ಕೇದಾರನಾಥನಿಗೆ ಶನಿವಾರದಿಂದ ಮತ್ತೆ ಪೂಜೆ!
ಉತ್ತರಾಖಂಡ, ಜೂ.27 : ಮೇಘಸ್ಫೋಟದಿಂದಾಗಿ ತೀವ್ರವಾಗಿ ಹಾನಿಗೆ ಒಳಗಾಗಿರುವ ಕೇದಾರನಾಥ್ ದೇವಾಲಯದಲ್ಲಿ ಶನಿವಾರದಿಂದ ಪುನಃ ಪೂಜೆ ಆರಂಭವಾಗಲಿದೆ. ಗುಪ್ತಕಾಶಿಯಲ್ಲಿ ಗುರುವಾರ ನಡೆದ ದೇವಾಲಯದ ಆಡಳಿತ ಮಂಡಳಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ಗುರುವಾರ ಈ ಕುರಿತು ಮಾಹಿತಿ ನೀಡಿರುವ ಬದರೀನಾಥ್-ಕೇದಾರನಾಥ್ ಆಡಳಿತ ಮಂಡಳಿ, ಶನಿವಾರದಿಂದ ಅರ್ಚಕ ಮತ್ತು ಆಡಳಿತ ಮಂಡಳಿ ಸದಸ್ಯರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಆದರೆ, ಭಕ್ತಾದಿಗಳಿಗೆ ಕೇದಾರನಾಥ್ ನ ದರ್ಶನಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಉತ್ತರಾಖಂಡ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು ಈಗಾಗಲೇ ಕೇದಾರನಾಥ್ ದೇವಾಲಯವನ್ನು ಪುನಃ ನಿರ್ಮಿಸಲು ಎರಡು ವರ್ಷಗಳ ಕಾಲಸಮಯಾವಕಾಶ ಬೇಕಾಗಿದೆ. ಆದ್ದರಿಂದ ಭಕ್ತಾದಿಗಳಿಗೆ ಅಲ್ಲಿಯವರೆಗೂ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಮಳೆ ಮತ್ತು ಪ್ರವಾಹದಿಂದಾಗಿ ಕೇದಾರನಾಥ್ ದೇವಾಲಯದವೊಳಗೆ ನೀರು ನುಗ್ಗಿತ್ತು. ದೇವಾಲಯದ ಆವರಣದ ಪ್ರದೇಶಗಳು ಮಳೆಯಿಂದಾಗಿ ಸಂಪೂರ್ಣ ಹಾನಿಯಾಗಿವೆ. ಆದ್ದರಿಂದ ಭಕ್ತಾದಿಗಳು ದೇವಾಲಯದ ಪ್ರವೇಶಿಸುವ ವ್ಯವಸ್ಥೆ ಕಲ್ಪಿಸಬೇಕಾದರೆ, ವರ್ಷಗಳ ಸಮಯಾವಕಾಶ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.(ಕೇದಾರನಾಥನನ್ನೇ ದೋಚಿದ ಸಾಧು-ಸಂತರು)
ನಡುಗಿತು ಭೂಮಿ : ಉತ್ತರಾಖಂಡದಲ್ಲಿ ಸುರಿದ ಮಳೆಯಿಂದಾಗಿ ಸಂತ್ರಸ್ತರಾಗಿರುವ ಜನರನ್ನು ರಕ್ಷಿಸುವ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಆಗಲೇ ಇಂದು ಲಘು ಭೂಕಂಪ ಸಂಭವಿಸಿದ್ದು, ಸಂತ್ರಸ್ತರಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ.
ಗುರುವಾರ ಮಧ್ಯಾಹ್ನ ಉತ್ತರಾಖಂಡ ಪ್ರದೇಶದ ಪಿತೋರ್ ಗಡದಲ್ಲಿ ಲಘು ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.5 ರಷ್ಟು ದಾಖಲಾಗಿದೆ.












Click it and Unblock the Notifications