ಲೋಕಸಭೆ: ಎರಡು ಕಡೆ ಕಣಕ್ಕಿಳಿಯಲು ಮೋದಿ ನಿರ್ಧಾರ?
ನವದೆಹಲಿ, ಜು.11: ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ, ಅಘೋಷಿತ ಪ್ರಧಾನಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯುವ ಸುದ್ದಿ ಹೊರ ಬಂದಿದೆ. ಲೋಕಸಭೆ ಚುನಾವಣೆ 2014ರಲ್ಲಿ ಮೋದಿ ಅವರು ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಸ್ಪರ್ಧೆಗಿಳಿಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್, ಬಹುಜನ ಸಮಾಜವಾದಿ ಪಕ್ಷ ಹಾಗೂ ಆಡಳಿತಾರೂಢ ಸಮಾಜವಾದಿ ಪಕ್ಷಗಳಿಂದ ಹೆಚ್ಚಿನ ಮತವನ್ನು ಕಸಿದುಕೊಳ್ಳಲು ಮೋದಿ ಅವರನ್ನು ಉತ್ತರ ಪ್ರದೇಶದಲ್ಲಿ ಕಣಕ್ಕಿಳಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸೂಚಿಸಿದೆ ಎನ್ನಲಾಗಿದೆ.
ಉತ್ತರಪ್ರದೇಶದಲ್ಲಿ ಕನಿಷ್ಠ 40 ಸೀಟುಗಳನ್ನಾದರೂ ಗೆಲ್ಲುವುದು ನಮ್ಮ ಗುರಿ ಎಂದು ಸ್ವತಃ ಮೋದಿ ಅವರೇ ಭಾಷಣದಲ್ಲಿ ಒಮ್ಮೆ ಹೇಳಿದ್ದರು. ಇತ್ತೀಚೆಗೆ ಮೋದಿ ಅವರ ಬಲಗೈ ಬಂಟ, ಉತ್ತರ ಪ್ರದೇಶ ರಾಜ್ಯ ಉಸ್ತುವಾರಿ ಅಮಿತ್ ಶಾ ಅವರು ಉತ್ತರ ಪ್ರದೇಶ ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿ ಹವೆ ಏಳುವಂತೆ ಮಾಡಿದ್ದರು.

ಚುನಾವಣೆ ಮುಂದಿಟ್ಟುಕೊಂಡು ಮತ್ತೊಮ್ಮೆ 'ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪನೆ' ನಮ್ಮ ಉದ್ದೇಶಗಳಲ್ಲಿ ಒಂದು ಎಂದು ಸಾರಿದ್ದರು. ಹೀಗಾಗಿ ಮೋದಿ ಅವರ ಸ್ಪರ್ಧೆಗೆ ಸೂಕ್ತ ವೇದಿಕೆ ಸೃಷ್ಟಿಸುವ ಕಾರ್ಯದಲ್ಲಿ ಅಮಿತ್ ಅವರು ಬಹುತೇಕ ಸಫಲರಾಗಿದ್ದಾರೆ ಎನ್ನಲಾಗಿದೆ.
ಎಲ್ಲವೂ ಸರಿ ಹೋದರೆ, ಉತ್ತರ ಪ್ರದೇಶದ ಉತ್ತರ ಭಾಗದಿಂದ ನರೇಂದ್ರ ಮೋದಿ ಸ್ಪರ್ಧಿಸುವ ಸಾಧ್ಯತೆಯಿದೆ. ನರೇಂದ್ರ ಮೋದಿ ಅವರ ಪ್ರತಿಸ್ಪರ್ಧಿ, ಕಾಂಗ್ರೆಸ್ಸಿನ ಯುವರಾಜ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅಮೇಥಿಯ ಸಂಸದ ಎಂಬುದನ್ನು ಮರೆಯುವಂತಿಲ್ಲ, ಗಾಂಧಿ ಮನೆತನದ ಹಿಡಿತದಲ್ಲಿರುವ ಅಮೇಥಿ, ರಾಯ್ ಬರೇಲಿ ಮುಂತಾದ ಕ್ಷೇತ್ರಗಳಲ್ಲಿ ಮೋದಿ ತಮ್ಮ ಜಾದೂ ತೋರಿಸಲು ಯಾವ ತಂತ್ರ ಹೂಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಆದರೆ, ಮೋದಿ ಅವರು ಉತ್ತರ ಪ್ರದೇಶದಿಂದ ಸ್ಪರ್ಧೆಗಿಳಿಯುವುದು ಸ್ಥಳೀಯ ನಾಯಕರಿಗೆ ಇಷ್ಟವಾಗಿಲ್ಲ ಎನ್ನಲಾಗಿದೆ. ಮೊದಲಿಗೆ ಮೋದಿ ಅವರನ್ನು ರಾಷ್ಟ್ರೀಯ ನಾಯಕ ಎಂದು ಒಪ್ಪಿಕೊಳ್ಳಲು ಇಷ್ಟವಿಲ್ಲದ ಎಸ್ಪಿ ಹಾಗೂ ಕಾಂಗ್ರೆಸ್ ನಾಯಕರು ಕಿಡಿಕಾರಿದರು.
ಕಾಂಗ್ರೆಸ್ಸಿನ ಬೇನಿ ಪ್ರಸಾದ್ ವರ್ಮ ಹಾಗೂ ಸಮಾಜ ವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರು ಮೋದಿ ಅವರ ನಿರ್ಧಾರವನ್ನು ಖಂಡಿಸಿದ್ದಾರೆ.












Click it and Unblock the Notifications