ಪ್ರಕೃತಿ ಸೊಬಗು ತುಂಬಿದ ಮಲೆನಾಡ ಮಳೆಚಿತ್ರ
ಶಿವಮೊಗ್ಗ, ಜು. 13 : ಕಳೆದ ವರ್ಷ ಭೀಕರ ಬರಗಾಲದಿಂದ ಕಂಗೆಟ್ಟುಹೋಗಿದ್ದ ಕರ್ನಾಟಕದ ಅನೇಕ ಪ್ರದೇಶಗಳು ಮುತ್ತುಮುತ್ತು ನೀರ ಹನಿಯ ಧಾಂತನಕಧೀಂಗೆ ಪುಳಕಿತವಾಗಿಹೋಗಿದೆ. ಸರಾಸರಿಗಿಂತ ಹೆಚ್ಚು ಮಳೆಯನ್ನು ಪಡೆಯುತ್ತಿರುವ ಮಲೆನಾಡು, ಕರಾವಳಿಗಳಲ್ಲಿ ಜೀವಜಲ ಜೀವಕಳೆ ಪಡೆದಿದೆ.
ಇನ್ನು ಶಿವಮೊಗ್ಗದಲ್ಲಿ ಧುಮ್ಮಿಕ್ಕಿ ಹರಿಯುತ್ತಿರುವ ನದಿ, ಹೊಳೆಗಳನ್ನು ನೋಡಿದರೆ ನಿತ್ಯೋತ್ಸವ ಕವಿ ಡಾ.ಕೆ.ಎಸ್. ನಿಸಾರ್ ಅಹ್ಮದ್ ಅವರು ಬರೆದ 'ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ...' ಹಾಡು ಮೇಲಿಂದ ಮೇಲೆ ನೆನಪಿಗೆ ಬರುತ್ತಲೇ ಇರುತ್ತದೆ.
ಒಂದೆಡೆ ಮೈದುಂಬಿಕೊಂಡು ದಿನದಿನಕ್ಕೆ ಉಬ್ಬಿ ಹರಿಯುತ್ತಿರುವ ಶರಾವತಿ ಜೋಗದ ಗುಂಡಿಯಲ್ಲಿ ಹೊಸ ಹುಮ್ಮಸ್ಸಿನಿಂದ ಧುಮುಕುತ್ತಿದ್ದರೆ, ಮತ್ತೊಂದೆಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು ಹೊಲಗದ್ದೆ, ರಸ್ತೆ, ಸೇತುವೆಗಳನ್ನು ಒಂದು ಮಾಡುತ್ತಿವೆ.
ಕೃಷಿಕರು ಬಿತ್ತನೆ ನಡೆಸುವಲ್ಲಿ ನಿರತರಾಗಿದ್ದಾರೆ. ಉತ್ಸಾಹಿ ಯುವಕರು ಹೆಗಲಿಗೆ ಬ್ಯಾಗ್ ಏರಿಸಿಕೊಂಡು ಮಲೆನಾಡ ಪಯಣಕ್ಕೆ ಅಣಿಯಾಗುತ್ತಿದ್ದಾರೆ. ಶಿವಮೊಗ್ಗದ ಪ್ರಕೃತಿಗೆ ಹೊಸ ಕಳೆ ತಂದ ಮಳೆಯ ವಿಶಿಷ್ಟಬಗೆಯ ಚಿತ್ರಗಳು ಇಲ್ಲಿವೆ ನೋಡಿರಿ. ಜೋಗ ಜಲಪಾತ ನೋಡಲು ಇದಕ್ಕಿಂತ ಉತ್ತಮ ಅವಕಾಶ ಬೇಕೆ?

ಆಹಾ ಜೋಗದ ಜಲಪಾತ
ನವನವೋನ್ಮೇಷಶಾಲಿನಿಯಂತೆ ಕಂಗೊಳಿಸುತ್ತಿರುವ ಶರಾವತಿ ಗೇರುಸೊಪ್ಪೆಯಲ್ಲಿ ಧುಮ್ಮಿಕ್ಕುತ್ತಿರುವ ದೃಶ್ಯ ಪದಗಳಲ್ಲಿ ವರ್ಣಿಸಲು ಅಸದಳ. ರಾಜಾ, ರಾಣಿ, ರೋರರ್, ರಾಕೆಟ್ ಜಲಧಾರೆಯನ್ನು ಅಲ್ಲಿಗೇ ಹೋಗಿ ನೋಡಬೇಕು. ಮಳೆ ತುಸು ಕಡಿಮೆಯಾಗುತ್ತಿದ್ದಂತೆ ಸಾಮಾನು ಸರಂಜಾಮು ಕಟ್ಟಿಕೊಂಡು ಜೋಗದ ಗುಂಡಿ ನೋಡಲು ಬಂಡಿ ಹತ್ತಿಬಿಡಿ. [ಹತ್ತು ದಿನಗಳ ಹಿಂದಿನ ಜೋಗದ ಚಿತ್ರಗಳು]

