ರಾಜ್ಯ ರೈಲ್ವೆ ಗೆ 600 ಕೋಟಿ ಬಂಪರ್ : ಖರ್ಗೆ

ರಾಜ್ಯದ ರೈಲ್ವೆ ಹಾಗೂ ಕೇಂದ್ರ ಅಧಿಕಾರಿಗಳೊಂದಿಗೆ ರಾಜ್ಯದ ರೈಲ್ವೆ ಯೋಜನೆಗಳ ಪರಾಮರ್ಶೆ, ಚರ್ಚೆ ನಡೆಸಿದ ಬಳಿಕ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.
ಕರ್ನಾಟಕದ ಪಾಲು: ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಇನ್ನೂ 300 ಕೋಟಿ ರು ಅಧಿಕವಾಗಿ ನೆರವು ಸಿಗಲಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕೂಡಾ ಅಷ್ಟೇ ಮೊತ್ತದ ಹಣ ಹೂಡಿಕೆ ಮಾಡಿ ರೈಲ್ವೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಿದೆ ಎಂದು ಸಚಿವ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು.
2013-14ರ ಕೇಂದ್ರ ರೈಲ್ವೆ ಬಜೆಟ್ ನಲ್ಲಿ ಕರ್ನಾಟಕದ ಪಾಲು 900 ಕೋಟಿ ರು ಇದೆ. ಇದರ ಜೊತೆಗೆ ಹಾಲಿ ಯೋಜನೆಗಳ ವಿದ್ಯುತೀಕರಣ, ಟ್ರ್ಯಾಕ್ ಡಬ್ಬಲಿಂಗ್ ಗೆ ನೀಡುವ ನೆರವು ಸೇರಿದಂತೆ ರಾಜ್ಯಕ್ಕೆ 1200 ರಿಂದ 1300 ಕೋಟಿ ರು ಸಿಗಲಿದೆ ಎಂದು ಖರ್ಗೆ ಹೇಳಿದರು.
ಯೋಜನೆಗಳು: ಕಡೂರು-ಚಿಕ್ಕಮಗಳೂರು, ಕೋಲಾರ-ಚಿಕ್ಕಬಳ್ಳಾಪುರ, ಗದ್ವಾಲ್-ರಾಯಚೂರು ಹಾಗೂ ಬೀದರ್-ಗುಲ್ಬರ್ಗಾ ಮಾರ್ಗದ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗ ಸೇರಿದಂತೆ ಚಾಲ್ತಿಯಲ್ಲಿರುವ ಎಲ್ಲಾ ಮಹತ್ವದ ರೈಲು ಯೋಜನೆಗಳನ್ನು ವಿಳಂಬ ಮಾಡದೆ ಕಾಲ ಮಿತಿಯಲ್ಲಿ ಪೂರ್ಣ ಮಾಡಬೇಕು ಎಂದು ನೂತನ ರೈಲ್ವೆ ಸಚಿವ ಮಲ್ಲಿ ಕಾರ್ಜುನ ಖರ್ಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಬೇಡಿಕೆಗಳು: ಮಂಗಳೂರು ಮತ್ತು ಬೆಂಗಳೂರು ನಡುವೆ ರಾತ್ರಿ ಸಂಚಾರ ಮಾಡುತ್ತಿದ್ದ ರೈಲನ್ನು ಬೆಳಗ್ಗೆ ಸಂಚಾರ ಮಾಡುವಂತೆ ಬದಲಾವಣೆ ಮಾಡಿರುವುದರಿಂದ ರಾಜ್ಯದ ಪ್ರಯಾಣಿಕರಿಗೆ ಅನುಕೂಲವಾಗುತ್ತಿಲ್ಲ. ಬೆಳಗಿನ ರೈಲು ತಮಿಳುನಾಡನ್ನೂ ಸುತ್ತಿಕೊಂಡು ಮಂಗಳೂರಿಗೆ ಬರುತ್ತಿದೆ. ಇದರಿಂದ ಹೆಚ್ಚು ಸಮಯ ವ್ಯಯವಾಗುತ್ತದೆ. ರಾಜ್ಯದ ಜನರಿಗೂ ಉಪಯೋಗವಾಗುತ್ತಿಲ್ಲ. ಅದನ್ನು ಅರಸೀಕೆರೆ ಮಾರ್ಗದಲ್ಲಿಯೇ ಓಡಿಸಬೇಕು ಎಂಬ ಬೇಡಿಕೆಯನ್ನು ರಾಜ್ಯದ ಅಧಿಕಾರಿಗಳು ಮುಂದಿಟ್ಟಿದ್ದಾರೆ.
ರಾಯದುರ್ಗ-ತುಮಕೂರು, ದಾವಣಗೆರೆ-ತುಮಕೂರು ಮಾರ್ಗದ ಸಮೀಕ್ಷೆ ಆರಂಭವಾಗಿಲ್ಲ. ಆದಷ್ಟು ಬೇಗ ಇದರ ಸಮೀಕ್ಷೆ ಆಗಬೇಕು. ಎಲ್ಲೆಲ್ಲಿ ಭೂ ಸ್ವಾಧೀನ ಪ್ರಕರಣಗಳು ಆಗಬೇಕು. ಅಂತಹ ಕಡೆ ವಿಶೇಷ ಮುತುವರ್ಜಿ ವಹಿಸಬೇಕು, ಚಾಲ್ತಿಯಿರುವ ಯೋಜನೆಗಳನ್ನು ಕಾಲಮಿತಿ ಯೋಜನೆಯೊಳಗೆ ಪೂರ್ಣ ಮಾಡಬೇಕು.
ಬೆಂಗಳೂರು ರೈಲ್ವೆ: ಬೆಂಗಳೂರು ರೈಲು ನಿಲ್ದಾಣದಲ್ಲಿ ಹೆಚ್ಚಿನ ಫ್ಲಾಟ್ ಫಾರಂ ನಿರ್ಮಾಣಕ್ಕೆ ಸೂಚನೆ. ಬಿನ್ನಿಮಿಲ್ ಪ್ರದೇಶದ ಜಾಗದಲ್ಲಿ ರೈಲ್ವೆ ಕಚೇರಿ ಸ್ಥಾಪನೆ ಸಾಧ್ಯತೆ.
ಬೆಂಗಳೂರಿನ ಹೊರವಲಯದ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ಆನೇಕಲ್, ರಾಮನಗರಕ್ಕೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರೈಲುಮಾರ್ಗ ಅನುಷ್ಠಾನಕ್ಕೆ ಬದ್ಧ ಎಂದು ಖರ್ಗೆ ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ರೈಲ್ವೆ ಯೋಜನೆಗಳನ್ನು ಪೂರ್ಣ ಮಾಡಲು ರೈಲ್ವೆ ಇಲಾಖೆಗೆ ಬೇಕಾಗಿರುವ ಹಣಕಾಸು ಮತ್ತು ಭೂಮಿಯನ್ನು ರಾಜ್ಯ ಸರ್ಕಾರ ಒದಗಿಸಿಕೊಟ್ಟರೆ ಕೇಂದ್ರ ಸರ್ಕಾರ ಮತ್ತಷ್ಟು ವೇಗದಲ್ಲಿ ಯೋಜನೆಗಳನ್ನು ಪೂರ್ಣ ಮಾಡಿ ಜನರಿಗೆ ಅನುಕೂಲ ಮಾಡಿಕೊಡುವುದಾಗಿ ಖರ್ಗೆ ತಿಳಿಸಿದರು.












Click it and Unblock the Notifications