ರಾಜ್ಯದ ಯೋಜನಾ ಗಾತ್ರ 47,000 ಕೋಟಿ!
ನವದೆಹಲಿ, ಜೂ.27 : ಬಜೆಟ್ ಮಂಡಿಸುವ ಸಿದ್ಧತೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನಾ ಆಯೋಗದಿಂದ 47,000 ಕೋಟಿ ರೂ. ವಾರ್ಷಿಕ ಬಜೆಟ್ ಗೆ ಅನುಮೋದನೆ ಪಡೆದಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ, ಸರ್ಕಾರದ ಯೋಜನಾ ಗಾತ್ರ 550 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.
ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಜೊತೆಗಿನ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದ 2013-14 ವರ್ಷದ 47,000 ಕೋಟಿ ಯೋಜನಾ ಗಾತ್ರಕ್ಕೆ ಯೋಜನಾ ಆಯೋಗ ಅನುಮೋದನೆ ನೀಡಿದೆ ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರ ಯೋಜನಾ ಆಯೋಗಕ್ಕೆ 46,450 ಕೋಟಿ ವಾರ್ಷಿಕ ಯೋಜನೆಯನ್ನು ಸಲ್ಲಿಸಿತ್ತು. ನೂತನ ಸರ್ಕಾರ ವಾರ್ಷಿಕ ಯೋಜನೆ ಪರಿಷ್ಕರಿಸಿ 550 ಕೋಟಿಗಳಷ್ಟು ಹೆಚ್ಚಿಸಿ, ಒಟ್ಟು 47,000 ಕೋಟಿಗೆ ಏರಿಕೆ ಮಾಡಿದೆ ಎಂದರು.
ಈ ಮೊತ್ತದಲ್ಲಿ ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರವು 3,549 ಕೋಟಿ ನೆರವು ನೀಡಲಿದೆ. ವಿವಿಧ ಕೇಂದ್ರ ಪ್ರಾಯೋಜಿತ ಯೋಜನೆಗಳ ಮೂಲಕ ರಾಜ್ಯಕ್ಕೆ 7,000 ಕೋಟಿ ದೊರೆಯಲಿದೆ. ಒಟ್ಟು ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡುವ ಮೊತ್ತವು 10,000 ಕೋಟಿ ದಾಟಲಿದೆ ಎಂದು ಮಾಹಿತಿ ನೀಡಿದರು.
ಬಜೆಟ್ ಮಂಡನೆ : ನೂತನ ಪರಿಷ್ಕೃತ ಯೋಜನಾ ವೆಚ್ಚಕ್ಕೆ ಅನುಗುಣವಾಗಿ ರಾಜ್ಯದ ಬಜೆಟ್ ಅನ್ನು ಈ ತಿಂಗಳಿನಲ್ಲಿ ಪ್ರಕಟಿಸಲಾಗುತ್ತದೆ. ಬಜೆಟ್ ಮಂಡನೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾವುದು ಎಂದು ಸಿದ್ದರಾಮಯ್ಯ ಹೇಳಿದರು.
ವಿದ್ಯುತ್ ಗೆ ಆದ್ಯತೆ : ಬಜೆಟ್ ನಲ್ಲಿ ರಾಜ್ಯದ ವಿದ್ಯುತ್ ಕೊರತೆ ನೀಗಿಸಲು 4700 ಮೆವ್ಯಾ ವಿದ್ಯುತ್ ಉತ್ಪಾದಿಸಲು ಆದ್ಯತೆ ನೀಡಲಾಗುತ್ತದೆ. ವಿದ್ಯುತ್ ಸಾಗಣೆ ಮತ್ತು ವಿತರಣಾ ನಷ್ಟವನ್ನು ಈಗಿರುವ ಶೇ.18.7ರಿಂದ ಶೇ.15ಕ್ಕೆ ಇಳಿಸುವ ಗುರಿ ಸರ್ಕಾರ ಮುಂದಿದೆ ಎಂದು ಅವರು ತಿಳಿಸಿದರು.

ರೈಲು ಯೋಜನೆಗಳು : ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಒಂಭತ್ತು ರೈಲು ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ ಎಂದು ಹೇಳಿದರು. ನಾಲ್ಕು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಘೋಷಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿರುವುದಾಗಿ ಮಾಹಿತಿ ನೀಡಿದರು.
ಆಯೋಗ ಶ್ಲಾಘನೆ: ಆರ್ಥಿಕ ಯೋಜನಾ ನಿರ್ವಹಣೆ ಕುರಿತಂತೆ ಯೋಜನಾ ಆಯೋಗವು ರಾಜ್ಯ ಸರ್ಕಾರವನ್ನು ಶ್ಲಾಘಿಸಿದೆ. ಸಾಮಾಜಿಕ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ಆರ್ಥಿಕ ಸೇರ್ಪಡೆ ವಿಸ್ತರಿಸುವ ರಾಜ್ಯದ ತಂತ್ರಗಾರಿಕೆ ಮೆಚ್ಚವಂತದ್ದು. ಕರ್ನಾಟಕವು ಇತರ ರಾಜ್ಯಗಳಿಗೆ ಮಾದರಿಯಾಗುವ ಆರ್ಥಿಕ ಯೋಜನೆ ತಯಾರಿಸಿದೆ ಎಂದು ಆಯೋಗ ಶ್ಲಾಘಿಸಿದೆ ಎಂದು ಸಿಎಂ ಹೇಳಿದರು. (ರಾಜ್ಯದಲ್ಲಿ ಎಫ್ ಡಿಐಗೆ ಬಾಗಿಲು ತೆರೆದ ಸಿಎಂ)
ರಾಜ್ಯದ ಬೇಡಿಕೆಗಳು
* 72,09 ಕಿ.ಮೀ. ಉದ್ದದ ಮೆಟ್ರೋ ಎರಡನೇ ಹಂತಕ್ಕೆ ಅನುಮೋದನೆ.
* ಜೆ - ನರ್ಮ್ ಯೋಜನೆಯನ್ನು ಹುಬ್ಬಳ್ಳಿ- ಧಾರವಾಡ, ಮಂಗಳೂರು, ದಾವಣಗೆರೆ, ಬೆಳಗಾವಿ, ಗುಲ್ಬರ್ಗ ಮತ್ತು ಬಳ್ಳಾರಿ ನಗರಗಳಲ್ಲೂ ಜಾರಿಗೆ ತರಬೇಕು.
* 250 ಜನಸಂಖ್ಯೆ ಇರುವ ಪಶ್ಚಿಮಘಟ್ಟದ ವಸತಿ ಪ್ರದೇಶಗಳಿಗೂ ರಸ್ತೆ ಸಂಪರ್ಕ ಕಲ್ಪಿಸುವುದು.
* 8,759 ಕೋಟಿ ವೆಚ್ಚದ ಸಬ್ ಅರ್ಬನ್ ರೇಲ್ವೆ ನಿಲ್ದಾಣಕ್ಕೆ ಅನುಮೋದನೆ.
* ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಬೇಕು.
* ಎತ್ತಿನಹೊಳೆ ಯೋಜನೆಗೆ ಕೇಂದ್ರ 8000 ಕೋಟಿ ರುಪಾಯಿ ಅನುದಾನ ನೀಡಬೇಕು.(ನಾಲ್ಕು ಜಿಲ್ಲೆಗಳ ಕುಡಿಯುವ ನೀರು ಯೋಜನೆ)
* ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಊಟ ವಿಸ್ತರಿಸಬೇಕು.












Click it and Unblock the Notifications