ಸಿಬಿಐ ಭೀತಿವಾದ ಠುಸ್: ಕೆಜೆಪಿ ಬಿಎಸ್ಸಾರ್ ಬಿಜೆಪಿ ವಿಲೀನ

ಯಡಿಯೂರಪ್ಪ ಆದಿಯಾಗಿ ಯಾರು ಏನೇ ಹೇಳಿದರೂ ಬಿಜೆಪಿ ಬಿಡಲು ಯಡಿಯೂರಪ್ಪಗೆ ಪ್ರಧಾನವಾಗಿ ಕಾಡಿದ್ದು ಸಿಬಿಐ ಭೀತಿವಾದ ಎಂಬುದರಲ್ಲಿ ಎರಡು ಮಾತಿಲ್ಲ. ಭ್ರಷ್ಟಾಚಾರಗಳ ಚಕ್ರಸುಳಿಗೆ ಸಿಲುಕಿ ಎಲ್ಲಿ ಜೈಲುಪಾಲಾಗಿಬಿಡುವೆನೋ ಎಂಬ ಭೀತಿ ಇನ್ನಿಲ್ಲದಂತೆ ಕಾಡಿದಾಗ ಯಡಿಯೂರಪ್ಪ ಮುಖ ಮಾಡಿದ್ದು ಕಾಂಗ್ರೆಸ್ಸಿನತ್ತ ವಿಮುಖಗೊಂಡಿದ್ದು ತಮ್ಮ ನೆರವಿಗೆ ಬಾರದ ಅಸಹಾಯಕ ಸ್ಥಿತಿಯಲ್ಲಿದ್ದ ಬಿಜೆಪಿಯಿಂದ.
ಆದರೆ ಈ ಮಧ್ಯೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾರಿ ಬದಲಾವಣೆಗಳಾಗಿವೆ. ಆದರೆ ಇದೆಲ್ಲದರ ತಳಹದಿ ಮತದಾರ ಭ್ರಷ್ಟಾಚಾರ ವಿರೋಧಿಗಳನ್ನು ತಿಪ್ಪೆಗೆಸೆದಿದ್ದು. ಇದು ಮೊನ್ನೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಸ್ಪಷ್ಟವಾಗಿದೆ.
ಅದನ್ನು ಆಡಳಿತ-ವಿರೋಧಿ ಅಲೆ ಅನ್ನುವುದಕ್ಕಿಂತ ಅದು ಮತದಾರನ ಭ್ರಷ್ಟಾಚಾರ ವಿರೋಧಿ ಮನಃಸ್ಥಿತಿ ಎಂದು ವ್ಯಾಖ್ಯಾನಿಸಬಹುದು. ಹಾಗಾಗಿಯೇ ಭ್ರಷ್ಟ ಬಿಜೆಪಿ ಆಡಳಿತ ಮತದಾರನಿಗೆ ಕಾಲ ಕಸವಾಯಿತು. ಮತ್ತು...
ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಕ್ಕೂ ಈಗ ಇದೇ ಚಿಂತೆಯಾಗಿರುವುದು. ಬ್ರಹ್ಮಾಂಡ ಭ್ರಷ್ಟಾಚಾರದ ಯುಪಿಎ ಸರಕಾರವನ್ನು ಮತದಾರ ಸಾರಾಸಗಟಾಗಿ ಕಿತ್ತೊಗೆಯುತ್ತಾನೆ ಎಂಬುದು ಕಾಂಗ್ರೆಸಿಗೆ ಮನವರಿಕೆಯಾಗಿದೆ. ಇದು ಕಾಂಗ್ರೆಸ್ ಅನ್ನು ನಂಬಿರುವ ಇತರರಿಗೂ ಅರ್ಥವಾಗಿದೆ. ಮುಖ್ಯವಾಗಿ ಸಿಬಿಐಗೆ. ಇದೇ ಮೋದಿ ಸೇರಿದಂತೆ ಯಡಿಯೂರಪ್ಪ, ರೆಡ್ಡಿ ಬ್ರದರ್ಸ್ ಗೆ ಆಶಾದಾಯಕವಾಗಿರುವುದು.
ಮೋದಿ ವಿರುದ್ಧದ ಸಿಬಿಐ ಹಿಡಿತ ಸಡಿಲವಾಗುತ್ತಿರುವುದು ಈಗ ಯಡಿಯೂರಪ್ಪ ಮತ್ತು ರೆಡ್ಡಿ ಬ್ರದರ್ಸ್ ಗೆ ಕಣ್ಣಿಗೆ ಕಾಣುತ್ತಿದೆ. ಅವರಿಗೆ ಬೇಕಾಗಿರುವುದೂ ಇದೊಂದೇ. ಹೇಗಾದರೂ ಮಾಡಿ ಭ್ರಷ್ಟಾಚಾರಗಳನ್ನು ಮುಚ್ಚಿಡುವ, ಸಿಬಿಐ ಭೀತಿವಾದದಿಂದ ಪಾರಾಗುವ ರಾಜ ಮಾರ್ಗ.
ಅದು ಮೋದಿ ಮೂಲಕ ನೆರವೇರುವಂತಾದರೆ ಬಿಜೆಪಿ ಇವರಿಗೆ ಆಪ್ಯಾಯಮಾನವಾಗುವುದರಲ್ಲಿ ಅನುಮಾನವಿಲ್ಲ. ಹಾಗೆಂದೇ ಮೊದಲು ಯಡಿಯೂರಪ್ಪ, ಆನಂತರ ಚಂಚಲಗೂಡ ನಿವಾಸಿ ಜನಾರ್ದನ ರೆಡ್ಡಿಯ ಬಲಗೈ ಬಂಟ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಮಾತೃಪಕ್ಷ ಬಿಜೆಪಿ ಮತ್ತೆ ಹಿತಕರವಾಗಿ ಗೋಚರಿಸುತ್ತದೆ.
ಒಟ್ಟಿನಲ್ಲಿ ಲೋಕಸಭೆ ಚುನಾವಣೆಗೆ ಧ್ರುವೀಕರಣಗೊಂಡಿದ್ದ ರಾಜಕೀಯ ಶಕ್ತಿಗಳು ಮತ್ತೆ ಒಂದಾಗುವ ಕಾಲ ಬಂದಂತಿದೆ. ನೋಡೋಣ ಇನ್ನೂ ಏನೆಲ್ಲಾ ಬದಲಾವಣೆಗಳು ಕಾದಿವೆಯೋ!?












Click it and Unblock the Notifications