'ಭಾವಿ ಪ್ರಧಾನಿ' ಮೋದಿನ್ನ ಕಂಡ್ರೆ ಸಿಬಿಐಗೆ ಭಯವಂತೆ!
ಅಹಮದಾಬಾದ್, ಜೂನ್ 18: ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ನರೇಂದ್ರ ಮೋದಿ ಹೆಸರು ಎತ್ತಿದರೂ ಸಾಕು ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಬೆಚ್ಚಿಬೀಳುತ್ತಿದೆ.
ಇದರಿಂದ ಗುಜರಾತಿನ ಹಾಲಿ ಸಿಎಂ ಪ್ರಧಾನಿ ಖುರ್ಚಿ ಮೇಲೆ ಯಾವ ಪರಿ ದೃಷ್ಟಿ ನೆಟ್ಟಿದ್ದಾರೆ ಎಂಬುದು ಸಾಬೀತಾಗುತ್ತದಾದರೂ ಸಿಬಿಐಗೆ ಈಗಲೇ ಭಯ ಶುರುವಾಗಿರುವುದು ಸೋಜಿಗವಾಗಿದೆ. ಈ ಮಧ್ಯೆ. ಮೋದಿಯನ್ನು ಸಿಬಿಐ ಸೇರಿದಂತೆ ಇನ್ನಿತರೆ ಕಾನೂನು ಕಂಟಕಗಳಿಂದ ಸಂರಕ್ಷಿಸಿಕೊಳ್ಳುವ ಗುರಿಯೊಂದಿಗೆ ಬಿಜೆಪಿ, ಮೋದಿಯನ್ನು ಇಷ್ಟು ಶೀಘ್ರವಾಗಿ ಪ್ರಧಾನಿ ಅಭ್ಯರ್ಥಿಯನ್ನಾಗಿಸಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಇತ್ತೀಚೆಗೆ ದಿಲ್ಲಿಯಲ್ಲಿ ಸಿಬಿಐ ಹಿರಿಯ ಅಧಿಕಾರಿಗಳು ನರೇಂದ್ರ ಮೋದಿಯನ್ನು 'ಕಟ್ಟಿಹಾಕುವ' ಬಗ್ಗೆ ಮತ್ತು ಗುಜರಾತ್ ಸರಕಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ ಹಿರಿಯ ಅಧಿಕಾರಿಗಳು ಅಂತಹ ದುಸ್ಸಾಹಸಕ್ಕೆ 'ಕೈ' ಹಾಕುವುದಕ್ಕೆ ಹಿಂದೇಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.

'ಪಂಜರದ ಗಿಳಿ'ಗೆ ಇನ್ನೂ ಅರಗಿಸಿಕೊಳ್ಳಲಾಗಿಲ್ಲ
ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ತನ್ನನ್ನು 'ಪಂಜರದ ಗಿಳಿ' ಎಂದು ಬಣ್ಣಿಸಿದ್ದನ್ನು 'ಮಾತನಾಡುವ ಗಿಳಿ' ಸಿಬಿಐಗೆ ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ಹೀಗಿರುವಾಗ, ಸಿಎಂ ಮೋದಿ ಪಿಎಂ ಮೋದಿ ಆಗಿಬಿಡುವ ನಿಚ್ಚಳ ಸಾಧ್ಯತೆಗಳ ಬಗ್ಗೆ ಸಿಬಿಐ ಆತಂಕಗೊಂಡಿದ್ದು, ಮೋದಿ ಕೇಸುಗಳನ್ನು ಹ್ಯಾಂಡಲ್ ಮಾಡಲು ಆತಂಕ/ಅತೀವ ಜಾಗ್ರತೆ ವ್ಯಕ್ತಪಡಿಸಿದೆ.

ಸಿಬಿಐಗೆ ಅರುಣ್ ಜೇಟ್ಲಿ ಎಚ್ಚರಿಕೆ ಸಂದೇಶ:
ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಸಹ ಬೆದರುಗೊಂಡಿರುವ ಸಿಬಿಐಗೆ ಎಚ್ಚರಿಕೆಯ ಸಂದೇಶ ನೀಡಿದ್ದರು. ಸರಕಾರ ಶಾಶ್ವತವಲ್ಲ. ಮುಂದೊಂದು ದಿನ ಸಿಬಿಐ ಕಾರ್ಯನೀತಿ, ಅದನ್ನು ರಾಜಕೀಯಗೊಳಿಸುವ ಬಗ್ಗೆಯೇ ತನಿಖಾ ಆಯೋಗ ರಚನೆಯಾಗಬಹುದು. ಆದ್ದರಿಂದ ಸಿಬಿಐ ಜಾಗ್ರತೆ/ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು ಒಳಿತು ಎಂದು ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದನಮ್ನು ಇಲ್ಲಿ ಸ್ಮರಿಸಬಹುದು.

