ಜಲಪ್ರಳಯ : ಕರ್ನಾಟಕದ 15 ಜನರು ಕಣ್ಮರೆ
ಬೆಂಗಳೂರು, ಜು.2 : ಉತ್ತರಾಖಂಡ ಜಲಪ್ರಳಯಕ್ಕೆ ಸಿಲುಕಿದ ರಾಜ್ಯದ ಯಾತ್ರಾರ್ಥಿಗಳ ರಕ್ಷಣಾ ಕಾರ್ಯ ಪೂರ್ಣಗೊಂಡಿದೆ. ಡೆಹ್ರಾಡೂನ್ ನಲ್ಲಿರುವ ಕೊನೆಯ ತಂಡ ಮಂಗಳವಾರ ಸಂಜೆ ಬೆಂಗಳೂರಿಗೆ ಮರಳಲಿದೆ. ಭೀಕರ ಪ್ರವಾಹದಿಂದ ರಾಜ್ಯದ 15 ಜನರು ಕಾಣೆಯಾಗಿದ್ದಾರೆ ಎಂಬ ಮಾಹಿತಿ ಈಗ ಬಯಲಾಗಿದೆ.
ಉತ್ತರಾಖಂಡ್ ನಲ್ಲಿ ರಕ್ಷಿಸಲಾಗಿರುವ ರಾಜ್ಯದ 75ಕ್ಕೂ ಹೆಚ್ಚು ಯಾತ್ರಾರ್ಥಿಗಳು ಮಂಗಳವಾರ (ಜುಲೈ 2) ಸಂಜೆ ಡೆಹ್ರಾಡೂನ್ನಿಂದ ರಾಜ್ಯಕ್ಕೆ ಆಗಮಿಸಲಿದ್ದಾರೆ. ಇದೇ ಕೊನೆಯ ತಂಡವಾಗಿದ್ದು, ಯಾತ್ರಾರ್ಥಿಗಳ ರಕ್ಷಣೆಗೆ ತೆರಳಿದ್ದ ಅಧಿಕಾರಿಗಳು ಮರಳಲಿದ್ದಾರೆ. ರಾಜ್ಯದ ಯಾತ್ರಾರ್ಥಿಗಳನ್ನು ಕರೆತರಲು ತೆರಳಿರುವ ವಾರ್ತಾ ಸಚಿವ ಸಂತೋಷ್ ಲಾಡ್ ಸಹ ಇಂದು ಬೆಂಗಳೂರಿಗೆ ಮರಳಲಿದ್ದಾರೆ.
"ಸುಮಾರು 75 ಜನರು ಡೆಹ್ರಾಡೂನ್ನಲ್ಲಿ ವಾಸ್ತವ್ಯ ಹೂಡಿದ್ದೇವೆ. ಮಂಗಳವಾರ ಕೊನೆಯ ಹಂತದಲ್ಲಿ ಎಲ್ಲಾ ಯಾತ್ರಾರ್ಥಿಗಳನ್ನು ಜೆಟ್ ಏರ್ ವೇಸ್ ಸಂಸ್ಥೆಯ ವಿಶೇಷ ವಿಮಾನದಲ್ಲಿ ರಾಜ್ಯಕ್ಕೆ ಕರೆದುಕೊಂಡು ಬರಲಾಗುತ್ತದೆ. ಯಾತ್ರಾರ್ಥಿಗಳ ವಿಮಾನ ಮಧ್ಯಾಹ್ನ 1 ಗಂಟೆಗೆ ಡೆಹ್ರಾಡೂನ್ನಿಂದ ಹೊರಡುವ ಸಾಧ್ಯತೆ ಇದ್ದು, ಸಂಜೆ ಬೆಂಗಳೂರು ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಸಂಜೆ 6.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಲಿದ್ದೇವೆ" ಎಂದು ಸಚಿವರು ಹೇಳಿದ್ದಾರೆ.

15 ಮಂದಿ ಕಣ್ಮರೆ : ರಾಜ್ಯದಿಂದ ಉತ್ತರಾಖಂಡಕ್ಕೆ ಪ್ರವಾಸ ಹೋಗಿದ್ದ ಯಾತ್ರಾರ್ಥಿಗಳಲ್ಲಿ ಸುಮಾರು 15 ಮಂದಿ ಕಣ್ಮರೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರನ್ನು ಪತ್ತೆ ಮಾಡಲು ಸ್ಥಳೀಯ ಅಧಿಕಾರಿಗಳು, ಪೊಲೀಸರು ಹಾಗೂ ಸೇನೆಯ ನೆರವು ಪಡೆದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಉತ್ತರಾಖಂಡದಲ್ಲಿ ಪ್ರತಿಕೂಲ ಹವಾಮಾನ ಮುಂದುವರೆದಿದ್ದು, ಆಗಾಗ್ಗೆ ಮಳೆ ಸುರಿಯುತ್ತಿದೆ. ಇದರಿಂದಾಗಿ ಯಾತ್ರಾರ್ಥಿಗಳು ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.(ಕೇದಾರನಾಥ ಅನುಭವ ಬಿಚ್ಚಿಟ್ಟ ಬೆಂಗಳೂರಿನ ಯಾತ್ರಿ)
ಕಾಣೆಯಾಗಿರುವ ಯಾತ್ರಾರ್ಥಿಗಳ ಭಾವಚಿತ್ರ ಮತ್ತು ವಿವರಗಳನ್ನು ನೀಡುವಂತೆ ಕುಟುಂಬ ಸದಸ್ಯರಿಗೆ ಸ್ಥಳೀಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಭಾವಚಿತ್ರ ಮತ್ತು ವಿವರ ದೊರಕಿದ ನಂತರ, ಪತ್ತೆ ಕಾರ್ಯ ಪ್ರಾರಂಭಿಸಲು ನಿರ್ಧರಿಸಲಾಗಿದೆ.












Click it and Unblock the Notifications