ನೋಡತಕ್ಕ ನಿಪ್ಲಿ ಫಾಲ್ಸ್ ಮತ್ತು ಡ್ಯಾಂ
ಜೋಗ ಜಲಪಾತದಿಂದ ಕೇವಲ 7 ಕಿ.ಮೀ. ದೂರದಲ್ಲಿರುವ ನಿಪ್ಲಿ ಡ್ಯಾಂ ಮತ್ತು ಸುಂದರ ಜಲಪಾತ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈ ಸ್ಥಳ ನೀರಿನಲ್ಲಿ ಆಡವಾಡುವವರಿಗೆ ಸುರಕ್ಷಿತವಾಗಿದ್ದು, ಜನಜಂಗುಳಿಯಿಂದಲೂ ದೂರವಿರುವುದರಿಂದ ಇನ್ನೂ ಸ್ವಚ್ಛವಾಗಿದೆ. ಜೋಗಕ್ಕೆ ಹೋದರೆ ಈ ಅದ್ಭುತ ತಾಣವನ್ನು ನೋಡಲು ಮರೆಯಬೇಡಿ.

ಚಾರಣಕ್ಕೆ ಸಜ್ಜಾಗಿ ಯುವಕರೆ
ಮೋಡಾಚ್ಛಾದಿತ ಆಗಸ, ಇಳೆಯನ್ನು ನೆನೆಸುತ್ತಿರುವ ಮಳೆಯ ಹನಿಗಳು, ಸುತ್ತಲೂ ಹೊದ್ದುಕೊಂಡಿರುವ ದಟ್ಟ ಹಸಿರು ಯಾರನ್ನು ತಾನೆ ಸೆಳೆಯುವುದಿಲ್ಲ. ಇನ್ನು ಸಾಹಸಿಗರಾಗಿದ್ದರಂತೂ ಮುಗಿದೇಹೋಯಿತು. ಇಲ್ಲಿ ನೋಡಿ ಬೆಟ್ಟದ ಮೇಲೆ ಮಳೆಯನ್ನೂ ಲೆಕ್ಕಿಸದೆ ಮಳೆಯನ್ನು ಆನಂದಿಸುತ್ತಿರುವ ಯುವಕರ ತಂಡ. ಆದರೆ, ಇಂಥ ಸಾಹಸ ಮಾಡುವಾಗ ಎಚ್ಚರವಿರಲಿ.

ಹಿಡ್ಕಳ್ಳಿ ಹಿಡ್ಕಳ್ಳಿ ಅಲ್ಲೈತೆ ಮೀನು
ಸಾಗರ ತಾಲೂಕಿನ ತಾಳಗುಪ್ಪದ ಬಳಿಯ ಗೌರಿಕೆರೆ ಎಂಬಲ್ಲಿ ಮಳೆಯನ್ನು ಧಿಕ್ಕರಿಸಿ ಉಕ್ಕಿ ಹರಿಯುತ್ತಿರುವ ಹಳ್ಳದಲ್ಲಿ ಮೀನುಗಳನ್ನು ಹಿಡಿಯಲು ಸಿದ್ಧವಾಗಿರುವ ಗ್ರಾಮಸ್ಥರು. ಇದ್ದಲ್ಲಿಯೇ ಮೀನು ಬಂದರೆ ಬಿಟ್ಟಾರಾ?

ಅಂದಿನ ಊಟಕ್ಕೆ ತೊಂದರೆಯಿಲ್ಲ
ತಲೆಮೇಲೆ ಗೋಣಿಚೀಲ, ಕೈಯಲ್ಲಿ ಮೀನಿನ ಬಲೆ ಹಿಡಿದು ಮೀನಿನ ಬೇಟೆಯಲ್ಲಿ ನಿರತರಾಗಿರುವ ಹಳ್ಳಿಗರು. ರಸ್ತೆ, ಸೇತುವೆಗಳು ಕೊಚ್ಚಿಕೊಂಡು ಹೋಗುತ್ತಿದ್ದರೂ ಜನ ಮಾತ್ರ ಮೀನು ಹಿಡಿಯುವಲ್ಲಿ ಸಂತಸ ಕಾಣುತ್ತಿದ್ದಾರೆ. ನಾಲ್ಕು ಮೀನು ಸಿಕ್ಕರೆ ಅಂದಿನ ಊಟಕ್ಕೆ ತೊಂದರೆಯಿಲ್ಲ.

ಇದಪ್ಪ ಸಖತ್ ಬೇಟೆ
ಉಕ್ಕಿ ಹರಿಯುತ್ತಿದ್ದ ಕೆರೆಯಲ್ಲಿ ಸಿಕ್ಕ ದೊಡ್ಡ ಗಾತ್ರದ ಮೀನನ್ನು ಅತ್ಯಂತ ಹೆಮ್ಮೆಯಿಂದ ತೋರಿಸುತ್ತಿರುವ ಗ್ರಾಮಸ್ಥ. ಯಾಕೋ ಮೀನಿನ ಸಾರಿನ ವಾಸನೆ ಮೂಗಿಗೆ ಹೊಡೆಯುತ್ತಿದೆಯಪ್ಪೋ...












Click it and Unblock the Notifications