ನೆಲಮಂಗಲ ರೈಲಿನಲ್ಲಿ ಕಳ್ಳೇಕಾಯಿ ಮಾರೋರಿಲ್ಲ

ಏಪ್ರಿಲ್ 2013ರಲ್ಲಿ ನೆಲಮಂಗಲ ಮತ್ತು ಬೆಂಗಳೂರು ನಡುವಿನ ರೈಲು ಸಂಚಾರ ಪ್ರಾರಂಭವಾಯಿತು. ಆದರೆ, ರೈಲಿಗೆ ಪ್ರಯಾಣಿಕರ ಕೊರತೆ ಉಂಟಾಗಿದೆ. ರೈಲ್ವೆ ಸಮಯ ಪರಿಷ್ಕರಿಸದಿದ್ದರೆ, ರೈಲು ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರೈಲು ಸಂಚಾರ ಪ್ರಾರಂಭವಾಗಿ ಮೂರು ತಿಂಗಳು ಕಳೆದಿದೆ. ಪ್ರತಿದಿನ ಪ್ರಯಾಣಿಕರ ಸಂಖ್ಯೆ ಮೂರು ಅಂಕಿಗಳನ್ನು ದಾಟುತ್ತಿಲ್ಲ. ಸ್ಥಳೀಯರು ರೈಲಿನ ಸಮಯ ಸರಿಯಾಗಿಲ್ಲ. ಆದ್ದರಿಂದ ಪ್ರಯಾಣಿಕರ ಕೊರತೆ ಉಂಟಾಗುತ್ತಿದೆ ಎಂದು ಹೇಳುತ್ತಿದ್ದಾರೆ. (5 ರೂ ಗೆ ಬೆಂಗಳೂರು-ನೆಲಮಂಗಲ ರೈಲು ಪ್ರಯಾಣ)
ಪ್ರತಿದಿನ ರೈಲು 12.20ಕ್ಕೆ ಬೆಂಗಳೂರು ಬಿಟ್ಟು, 1.20ಕ್ಕೆ ನೆಲಮಂಗಲ ತಲುಪುತ್ತಿದೆ. ಮಧ್ಯಾಹ್ನ 2.10ಕ್ಕೆ ನೆಲಮಂಗಲ ಬಿಟ್ಟು 3.20ಕ್ಕೆ ಬೆಂಗಳೂರು ತಲುಪುತ್ತಿದೆ. ಇದರ ನಡುವೆಯೂ ರೈಲು ಮಲ್ಲೇಶ್ವರಂ, ಯಶವಂತಪುರ, ಚಿಕ್ಕಬಣಾವರ, ಮತ್ತು ಸೋಲದೇವನಹಳ್ಳಿ ನಿಲ್ದಾಣದಲ್ಲಿ ನಿಲ್ಲುತ್ತದೆ. 23 ಕಿ.ಮೀ ಪ್ರಯಾಣಿಸಲು ರೈಲು ನಾಲ್ಕು ನಿಲ್ದಾಣಗಳಲ್ಲಿ ನಿಲ್ಲುತ್ತದೆ.
ಸಮಯವೇ ಸಮಸ್ಯೆ : ನೆಲಮಂಗಲ ಮತ್ತು ಬೆಂಗಳೂರು ರೈಲು ಯೋಜನೆಗೆ ಪ್ರಯಾಣಿಕರ ಕೊರತೆ ಉಂಟಾಗಲು ಸಮಯವೇ ಕಾರಣ ಎಂದು ರೈಲ್ವೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ಜನರ ಸಂಚಾರ ಕಡಿಮೆ ಇರುವುದರಿಂದ ಇಲಾಖೆಗೆ ನಷ್ಟ ಉಂಟಾಗುತ್ತಿದೆ.
ನೆಲಮಂಗಲ ಮತ್ತು ಬೆಂಗಳೂರು ನಡುವಿನ ಬಸ್ ಪ್ರಯಾಣದರ 20 ರೂ. ಆದರೆ, ರೈಲಿನಲ್ಲಿ 5ರೂ. ಆದರೆ, ಸಮಯ ಹೊಂದಿಕೆ ಆಗದಿರುವುದರಿಂದ ಜನರು ರೈಲಿನಲ್ಲಿ ಪ್ರಯಾಣಿಸುತ್ತಿಲ್ಲ. ಬೆಳಗ್ಗೆ 8 ಗಂಟೆಗೆ ರೈಲು ನೆಲಮಂಗಲದಿಂದ ಹೊರಟರೆ ಪ್ರಯಾಣಿಕರಿಂದ ತುಂಬಿ ಹೋಗುವುದರಲ್ಲಿ ಸಂಶಯವಿಲ್ಲ.
ರೈಲು 13 ಬೋಗಿಗಳನ್ನು ಒಳಗೊಂಡಿದ್ದು, 972 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಆದರೆ, ಸದ್ಯ ರೈಲಿನ ಪ್ರಯಾಣಿಕರ ಸಂಖ್ಯೆ 75ನ್ನು ದಾಟುತ್ತಿಲ್ಲ. ರೈಲ್ವೆ ಇಲಾಖೆ ಸಮಯ ಪರಿಷ್ಕರಣೆ ಮಾಡದಿದ್ದರೆ, ಮತ್ತಷ್ಟು ನಷ್ಟ ಕಟ್ಟಿಟ್ಟ ಬುತ್ತಿ ಅಲ್ಲವೇ?












Click it and Unblock the Notifications