ಸಿದ್ದು 'ಕರ'ಮತ್ತು: ಶೆಟ್ಟರು ಕೊಟ್ರು, ಇವರು ಕಿತ್ಕೊಂಡ್ರು
ಬೆಂಗಳೂರು, ಜುಲೈ 13: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಜೋರಾಗಿಯೇ ಇದೆ. ಆದರೆ ಪ್ರತಿಪಕ್ಷಗಳು ಎಂದಿನಂತೆ 'ಹಳೆ ಬಾಟಲಿ- ಹೊಸ ಮದ್ಯ' ಎಂದು ರಾಗವಾಗಿ ಹಾಡಿವೆ. ಆದರೆ ಈ ಮಧ್ಯೆ, ನಾಲ್ಕು ತಿಂಗಳ ಹಿಂದೆ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೊಡುಗೆಯಾಗಿ ಪ್ರಕಟಿಸಿದ್ದ ಕೆಲವು ಯೋಜನೆಗಳಿಗೆ ಸಿಎಂ ಸಿದ್ದು ಕೈ ಎತ್ತಿದ್ದಾರೆ ಎಂಬುದು ಗಮನಾರ್ಹ.
ಸಿಎಂ ಸಿದ್ದುದು ಉಳಿತಾಯ ಬಜೆಟ್: .ಸಿಎಂ ಸಿದ್ದು ಬಜೆಟ್ ಗಾತ್ರ ಶೆಟ್ಟರ್ ಬಜೆಟಿಗಿಂತ 4 ಸಾವಿರ ಕೋಟಿ ರೂ. ಅಧಿಕವಾಗಿದೆ. ಗಮನಿಸಿ ಶೆಟ್ಟರ್ ಅವರು 12 ತಿಂಗಳ ಅವಧಿಗೆ. ಆದರೆ ಸಿದ್ದರಾಮಯ್ಯ ಅವರು ಎಂಟೇ ತಿಂಗಳ ಅವಧಿಗೆ ಅನ್ವಯವಾಗುವ ಬಜೆಟ್ ನೀಡಿದ್ದರೂ ಬಜೆಟ್ ಗಾತ್ರವನ್ನು 4 ಸಾವಿರ ಕೋಟಿ ರೂ.ನಷ್ಟು ಹಿಗ್ಗಿಸಿದ್ದಾರೆ.
ಸಿದ್ದು ಬಜೆಟ್ ಗಾತ್ರ: 1,21,611 ಕೋಟಿ ರೂ. ಶೆಟ್ಟರ್ ಬಜೆಟ್ ಗಾತ್ರ: 1,13,000 ಕೋಟಿ ರೂ. ಆದರೂ ಸಿಎಂ ಸಿದ್ದು ಅವರದ್ದು 596 ಕೋಟಿ ರೂ. ಗಳ ಉಳಿತಾಯ ಬಜೆಟ್.

ಯಡಿಯೂರಪ್ಪಗೆ ಸೈಕಲ್ ಭಾಗ್ಯ
ಬಿಜೆಪಿ ಸರಕಾರ ಈ ಹಿಂದೆ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ. ಸಂಧ್ಯಾ ಸುರಕ್ಷಾ, ಶಾಲಾ ಮಕ್ಕಳಿಗೆ ಸೈಕಲ್ ವಿತಣೆ ಯೋಜನೆಗಳು ಅಬಾಧಿತ. ಆ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಶೆಟ್ಟರ್ ಆತುರಾತುರದ ಬಜೆಟಿಗೆ ಸಿದ್ದು ಬ್ರೇಕ್
ಆದರೆ ಮುಖ್ಯ ವಿಷಯಕ್ಕೆ ಬಂದಾಗ ಶೆಟ್ಟರ್ ಆತುರಾತುರವಾಗಿ ಮಂಡಿಸಿದ ಆಯವ್ಯಯದಲ್ಲಿದ್ದ ಕೊಡುಗೆಗಳನ್ನು ಈಗಿನ ಸರಕಾರ ಕಸಿದುಕೊಂಡಿದೆ. ಶೆಟ್ಟರ್ ಪ್ರಕಟಿಸಿದ್ದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸುಧಾರಣೆಗೆ 25 ಕೋಟಿ ರೂ. ಸ್ಥಗಿತ, ಧಾರವಾಡದ ಡಿಮ್ಹಾನ್ಸ್ ಆಸ್ಪತ್ರೆಯನ್ನು ಬೆಂಗಳೂರಿನ ನಿಮ್ಹಾನ್ಸ್ ಮಾದರಿಯಲ್ಲಿ ಅಭಿವೃದ್ಧಿಗೊಳಸಿಲು ಪ್ರಕಟಿಸಿದ್ದ 10 ಕೋಟಿ ಅನುದಾನ ಇನ್ನು ಗಗನಕುಸುಮ.

ಹುಬ್ಬಳ್ಳಿ ಧರ್ಮಾರ್ಥ ಆಸ್ಪತ್ರೆ ಕಣ್ಣಿಗೆ ಬಿದ್ದಿಲ್ಲ
ಬೆಂಗಳೂರಿನ ಶಂಕರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಗುರು ಮಹಿಪತರಾಜ ಟ್ರಸ್ಟ್ ಧರ್ಮಾರ್ಥ ಕಣ್ಣಿನ ಆಸ್ಪತ್ರೆಗೆ ತಲಾ 2 ಕೋಟಿ ರೂ. ಅನುದಾನವನ್ನು ಅಂದಿನ ಸಿಎಂ ಶೆಟ್ಟರ್ ಪ್ರಕಟಿಸಿದ್ದರು. ಆದರೆ ಶಂಕರ್ ಕ್ಯಾನ್ಸರ್ ಆಸ್ಪತ್ರೆಗೆ ಮಾತ್ರ ಅಸ್ತು ಎಂದಿರುವ ಹಾಲಿ ಮುಖ್ಯಮಂತ್ರಿಗೆ ಹುಬ್ಬಳ್ಳಿಯ ಗುರು ಮಹಿಪತರಾಜ ಧರ್ಮಾರ್ಥ ಆಸ್ಪತ್ರೆ ಕಣ್ಣಿಗೆ ಬಿದ್ದೇ ಇಲ್ಲ.

ಉತ್ತರ ಧ್ರುವದಿಂ ದಕ್ಷಿಣ ಧ್ರುವಕ್ಕೂ...
ತವರು ಜಿಲ್ಲೆಯ ಮೈಸೂರು ಮಹಾನಗರ ಪಾಲಿಕೆಗೆ 100 ಕೋಟಿ ಇಡಿಗಂಟು ನೀಡಿರುವ ಸಿಎಂ ಸಿದ್ದು, ಹುಬ್ಬಳ್ಳ- ಧಾರವಾಡ, ಬೆಳಗಾವಿ ಮತ್ತಿತರ ಪಾಲಿಕೆಗಳತ್ತ ಕಣ್ಣೆತ್ತಿ ನೋಡಿಲ್ಲ.
ಇನ್ನು, ಹೊಸ ತಾಲೂಕು ರಚನೆ ವಿಷಯದಲ್ಲಿ ಅಸ್ಪಷ್ಟ ನಿಲುವು ಹೊಂದಿರುವುದರಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ಯಾಯವಾಗಿದೆ ಶೆಟ್ಟರ್ ಮಂಡಿಸಿದ ಬಜೆಟ್ಟಿನಲ್ಲಿ ಉತ್ತರ ಕರ್ನಾಟಕಕ್ಕೆ ಬಂಪರ್ ಕೊಡುಗೆಗಳನ್ನು ನೀಡಿದ್ದರು. ಅದಕ್ಕೆ ಹೋಲಿಸಿದಲ್ಲಿ ಸಿದ್ದು ಬಜೆಟ್ ನಿರಾಸೆಯ ಬುತ್ತಿಯಾಗಿದೆ.

ಶೆಟ್ಟರ್ ಪ್ರಸ್ತಾವನೆ 'ಕೈ'ಬಿಟ್ಟ ಸಿದ್ದು
ಹೈನುಗಾರಿಕೆಗೆ ಪ್ರೋತ್ಸಾಹಕರವಾಗಿರುವ ಸಿದ್ದು ಸರಕಾರ ಧಾರವಾಡ ಹಾಲು ಒಕ್ಕೂಟ ಸೇರಿಎದಂತೆ ವಿವಿಧ ಡೇರಿಗಳಿಗೆ ಅಗತ್ಯ ಸೌಲಭ್ಯ ನೀಡುತ್ತದೆಂಬ ನಿರೀಕ್ಷೆ ಹುಸಿಯಾಗಿದೆ. ಶೆಟ್ಟರ್ ಅವರು ಪ್ರಕಟಿಸಿದ್ದ ಶಿರಸಿ ಉಕ್ಕೂಟ ಪ್ರಸ್ತಾವನೆಯನ್ನೂ 'ಕೈ'ಬಿಟ್ಟಿದ್ದಾರೆ ಸಿದ್ದು.












Click it and Unblock the Notifications