ಬೆಂಗಳೂರು : ಲಾರಿಗೆ ಡಿಕ್ಕಿ ಹೊಡೆದು ಟೆಕ್ಕಿ ಸಾವು

ಕೋಲ್ಕತ್ತಾ ಮೂಲದ ಶಾಯನ್ ಭಟ್ಟಾಚಾರ್ಯ (29) ನಗರದಲ್ಲಿ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಿಟಿಎಂ ಲೇಔಟ್ ನಿವಾಸಿಯಾಗಿರುವ ಇವರು, ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು 11.15ರ ಸುಮಾರಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಎಚ್ಎಸ್ಆರ್ ಲೇಔಟ್ ರಿಂಗ್ ರಸ್ತೆಯಲ್ಲಿ ಲಾರಿಯೊಂದನ್ನು ನಿಲ್ಲಿಸಲಾಗಿತ್ತು. ಲಾರಿ ಯಾವುದೇ ದೀಪಗಳನ್ನು ಹಾಕದೇ ಕತ್ತಲಲ್ಲಿ ನಿಲ್ಲಿಸಿದ್ದರಿಂದ ಆಕಸ್ಮಿಕವಾಗಿ ಶಾಯನ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ.
ತೀವ್ರವಾಗಿ ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೇವಲ ಎರಡು ತಿಂಗಳ ಹಿಂದೆ ಭಟ್ಟಾಚಾರ್ಯ ವಿವಾಹವಾಗಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಲಾರಿ ಪೊಲೀಸರು ವಶದಲ್ಲಿ : ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಚಾಲಕ ಪರಾರಿಯಾಗಿದ್ದು, ಸೂಕ್ತ ಸೂಚನೆ ಇಲ್ಲದೇ, ಲಾರಿಯನ್ನು ನಿಲ್ಲಿಸಿದ್ದರಿಂದ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications