ಕೇದಾರನಾಥ ಕೃಪೆ: ಕರ್ನಾಟಕದ ಯಾತ್ರಿಗಳು ಸೇಫ್
ಉತ್ತರಾಖಂಡ್, ಜೂ.18: ಉತ್ತರ ಭಾರತದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅನೇಕ ಕಡೆ ಭೂಕುಸಿತ ಸಂಭವಿಸಿದೆ. ಕೇದಾರನಾಥನ ದರ್ಶನಕ್ಕಾಗಿ ಕರ್ನಾಟಕದಿಂದ ತೆರಳಿದ್ದ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂಬ ತಕ್ಷಣದ ಸಂದೇಶ ಸಿಕ್ಕಿದೆ. ರುದ್ರಪ್ರಯಾಗದ ಬಳಿ ಇದ್ದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಕೂಡಾ ಸೇಫ್ ಆಗಿದ್ದಾರೆ.
ಈ ನಡುವೆ ಗಡಿಪ್ರದೇಶ ಕಿನ್ನೌರ್ ನಲ್ಲಿ ಅಪಾಯಕ್ಕೆ ಸಿಕ್ಕಿಹಾಕಿಕೊಂಡಿದ್ದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಸೇರಿದಂತೆ 12 ಪ್ರವಾಸಿಗರನ್ನು ರಕ್ಷಣಾ ಸಿಬ್ಬಂದಿ ಮಂಗಳವಾರ ರಕ್ಷಿಸಿದ್ದಾರೆ. ಕಿನ್ನೌರ್ ಬುಡಕಟ್ಟು ಪ್ರದೇಶಕ್ಕೆ ಸಂಪರ್ಕ ಒದಗಿಸುವ ರಸ್ತೆ ಸೇತುವೆ ಕುಸಿತದಿಂದಾಗಿ ಸತತ 60 ಗಂಟೆಗಳ ಕಾಲ ಯಾವುದೇ ನೆರವಿಲ್ಲದೆ ಜನರು ಅಪಾಯದ ಕ್ಷಣ ಎದುರಿಸಿದ್ದರು.

ಉತ್ತರಾಖಂಡ್, ಉತ್ತರ ಕಾಶಿ ಕಡೆಯಿಂದ ಚಾರ್ಮ್ ದಾಮ್ ಯಾತ್ರೆ ಕೈಗೊಂಡಿದ್ದ ಕರ್ನಾಟಕದ 10 ಜನ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬಿಜಾಪುರ ಜಿಲ್ಲೆ ತಾಳೀಕೋಟೆಯ ನರಸಯ್ಯ ಶೆಟ್ಟಿ, ಪಂಕಜಾ ಶೆಟ್ಟಿ ಇವರ ಪುತ್ರಿ ಮೇಘಾ, ಅಳಿಯ ರಾಘವೇಂದ್ರ ಶೆಟ್ಟಿ ಹಾಗೂ ಸಂಬಂಧಿಕ ಭಾಸ್ಕರ ಶೆಟ್ಟಿ ಅವರ ಸಂಪರ್ಕ ಸೋಮವಾರ ಸಿಕ್ಕಿರಲಿಲ್ಲ. ಮಂಗಳವಾರ ಇವರ ಬಗ್ಗೆ ಮಾಹಿತಿ ಸಿಕ್ಕಿದ್ದು, ಸುರಕ್ಷಿತವಾಗಿದ್ದಾರೆ ಎಂದು ಟಿವಿ ಮಾಧ್ಯಮಗಳು ವರದಿ ಮಾಡಿವೆ. [ಉತ್ತರ ಭಾರತದಲ್ಲಿ ಮಳೆ ಹಾವಳಿ ಚಿತ್ರಗಳನ್ನು ನೋಡಿ]
ಕಾಶಿ, ಬದರಿ, ಕೇದಾರ ಯಾತ್ರೆಗೆಂದು ಬಂದಿರುವ ಹೂವಿನಹಡಗಲಿ ನಿವಾಸಿಗಳಾದ ರಾಘವೇಂದ್ರ ಶೆಟ್ಟಿ ಕುಟುಂಬ ಕೂಡಾ ಸುರಕ್ಷಿತವಾಗಿದೆ. ಈ ನಡುವೆ ಗಂಗೋತ್ರಿ, ಯಮುನೋತ್ರಿ ಯಾತ್ರೆ ಮುಗಿಸಿ ಕೇದಾರನಾಥಕ್ಕೆ ಹೊರಟ್ಟಿದ್ದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ರುದ್ರಪ್ರಯಾಗ ಜಿಲ್ಲೆಯ ಬುಡ್ನಾ ಗ್ರಾಮದಲ್ಲಿ ಸಿಲುಕಿದ್ದಾರೆ. ಆದರೆ, ಹೆಚ್ಚಿನ ಅಪಾಯ ಏನಿಲ್ಲ. ಸರಿಯಾಗಿ ಆಹಾರ ಸಿಗುತ್ತಿಲ್ಲ. ಮಳೆ ಕಾರಣ ರಕ್ಷಣಾ ಕಾರ್ಯ ಸ್ವಲ್ಪ ವಿಳಂಬವಾಗುತ್ತಿದೆ. ರಕ್ಷಣಾ ಪಡೆ ಯೋಧರ ಅಭಯದಿಂದ ನಮ್ಮ ತಂಡ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.
ಪ್ರವಾಸಿಗರ ಅನುಕೂಲಕ್ಕಾಗಿ ಉತ್ತರಾಖಂಡ್ ರಾಜ್ಯ ನೀಡಿರುವ ಸಹಾಯವಾಣಿ : 0135-2710333/ 0135-2710334/ 0135-2710335
ಹಿಮಾಲಯದ ತಪ್ಪಲಿನಲ್ಲಿರುವ ಕೇದಾರನಾಥ, ಬದರಿನಾಥ, ಗಂಗೋತ್ರಿ, ಯಮುನೋತ್ರಿಗೆ ತೆರಳುವ ಯಾತ್ರಿಗಳು ಸೇರಿದಂತೆ ರುದ್ರಪ್ರಯಾಗ, ಚಮೋಲಿ, ಉತ್ತರಕಾಶಿ ಜಿಲ್ಲೆಗಳಲ್ಲಿ ಸಿಲುವ ಯಾತ್ರಿಗಳು ಸೇರಿದಂತೆ ಸುಮಾರು 71,440 ಮಂದಿ ಅಪಾಯದಲ್ಲಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಚಮೋಲಿಯಲ್ಲಿ 27,040 ಯಾತ್ರಿಗಳು, ರುದ್ರಪ್ರಯಾಗದಲ್ಲಿ 25,000 ಹಾಗೂ ಉತ್ತರ ಕಾಶಿಯಲ್ಲಿ 9,850 ಮಂದಿ ಸಿಲುಕಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications