ಬಿಜೆಪಿ ಜತೆ ಕೆಜೆಪಿ ವಿಲೀನ ಇಲ್ಲ, ಮೈತ್ರಿ ಸಾಧ್ಯತೆ : ಬಿಎಸ್ವೈ
ಬೆಂಗಳೂರು, ಜು.11: ಕಾಂಗ್ರೆಸ್ ಹೊರತಾಗಿ ಸಮಾನ ಮನಸ್ಕ ಪಕ್ಷಗಳ ಜೊತೆ ಮೈತ್ರಿಗೆ ಕೆಜೆಪಿ ಸಿದ್ಧವಾಗಿರಿ. ಯಾವುದೇ ಪಕ್ಷಗಳ ಜೊತೆ ಕೆಜ್ಎಜಿ ವಿಲೀನ ಗೊಳಿಸುವುದಿಲ್ಲ. ಬಿಜೆಪಿ ರಾಷ್ಟ್ರೀಯ ನಾಯಕರಾದ ನರೇಂದ್ರ ಮೋದಿ, ಧರ್ಮೇಂದ್ರ ಪ್ರಧಾನ್ ಸೇರಿದಂತೆ ಯಾರ ಜೊತೆ ಕೂಡಾ ಮಾತುಕತೆ ನಡೆಸಿಲ್ಲ ಎಂದು ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದರು. ಕೆಜೆಪಿ ಮುಖಂಡರ ಸಭೆ ನಂತರ ಮಾತನಾಡಿದ ಯಡಿಯೂರಪ್ಪ ಬಿಜೆಪಿಗೆ ವಾಪಸ್ ಆಗುವ ಬಗ್ಗೆ ಯಾವುದೇ ಸ್ಪಷ್ಟ ಸೂಚನೆ ನೀಡಲಿಲ್ಲ.
ಸೂಕ್ತ ಸ್ಥಾನಮಾನ, ಗೌರವ ಸಿಕ್ಕರೆ ಬಿಜೆಪಿಗೆ ಯಡಿಯೂರಪ್ಪ ಅವರನ್ನು ಕಳುಹಿಸಿಕೊಡಲು ಕರ್ನಾಟಕ ಜನತಾ ಪಕ್ಷದ ಮುಖಂಡರು ಒಪ್ಪಿಗೆ ಸೂಚಿಸಿದ್ದರು. ನಗರದ ಖಾಸಗಿ ಹೋಟೆಲ್ ನಲ್ಲಿ ಗುರುವಾರ (ಜು.11) ನಡೆದ ಕೆಜೆಪಿ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಮಧ್ಯಾಹ್ನ ಹೊರ ಬಿದ್ದಿತ್ತು.
ಅದರೆ, ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು ಬೇರೆ ಪಕ್ಷಗಳ ಜೊತೆ ಕೆಜೆಪಿ ಮೈತ್ರಿ ಮಾಡಿಕೊಳ್ಳುವುದೇ ಹೊರತೂ ವಿಲೀನಗೊಳಿಸುವುದಿಲ್ಲ. ಬಿಜೆಪಿಗೆ ವಾಪಸ್ ಆಗುವ ಬಗ್ಗೆ ಮಾತುಕತೆ ಪ್ರಕ್ರಿಯೆ ನಡೆದಿಲ್ಲ ಎಂದರು.
ಕೆಜೆಪಿ ಸಭೆಯಿಂದ ಈ ಸುದ್ದಿ ಹೊರ ಬೀಳುವ ಹೊತ್ತಿಗೆ ನವದೆಹಲಿಯಿಂದ ಪೂರಕ ಸುದ್ದಿ ಬಂದಿತ್ತು. 'ಬಹಳಷ್ಟು ನಾಯಕರು ಬಿಜೆಪಿಗೆ ವಾಪಸ್ ಬಂದಿದ್ದಾರೆ. ಸದ್ಯದಲ್ಲೇ ನಾವು ಬಿಎಸ್ ಯಡಿಯೂರಪ್ಪ ಅವರನ್ನು ಕರೆಸಿಕೊಳ್ಳುತ್ತೇವೆ' ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರಕಾಶ್ ಜಾವೇಡ್ಕರ್ ಹೇಳಿದ್ದರು.

ಆಗಸ್ಟ್ ತಿಂಗಳ ಎರಡನೆ ವಾರದಲ್ಲಿ ಯಡಿಯೂರಪ್ಪ ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆಯಿದ್ದು, ಗುಜರಾತ್ ಮುಖ್ಯಮಂತ್ರಿ ಹಾಗೂ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ರಾಜ್ಯಕ್ಕೆ ಬಂದ ಮೇಲೆ ಮಾತುಕತೆ ನಡೆಸಲು ಯಡಿಯೂರಪ್ಪ ನಿಶ್ಚಯಿಸಿದ್ದಾರೆ. ಈ ನಡುವೆ ಅನಂತಕುಮಾರ್ ಅವರ ಜೊತೆ ಕೂಡಾ ಮಾತನಾಡಲು ಸಿದ್ಧ ಎಂದು ಬಿಎಸ್ ಯಡಿಯೂರಪ್ಪ ಬೆಳಗ್ಗೆ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಲೀನ ಇಲ್ಲ: ಯಾವ ಪಕ್ಷದೊಂದಿಗೂ ಕೆಜೆಪಿಯನ್ನು ವಿಲೀನ ಮಾಡುವುದಿಲ್ಲ. ಯಾವ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದನ್ನು ಲೋಕಸಭೆ ಚುನಾವಣೆ ವೇಳೆ ನಿರ್ಧರಿಸಲಾಗುವುದು ಎಂದು ಒಂದೆಡೆ ಹೇಳಿದರೆ, ಬಿಜೆಪಿ ಸೇರುವ ವಿಚಾರದಲ್ಲಿ ಯಾರೊಂದಿಗೆ ಬೇಕಾದರೂ ಮಾತುಕತೆಗೆ ಸಿದ್ಧ. ಲೋಕಸಭೆ ಚುನಾವಣೆ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.
ಕೆಜೆಪಿ ರಾಜ್ಯ ಮತ್ತು ಜಿಲ್ಲಾ ಮುಖಂಡರ ಸಭೆಯಲ್ಲಿ ಕರ್ನಾಟಕ ಜನತಾ ಪಕ್ಷದ ಏಳಿಗೆ ಹಾಗೂ ಲೋಕಸಭಾ ಚುನಾವಣಾ ಹಿತದೃಷ್ಟಿಯಿಂದ ಚರ್ಚೆ ನಡೆಸಲಾಯಿತು.












Click it and Unblock the Notifications