ಸಂತ್ರಸ್ತರ ರಕ್ಷಣೆ ನಿರತ ಪೈಲಟ್ ದಂಪತಿಗೆ ಜೈ
ಡೆಹ್ರಾಡೂನ್, ಜೂ.26: ಉತ್ತರಾಖಂಡದಲ್ಲಿ ಸಂಭವಿಸಿರುವ ಜಲ ಪ್ರಳಯದಲ್ಲಿ ಸಿಲುಕಿರುವ ಸಂತ್ರಸ್ತರ ಪ್ರಾಣ ರಕ್ಷಣೆ ಮಾಡುತ್ತಿರುವ ಯೋಧರ ಪೈಕಿ ಎರಡು ದಂಪತಿ ಜೋಡಿ ಪೈಲೆಟ್ ಗಳು ಗಮನ ಸೆಳೆಯುತ್ತಿದ್ದಾರೆ.
ಮಾನವೀಯತೆ ಮೆರೆದು ಕರ್ತವ್ಯ ನಿರತ ಪೈಲಟ್ ಜೋಡಿಗಳ ಹೆಸರು ಸ್ಕ್ವಾಡ್ರನ್ ಲೀಡರ್ ಎಸ್.ಕೆ.ಪ್ರಧಾನ್ ಪತ್ನಿ ಖುಷ್ಬೂ ಗುಪ್ತಾ , ಸ್ಕ್ವಾಡ್ರನ್ ಲೀಡರ್ ವಿಕ್ರಂ ತೈಗರಾಮನ್ ಪತ್ನಿ ಪೈಲೆಟ್ ತಾನಿಯಾ ಶ್ರೀನಿವಾಸ್.
ಅತ್ಯಂತ ದುರ್ಗಮ ಪ್ರದೇಶವಾದ ಗೌಚರ್ ನಲ್ಲಿ ಸಂತ್ರಸ್ತರನ್ನು ರಕ್ಷಣೆ ಮಾಡುತ್ತಾ ಯುವ ಜನತೆಗೆ ಮಾದರಿಯಾಗಿದ್ದಾರೆ. ಸಂತ್ರಸ್ತರಿಗೆ ಧೈರ್ಯ ತುಂಬುತ್ತಿದ್ದಾರೆ. ಒಂದು ದಂಪತಿ ಜೋಡಿ ಭಾರತೀಯ ವಾಯುಪಡೆಯ ಎಂ-17 ಹೆಲಿಕಾಪ್ಟರ್ ಹಾರಾಟ ನಡೆಸಿದರೆ ಮತ್ತೊಂದು ಜೋಡಿ ಚೇತಕ್ ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದ್ದಾರೆ.

ಕಳೆದ ಒಂದು ವಾರದ ಹಿಂದೆಯೇ ಉತ್ತರಾಖಂಡಕ್ಕೆ ಆಗಮಿಸಿರುವ ದಂಪತಿ ಜೋಡಿಗಳು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸಂಕಷ್ಟದಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡುವಲ್ಲಿ ತಲ್ಲೀನರಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಸಪ್ತಪದಿ ತುಳಿದಿದ್ದ ಸ್ಕ್ವಾಡ್ರನ್ ಲೀಡರ್ ಪ್ರಧಾನ್ ಪತ್ನಿ ಖುಷ್ಬೂ ಗುಪ್ತಾ ಕಷ್ಟದಲ್ಲಿರುವವರನ್ನು ರಕ್ಷಣೆ ಮಾಡುವುದು ನಮಗೆ ಒದಗಿ ಬಂದಿರುವ ಸೌಭಾಗ್ಯ ಎಂದು ಬಣ್ಣಿಸಿದ್ದಾರೆ.
ಇದೇ ರೀತಿ ಸ್ಕ್ವಾಡ್ರನ್ ಲೀಡರ್ ತೈಗಾರಾಮನ್ ಮತ್ತು ತಾನಿಯಾ ಶ್ರೀನಿವಾಸನ್ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ನಮಗೆ ಇಂತಹ ಅವಕಾಶ ಒದಗಿ ಬರುತ್ತದೆ ಎಂದು ನಂಬಿಕೊಂಡಿರಲಿಲ್ಲ. ನಾವು ಧೃತಿಗೆಡದೆ ಕಾರ್ಯಾಚರಣೆಯಲ್ಲಿ ತೊಡಗಿದ್ದೇವೆ. ವಾಯುಪಡೆಯ ಹೆಲಿಕಾಪ್ಟರ್ ಗಳನ್ನು ಹಾರಾಟ ನಡೆಸುವುದೇ ಒಂದು ಸೌಭಾಗ್ಯ ಎಂದಿದ್ದಾರೆ.
ಪ್ರವಾಹಕ್ಕೆ ಸಿಲುಕಿ ಸಂತ್ರಸ್ತರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರ ಮಾಡಿದ್ದೇವೆ. ಇನ್ನು ಕೆಲವರು ಸಿಲುಕಿಕೊಂಡಿದ್ದಾರೆ. ಅಂತಹವರನ್ನು ರಕ್ಷಣೆ ಮಾಡುತ್ತೇವೆ ಎಂದು ಆತ್ಮವಿಶ್ವಾಸದಿಂದ ಈ ದಂಪತಿ ಜೋಡಿಗಳು ಹೇಳಿರುವುದು ಇತರರಿಗೂ ಮಾದರಿಯಾಗಿದೆ.












Click it and Unblock the Notifications