ಅಮಿತ್ ಷಾ ಪ್ರಕರಣ- ಸಿಬಿಐ ಕಂಗಾಲು:
ಇದರಿಂದ ಕಂಗಾಲಾಗಿರುವ ಸಿಬಿಐ ಮಂದಿ 'ನಮಗ್ಯಾಕೆ ಬೇಕು ಅದರ ಊಸಾಬರಿ. ಮೋದಿ/ ಗುಜರಾತ್ ಪ್ರಕರಣ ಬಗ್ಗೆ ತುಸು ಜಾಗ್ರತೆ ವಹಿಸೋಣ. 'ಯಾರದೋ' ಮಾತು ಕೇಳಿಕೊಂಡು/ ಯಾರದೋ 'ಹಸ್ತ'ಕ್ಷೇಪದಿಂದ ಅನಗತ್ಯವಾಗಿ ಮೋದಿ ಮೇಲೆ ದುಡುಕುವುದು ಬೇಡ' ಎಂಬ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗಿದೆ.
ಸಿಬಿಐ ಮೇಲಧಿಕಾರಿಗಳ ಈ 'ಚಿಂತನೆ' ಫಲವಾಗಿ ಮೋದಿ ಬಲಗೈ ಬಂಟ ಎಂದೇ ಜನಜನಿತರಾದ ಮಾಹಿ ಗೃಹ ಸಚಿವ ಅಮಿತ್ ಷಾ ಪ್ರಕರಣದಲ್ಲಿ ಸಿಬಿಐ ವಿಳಂಬ ಧೋರಣೆ ತಾಳಿದೆ ಎನ್ನಲಾಗಿದೆ.

ಭಟ್ ವಗೈರೆಗಳು ಕೈಗೊಂಬೆಯಾಗಿದ್ದು ಹೀಗೆ:
ಪರಿಸ್ಥಿತಿ ಹೀಗಿರುವಾಗ ಕುಲದೀಪ್ ಶರ್ಮಾ, ರಜನೀಶ್ ರೈ, ರಾಹುಲ್ ಶರ್ಮಾ ಮತ್ತು ಸಂಜೀವ್ ಭಟ್ ಎಂಬ ಐಪಿಎಸ್ ಅಧಿಕಾರಿಗಳ ಹೆಸರುಗಳ ಮೆರವಣಿಗೆ ಕಣ್ಣಮುಂದೆ ಸಾಗುತ್ತದೆ. ಕುಲದೀಪ್ ಶರ್ಮಾ ನಿವೃತ್ತಿಯ ನಂತರ ಈಗ ಕೇಂದ್ರ ಗೃಹ ಸಚಿವಾಲಯದಲ್ಲಿ ಅಡ್ವೈಸರ್ ಆಗಿದ್ದಾರೆ. ಗುಜರಾತ್ (ಮೋದಿ) ಸರಕಾರಕ್ಕೆ ಮುಳುಗುನೀರುವ ತರುವ ಪ್ರಕರಣಗಳ ಬೆನ್ನುಹತ್ತಿ. ಅವುಗಳ ಬಗ್ಗೆ ಕಾಂಗ್ರೆಸ್ ಪಕ್ಷದ ಕಣ್ಣುತೆರೆಸುವುದಷ್ಟೇ ಇವರ ಕೆಲಸವಾಗಿದೆ.

ಕಾನೂನು ಕಂಟಕಗಳಿಂದ ಮೋದಿಯ ಸಂರಕ್ಷಿಸಿಕೊಳ್ಳಲು:
ಆದರೆ ಈಗ ಸಿಬಿಐ ಅಧಿಕಾರಿಗಳು ಭವಿಷ್ಯವನ್ನು (ಭವಿಷ್ಯದ ಪ್ರಧಾನಿಯನ್ನು) ನೆನೆದು ಮಾಹಿತಿ ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ. ಮೋದಿಯನ್ನು ಸಿಬಿಐ ಸೇರಿದಂತೆ ಇನ್ನಿತರೆ ಕಾನೂನು ಕಂಟಕಗಳಿಂದ ಸಂರಕ್ಷಿಸಿಕೊಳ್ಳುವ ಗುರಿಯೊಂದಿಗೆ ಬಿಜೆಪಿ, ಮೋದಿಯನ್ನು ಇಷ್ಟು ಶೀಘ್ರವಾಗಿ ಪ್ರಧಾನಿ ಅಭ್ಯರ್ಥಿಯನ್ನಾಗಿಸಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.












Click it and Unblock the Notifications