ಕಾಂಗ್ರೆಸ್ ನಾಯಕರಿಗೆ ದಿಗ್ವಿಜಯ್ ನೀತಿ ಪಾಠ!
ಬೆಂಗಳೂರು, ಜು.3 : ಲೋಕಸಭೆ ಚುನಾವಣೆಗಳು ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯಸಿಂಗ್ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಸರಿಯಾದ ಪಾಠ ಮಾಡಿದ್ದಾರೆ. ಕರ್ನಾಟಕದ ಮೊದಲ ಭೇಟಿಯಲ್ಲೇ ಪಕ್ಷದ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಕಿವಿಹಿಂಡಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯಸಿಂಗ್ ಕರ್ನಾಟಕ ರಾಜ್ಯ ಉಸ್ತುವಾರಿ ವಹಿಸಿಕೊಂಡ ನಂತರ ಮೊದಲ ಬಾರಿ ಬೆಂಗಳೂರಿಗೆ ಆಗಮಿಸಿದ್ದರು. ಮೊದಲ ಭೇಟಿಯಲ್ಲೇ ಪಕ್ಷ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರದ ನಡುವೆ ಸಮನ್ವಯತೆ ಕಾಯ್ದುಕೊಳ್ಳಬೇಕು ಎಂದು ನಾಯಕರಿಗೆ ಸಲಹೆ ನೀಡಿದ್ದಾರೆ.
ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಮೂಡಿಸುವುದು ಮತ್ತು ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಯೋಜನೆಗಳ ಅನುಷ್ಠಾನಕ್ಕಾಗಿ ಎರಡು ಉಸ್ತುವಾರಿ ಸಮಿತಿಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ. ಜಿಲ್ಲಾ ಮಟ್ಟದಲ್ಲೂ ಕಾರ್ಯಕರ್ತರು ಮತ್ತು ನಾಯಕರ ನಡುವೆ ಉತ್ತಮ ಸಮನ್ವಯವಿರಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಸಂಘಟಿತ ರೂಪದಲ್ಲಿ ಕೆಲಸ ಮಾಡಬೇಕು ಎಂಬುದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬಯಕೆ. ಪಕ್ಷದಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಮಾತ್ರ ಅವಕಾಶ, ಕೆಲಸ ಮಾಡದವರು ಕಾಂಗ್ರೆಸ್ ಸರ್ಕಾರದಲ್ಲಿ ಅಥವಾ ಪಕ್ಷದಲ್ಲಾಗಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ದಿಗ್ವಿಜಯ ಸಿಂಗ್ ಅವರ ನೀತಿ ಪಾಠಗಳ ಪ್ರಮುಖ ಅಂಶಗಳು ಹೀಗಿವೆ.
ಪಕ್ಷ, ಸರ್ಕಾರದ ನಡುವೆ ಸಮನ್ವಯತೆ
ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷದ ನಡುವೆ ಸಮನ್ವಯತೆ ಕಾಯ್ದುಕೊಳ್ಳಬೇಕು. ಪ್ರಣಾಳಿಕೆಯಲ್ಲಿ ನೀಡಿದ ಯೋಜನೆಗಳನ್ನು ಈಡೇರಿಸಲು ಮತ್ತು ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಕಾಯ್ದಕೊಳ್ಳಲು ಉಸ್ತುವಾರಿ ಸಮಿತಿಗಳನ್ನು ರಚಿಸಲಾಗುವುದು.
ಕೆಲಸ ಮಾಡಿ ಇಲ್ಲವೇ ಪಕ್ಷ ಬಿಡಿ
ರಾಹುಲ್ ಗಾಂಧಿ ಪಕ್ಷದ ಉಪಾಧ್ಯಕ್ಷರಾದ ನಂತರ ಪಕ್ಷದ ಕಾರ್ಯ ನಿರ್ವಹಣೆಯಲ್ಲಿ ಹಲವಾರು ಬದಲಾವಣೆಗಳಾಗಿವೆ. ವ್ಯವಸ್ಥಿತ ಹಾಗೂ ಸಂಘಟಿತ ರೂಪದಲ್ಲಿ ಪಕ್ಷ ಹಾಗೂ ಕಾಂಗ್ರೆಸ್ ಸರ್ಕಾರಗಳು ಕೆಲಸ ಮಾಡಬೇಕು. ಕೆಲಸ ಮಾಡುವವರಿಗೆ ಮಾತ್ರ ಪಕ್ಷದಲ್ಲಿ ಅಥವ ಸರ್ಕಾರದಲ್ಲಿ ಅವಕಾಶ. ಕೆಲಸ ಮಾಡಿ ಅಥವ ಪಕ್ಷ ಬಿಡಿ.
