವಿಷ ಉತ್ಪನ್ನಗಳ ಕಾಯ್ದೆಯ ಪ್ರಕಾರ ಅಪಾಯಕಾರಿ ವಿಷ ಎಂದು ಆಸಿಡ್ ಅನ್ನು ಪರಿಗಣಿಸಬೇಕು ಎಂದು ಸುಪ್ರೀಂ ನಿರ್ದೇಶನ ನೀಡಿದೆ.
ಮಾರಾಟಕ್ಕೆ ಸೂತ್ರಗಳು : ಆಸಿಡ್ ಮಾರಾಟ ಮಾಡುವ ಅಂಗಡಿಯವರು ಪ್ರತ್ಯೇಕವಾದ ಅನುಮತಿಯನ್ನು ಪಡೆಯಬೇಕು. ಆಸಿಡ್ ದಾಸ್ತಾನಿನ ವರದಿಯನ್ನು ವಿಭಾಗಾಧಿಕಾರಿಗಳಿಗೆ ಸಲ್ಲಿಸಬೇಕು. ವಿವರ ಸಲ್ಲಿಸದಿದ್ದರೆ, ಮಾಲೀಕರಿಗೆ 50 ಸಾವಿರ ದಂಡ ವಿಧಿಸಬೇಕು ಎಂದು ಆದೇಶಿಸಿದೆ.
ಮುಕ್ತ ಮಾರುಕಟ್ಟೆಯಲ್ಲಿ ಆಸಿಡ್ ಮಾರಾಟ ವಾಗುತ್ತಿರುವುದರಿಂದ ದಾಳಿ ನಡೆಸಲು ಸುಲಭವಾಗುತ್ತಿದೆ. ಮಾರಾಟದ ನೀತಿ ನಿಯಮಾವಳಿಗಳನ್ನು ಬಿಗಿಗೊಳಿಸಬೇಕು ಎಂದಿರುವ ಕೋರ್ಟ್, ಮೂರು ತಿಂಗಳವೊಳಗೆ ಈ ಆದೇಶ ಕಟ್ಟು ನಿಟ್ಟಾಗಿ ಜಾರಿಗೆ ಬರಬೇಕು ಎಂದು ಹೇಳಿದೆ.
ಶಿಕ್ಷಣ ಸಂಸ್ಥೆಗಳಿಗೂ ಅನ್ವಯ : ಶಿಕ್ಷಣ ಸಂಸ್ಥೆಯ ಲ್ಯಾಬ್ಗಳಲ್ಲಿ ಬಳಕೆಯಾಗುವ ಆಸಿಡ್ ಬಗ್ಗೆಯೂ ನಿಗಾ ವಹಿಸುವಂತೆ ಕೋರ್ಟ್ ಸೂಚಿಸಿದೆ. ಶಿಕ್ಷಣ ಸಂಸ್ಥೆಗಳು ಆಸಿಡ್ ದಾಸ್ತಾನು ಕುರಿತು ವಿವರ ಸಂಗ್ರಹಿಸಲು ಮೇಲ್ವಿಚಾರಕನನ್ನು ನೇಮಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.