ಜೈಲಲ್ಲಿರುವ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ

ಇದು ಹತ್ತತ್ತಿರ ಎರಡು ವರ್ಷಗಳಿಂದ ಜೈಲಿನಲ್ಲಿರುವ ಕರ್ನಾಟಕದ ರಾಜಕಾರಣಿ ಜನಾರ್ದನ ರೆಡ್ಡಿ ಮತ್ತು ಕಳೆದೊಂದು ವರ್ಷದಿಂದ ಜೈಲುಪಾಲಾಗಿರುವ ವೈಎಸ್ಆರ್ ಕಾಂಗ್ರೆಸ್ ನಾಯಕ ಜಗನ್ ರೆಡ್ಡಿಯಂಥ ದೊಡ್ಡ ಕುಳಗಳಿಗೆ ಭಾರೀ ಹೊಡತ ನೀಡಲಿದೆ. ಇನ್ನು ಇವರ ಆರೋಪ ಸಾಬೀತಾದರಂತೂ ಇವರ ರಾಜಕೀಯ ಜೀವನ ಮುಗಿದಂತೆಯೆ.
ಅಪರಾಧಿ ಎಂದು ಸಾಬೀತಾದಲ್ಲಿ ಸಂಸತ್ ಮತ್ತು ವಿಧಾನಸಭಾ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಬುಧವಾರ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿತ್ತು. ಇದರ ಬೆನ್ನ ಹಿಂದೆಯೆ ಆರೋಪ ಸಾಬೀತಾಗದಿದ್ದರೂ ಜೈಲಿನಲ್ಲಿರುವ ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ತೀರ್ಪನ್ನು ಕೋರ್ಟ್ ನೀಡಿದೆ. ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರೂ ಅವರು ಚುನಾವಣೆಯಲ್ಲಿ ಮತವನ್ನು ಹಾಕುವಂತಿಲ್ಲ.
ಸರಳವಾಗಿ ಹೇಳಬೇಕೆಂದರೆ, ಯಾವುದೇ ವ್ಯಕ್ತಿ ಚುನಾವಣೆಯ ಸಂದರ್ಭದಲ್ಲಿ ಜೈಲಲ್ಲಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಜೈಲು ಪಾಲಾಗಿರುವ ರಾಜಕಾರಣಿಗಳನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕಬೇಕೆಂದು ಪಟ್ನಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ. ಲೋಕಸಭೆ ಚುನಾವಣೆ ಇನ್ನೇನು ಹತ್ತಿರ ಬರುತ್ತಿರುವುದರಿಂದ ಈ ತೀರ್ಪು ಕೂಡ ರಾಜಕಾರಣಿಗಳಲ್ಲಿ ಜ್ವರ ಬರಿಸಬಹುದು.
ಈ ತೀರ್ಪು ವಿವಾದ ಸೃಷ್ಟಿಸಬಹುದು ಎಂದು ರಾಜಕೀಯ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ, ಯಾವುದೇ ವ್ಯಕ್ತಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸದಿದ್ದರೂ ಅವರನ್ನು ಚುನಾವಣೆಯಿಂದ ಹೊರಗಿಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. ಜೈಲು ಪಾಲಾಗಿದ್ದರೂ ಚುನಾವಣೆ ಸಮಯದಲ್ಲಿ ಜಾಮೀನು ಪಡೆದು ಹೊರಬಂದವರಿಗೆ ಈ ತೀರ್ಪು ಅನ್ವಯವಾಗುತ್ತದಾ ಎಂಬ ಪ್ರಶ್ನೆಯನ್ನೂ ಕೇಳಲಾಗುತ್ತಿದೆ.












Click it and Unblock the Notifications