ಕೆಪಿಸಿಸಿ ಅಧ್ಯಕ್ಷರಿಗೆ ಸಲಹೆ
ಬ್ಲಾಕ್, ಜಿಲ್ಲಾ ಮತ್ತು ರಾಜ್ಯ ಘಟಕಗಳ ಸಭೆಯನ್ನು ನಿಯಮಿತವಾಗಿ ಕರೆಯಬೇಕು. ಪ್ರತಿ ತಿಂಗಳು ಕೆಪಿಸಿಸಿ ಕಾರ್ಯಗಳ ಕುರಿತ ವರದಿಯನ್ನು ಎಐಸಿಸಿಗೆ ನೀಡಬೇಕು. ಪದಾಧಿಕಾರಿಗಳು ಸತತವಾಗಿ ಮೂರು ಸಭೆಗೆ ಗೈರು ಹಾಜರಾದರೆ, ಅವರನ್ನು ಸ್ಥಾನದಿಂದ ವಜಾಗೊಳಿಸಬೇಕು.
ಬ್ಯಾನರ್ ಮತ್ತು ಫೆಕ್ಸ್ ನಾಯಕರಾಗಬೇಡಿ
ನಾಯಕರನ್ನು ಸೆಳೆಯಲು ಬ್ಯಾನರ್ ಮತ್ತು ಫೆಕ್ಸ್ ಹಾಕಿಕೊಂಡು ಕಾಲ ಕಳೆಯಬೇಡಿ. ನನಗೆ ಇದು ಹಿಡಿಸುವುದಿಲ್ಲ. ಪಕ್ಷದ ಸಂಘಟನೆಯಲ್ಲಿ ಸಮರ್ಪಕವಾಗಿ ತೊಡಗಿಕೊಂಡರೆ ಅಷ್ಟೇ ಸಾಕು. ಬ್ಯಾನರ್ ಮೂಲಕ ನಾಯಕನ್ನು ಮನವೊಲಿಸಬೇಡಿ ಎಂದು ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ ನೀಡಿದರು.
ಸಾಮಾಜಿಕ ಜಾಲ ತಾಣಗಳಿಗೆ ಬನ್ನಿ
ಆಧುನಿಕ ಜಗತ್ತಿನಲ್ಲಿ ಆನ್ಲೈನ್ ಸಾಮಾಜಿಕ ತಾಣಗಳ ಮಹತ್ವವನ್ನು ಪಕ್ಷದ ಕಾರ್ಯಕರ್ತರು ಅರಿಯಬೇಕು.ಪಕ್ಷದ ನಾಯಕರಿ ಫೇಸ್ ಬುಕ್ ಮತ್ತು ಟ್ವಿಟ್ವರ್ ಖಾತೆಗಳನ್ನು ತೆರೆಯಿರಿ. ಯುವ ಕಾಂಗ್ರೆಸ್ ಹಾಗೂ ಎನ್ಎಸ್ಯುಐನ ಕಾರ್ಯಕರ್ತರಿಂದ ಕನಿಷ್ಠ 11 ಸಾವಿರ ಟ್ವಿಟರ್ ಹಾಗೂ ಫೇಸ್ಬುಕ್ ಖಾತೆಗಳು ಪ್ರಾರಂಭವಾಗಬೇಕು.
ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಸಲಹೆ
ಪಕ್ಷದ ಕಾರ್ಯಕರ್ತರು ಜನರೊಂದಿಗೆ ಉದ್ಧಟತನದಿಂದ ವರ್ತಿಸಬೇಡಿ. ಹಾರ-ತುರಾಯಿ ಸಂಸ್ಕೃತಿ ಬಿಟ್ಟು, ಸಮಾರಂಭಗಳನ್ನು ಸಾಧ್ಯವಾದಷ್ಟು ಸರಳವಾಗಿ ಆಯೋಜಿಸಿ. ಜಿಲ್ಲೆಗಳಿಗೆ ಭೇಟಿ ನೀಡುವಾಗ ಕಾರುಗಳ ಮೆರವಣಿಗೆ ನಡೆಯದಂತೆ ನೋಡಿಕೊಳ್ಳಿ. ಪಕ್ಷದ ನಾಯಕರು ಯಾವುದೇ ಜಿಲ್ಲೆಗೆ ಭೇಟಿ ನೀಡಿದರೂ ಒಂದು ಗಂಟೆ, ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಸಮಸ್ಯೆ ಆಲಿಸಿ.