ಬೆಂಗಳೂರಿನಲ್ಲಿ ಮತ್ತೊಂದು ಭರ್ಜರಿ ಮಳೆ
ಬೆಂಗಳೂರು, ಜುಲೈ11: ಕಳೆದೆರಡು ವರ್ಷಗಳಿಂದ ಮಳೆಯಿಲ್ಲದೆ ತತ್ತರಿಸಿದ್ದ ಬೆಂಗಳೂರು ಜನಕ್ಕೆ ಮಳೆರಾಯ ಭಾರಿ ತಂಪು ಎರೆದಿದ್ದಾನೆ. ಬುಧವಾರ ರಾತ್ರಿ ರಾಜಧಾನಿಯಲ್ಲಿ ಭರ್ಜರಿ ಮಳೆಯಾಗಿದ್ದು, ಹೆಚ್ಚಿನ ಅನಾಹುತಗಳೇನೂ ಆಗದಿದ್ದರೂ ಜನ ಮಾತ್ರ ಸಾಕಷ್ಟು ಅವಸ್ಥೆ ಪಟ್ಟಿದ್ದಾರೆ. ನಿನ್ನೆ ರಾತ್ರಿ ಸುಮಾರು 8 ಸೆಂಮೀ ಮಳೆಯಾಗಿರುವ ಅಂದಾಜಿದೆ.
ಜೂನ್ ಮೊದಲ ದಿನವಷ್ಟೇ ಇಡೀ ನಗರಕ್ಕೆ ಮಾಯದಂತ ಮಳೆ ಹೊಡೆದಿತ್ತು. ಅದಾದ ನಂತರ ಕಳೆದ ಒಂದೂವರೆ ತಿಂಗಳಿಂದ ನಗರದಲ್ಲಿ ಅಲ್ಲಲ್ಲಿ ಆಗಾಗ ಎಂಬಂತೆ ಮಳೆಯಾಗುತ್ತಿದೆ. ಆದರೆ ನಿನ್ನೆ ಸಂಜೆ 4 ಗಂಟೆಗೆ ಸರಿಯಾಗಿ ಮಳೆರಾಯ ಹಾಜರಾಗಿದ್ದಾನೆ. ಬೆಂಗಳೂರಿನಾದ್ಯಂತ ಜೋರು ಗಾಳಿ, ಗುಡುಗು ಸಹಿತ ಭರ್ಜರಿ ಮಳೆಯಾಗಿದೆ.

ಮತ್ತದೇ ಅವಾಂತರಗಳು ಸೃಷ್ಟಿಯಾಗಿವೆ. ಟ್ರಾಫಿಕ್ ಜಾಮ್, ಕೆಳ ಪ್ರದೇಶಗಳಿಗೆ ನೀರು ನುಗ್ಗುವುದು ಇವೇ ಸಮಸ್ಯೆಗಳು ಕಾಣಿಸಿಕೊಂಡಿವೆ. ಜತೆಗೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ. ಮಳೆ ಬಂದರೆ ನಾವೂ ಏನು ಮಾಡೋಕೆ ಆಗುತ್ತದೆ? ನಿಮ್ಮ ಬವಣೆ ನಿಮ್ಮದು ಅನುಭವಿಸಿ ಎಂಬ ಧೋರಣೆ ಸರಕಾರಿ ಆಡಳಿತವರ್ಗದಲ್ಲಿ ಎದ್ದು ಕಂಡಿದೆ. ಸಾವಿರಾರು ವಾಹನಗಳು ಸುಮಾರು ಕಾಲ ಎಲ್ಲೆಂದರಲ್ಲೇ ಸ್ಥಗಿತಗೊಂಡಿದ್ದವು. ವಾಹನ ಸಂಚಾರ ಬಸವನ ಹುಳುವಿನಂತೆ ಸಾಗುತ್ತಿತ್ತು.
ಉಳಿದಂತೆ ರಾಜ್ಯದ ಇತರೆ ಭಾಗಗಳಲ್ಲೂ ಉತ್ತಮ ಮಳೆಯಾಗಿದೆ. ಸುಳ್ಯ, ಸುಬ್ರಹ್ಮಣ್ಯ ಸೇರಿದಂತೆ ಕರಾವಳಿಯಲ್ಲಿ ದಿನವಿಡೀ ವಿಪರೀತ ಮಳೆಯಾಗಿದೆ. ನೈಋತ್ಯ ಮುಂಗಾರು ರಾಜ್ಯದಲ್ಲಿ ಕಾಲಿಡಲು ಇನ್ನೂ ಒಂದು ವಾರವಾಗಬೇಕು.
ಈ ಮಧ್ಯೆ, ಮುಂಗಾರು ಹಂಗಾಮಿನಲ್ಲೇ ಭರ್ಜರಿ ಮಳೆಯಾಗುತ್ತಿರುವುದು ಜನರಲ್ಲಿ ಸಂತಸ ತಂದಿದೆ. ಅಂದಹಾಗೆ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ನಿನ್ನೆ ಮಳೆಯಾಗಿದೆ. KRS ಅಣೆಕಟ್ಟೆಗೆ ಒಂದೇ ಸಮನೆ ನೀರು ಹರಿದುಬರುತ್ತಿದ್ದು ಈ ಬಾರಿ ಜಲಾಶಯ ಭರ್ತಿಯಾಗುವುದು ಖಚಿತವಾಗಿದೆ. ಈಗಾಗಲೇ 110 ಅಡಿಗಿಂತ ಹೆಚ್ಚು ನೀರು ಅಣೆಕಟ್ಟೆಯಲ್ಲಿದೆ. ತುಂಬಿತುಳುಕಲು ಇನ್ನು 14 ಅಡಿ ನೀರು ಸಾಕು.
ಅನಿರೀಕ್ಷಿತವಾಗಿ ಹೆಚ್ಚಾಗಿ ತೊಂದರೆ ಅನುಭವಿಸಿದವರು ಅಂದರೆ ಸಡಗರದಿಂದ ರಾಜಧಾನಿಗೆ ಬಂದು, ತಮ್ಮ ತಮ್ಮ ಊರುಗಳಿಗೆ ವಾಪಸಾಗುತ್ತಿದ್ದ ರಾಜ್ಯದ ನಾನಾ ಭಾಗಗಳ ಜನ. ಸಂಜೆ ಮಳೆಯಾಗುತ್ತಿದ್ದಂತೆ ಮೆಜೆಸ್ಟಿಕ್, ಶಾಂತಿನಗರ, ರೈಲ್ವೆ ನಿಲ್ದಾಣಗಳಲ್ಲಿ ಸಿಕ್ಕಿಹಾಕಿಕೊಂಡ ಜನ ಪರ್ಯಾಯ ವ್ಯವಸ್ಥೆಗೆ ಪರದಾಡುತ್ತಿದ್ದರು.












Click it and Unblock the Notifications