ಬಿಸಿಯೂಟ ಅನಾಹುತ: ಸಾವಿನ ಸಂಖ್ಯೆ 20ಕ್ಕೆ ಏರಿಕೆ

ಹಿಂದಿನ ಸುದ್ದಿ : ಬಿಹಾರದ ಸರಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 11 ಮಕ್ಕಳು ಸಾವಿಗೀಡಾದ ಆಘಾತಕಾರಿ ಘಟನೆ ನಡೆದಿದೆ. ಶಾಲೆಯ 48 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿದ್ದಾರೆ.
ಶರಣ್ ಜಿಲ್ಲೆಯ ಮಶ್ರಖ್ ಎಂಬ ಹಳ್ಳಿಯಲ್ಲಿ ಮಂಗಳವಾರ ಈ ಅಚಾತುರ್ಯ ನಡೆದಿದೆ. ಛಾಪ್ರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಹಳ್ಳಿಯ ಧರ್ಮಸತಿ ಪ್ರಾಥಮಿಕ ಶಾಲೆಯಲ್ಲಿ ಈ ಅನಾಹುತ ನಡೆದಿದೆ.
ಶಾಲೆಯಲ್ಲಿ 8 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟಕ್ಕೆಂದು ಖಿಚಡಿ ನೀಡಲಾಗಿತ್ತು, ಅದರಲ್ಲಿ ಅನ್ನ, ಕಾಳು, ಸೋಯಾಬಿನ್ ಇತ್ತು. ಇದನ್ನು ಸೇವಿಸಿದ ತಕ್ಷಣವೇ ಮಕ್ಕಳು ಅಸ್ವಸ್ಥರಾದರು. 11 ಮಕ್ಕಳು ಆಸ್ಪತ್ರೆಗೆ ತೆರಳುವ ಮಾರ್ಗದಲ್ಲೇ ಸಾವಿಗೀಡಾದರು. ಇತರೆ ಮಕ್ಕಳನ್ನು ಸಮೀಪದ ಛಾಪ್ರಾ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋಪೋದ್ರಿಕ್ತ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ತಪ್ಪಿತಸ್ಥ ಶಿಕ್ಷಕರು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
2 ಲಕ್ಷ ಪರಿಹಾರ:
ಸತ್ತ ಮಕ್ಕಳ ಕುಟುಂಬಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ತಕ್ಷಣ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ತನಿಖೆಗೂ ಆದೇಶಿಸಿದ್ದಾರೆ. ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಧಾವಿಸಿ ದೋಷಯುಕ್ತ ಆಹಾರದ ಸ್ಯಾಂಪಲ್ ಸಂಗ್ರಹಿಸಿದ್ದಾರೆ.












Click it and Unblock the Notifications