ಎಚ್ಚರ, ಎಂಟು ಜಿಲ್ಲೆಗಳಲ್ಲಿ ಡೆಂಗ್ಯೂ ಸೋಂಕು ಹೆಚ್ಚು

ಬೆಂಗಳೂರಿನಲ್ಲಿ ಡೆಂಗ್ಯೂ ಸೋಂಕು ಪೀಡಿತರ ಸಂಖ್ಯೆ 372ಕ್ಕೆ ಏರಿದೆ. ಮೈಸೂರು, ಹಾವೇರಿ, ಮಂಡ್ಯ, ಉಡುಪಿ, ಬಳ್ಳಾರಿ ಶಿವಮೊಗ್ಗ ಮತ್ತು ರಾಮನಗರ ಜಲ್ಲೆಗಳಲ್ಲಿ ಡೆಂಗ್ಯು ಸೋಂಕು ತಗುಲಿರುವ ರೋಗಿಗಳ ಸಂಖ್ಯೆ ಮೂರಂಕಿಗೆ ಮುಟ್ಟಿದೆ.
ಡೆಂಗ್ಯೂ ಪ್ರಕರಣಗಳ ಬಗ್ಗೆ ನಿಗಾವಹಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಚಿಸಿರುವ ಸಮಿತಿ ಆಗಸ್ಟ್ ಕೊನೆಯ ವೇಳಗೆ ಡೆಂಗ್ಯೂ ಸೋಂಕು ನಿಯಂತ್ರಣಕ್ಕೆ ಬರಬಹುದು ಎಂದು ಅಂದಾಜಿಸಿದೆ. ಅಲ್ಲಿಯವರೆಗೂ ಜನರಿಗೆ ಅಗತ್ಯ ಎಚ್ಚರಿಕೆ ತೆಗೆದುಕೊಳ್ಳುವಂತೆ ಸೂಚಿಸಿದೆ.
ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಜನವರಿಯಿಂದ ಜುಲೈ ಮೊದಲವಾರದ ವರೆಗೆ ರಾಜ್ಯದಲ್ಲಿ 2,234 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ ಮತ್ತು ಎಂಟು ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೂ 9,972 ಡೆಂಗ್ಯೂ ಸೋಂಕು ಶಂಕಿತರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಇವುಗಳಲ್ಲಿ 2,234 ಜನರಿಗೆ ಡೆಂಗ್ಯೂ ಸೋಂಕು ತಗುಲಿರುವುದು ಖಚಿತವಾಗಿದೆ. ಎಂಟು ಜಿಲ್ಲೆಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಡೆಂಗ್ಯೂ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಸ್ಥಾಪಿಸಿರುವ ಸಮಿತಿ, ಜನರಲ್ಲಿ ಜಾಗೃತಿ ಮೂಡಿಸಲು, ಎನ್ ಜಿಒ, ಸ್ವಸಹಾಯ ಸಂಘಗಳ ಮೂಲಕ ಪ್ರಯತ್ನ ನಡೆಸುತ್ತಿದೆ. ತನ್ನ ಪ್ರತಿ ಚಟುವಟಿಕೆಯ ಕುರಿತು ಇಲಾಖೆಗೆ ಮಾಹಿತಿ ನೀಡುತ್ತಿದೆ. (ಬೆಂಗಳೂರು ಜನರೇ ಎಚ್ಚರ ಡೆಂಗ್ಯೂ ಜ್ವರ ಹಬ್ಬುತ್ತಿದೆ)
ಬೆಂಗಳೂರಿನಲ್ಲೂ ಜಾಗೃತಿ : ಬಿಬಿಎಂಪಿ ಮತ್ತು ಎಂ.ಎಸ್.ರಾಮಯ್ಯ ಆಸ್ಪತ್ರೆ ಹಾಗೂ ಸುಮಂಗಲಿ ಸೇವಾ ಶ್ರಮದ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಪೌರ ಕಾರ್ಮಿಕರಿಗೆ ತರಬೇತಿ ನೀಡಲಾಗಿದೆ. ಇವರು ಪ್ರತಿ ಮನೆಗೆ ಭೇಟಿ ನೀಡಿ ಡೆಂಗ್ಯೂ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪೌರ ಕಾರ್ಮಿಕರು ನಗರದ ವಿವಿಧ ಬಡಾವಣೆಗಳ ಸ್ವಚ್ಛತಾ ಕಾರ್ಯಗಳನ್ನು ನಿಯಮಿತವಾಗಿ ಕೈಗೊಂಡಿದ್ದಾರೆ.












Click it and Unblock the Notifications