ಗುರುವಾಯೂರಪ್ಪ ಸನ್ನಿಧಿಯಲ್ಲಿ ಶ್ರೀಶಾಂತ್ ಮದುವೆ
ಕೊಚ್ಚಿ, ಜೂನ್ 15: ಕಳ್ಳಾಟದ ಕೇಸನ್ನು ಹಳ್ಳಹಿಡಿಸಿದ A1 ಆಪಾದಿತ ಎಸ್ ಶ್ರೀಶಾಂತ್ ಎಕ್ಸ್ ಪ್ರೆಸ್ ವೇಗದಲ್ಲಿ ಕೇರಳದಲ್ಲಿರುವ ಅಷ್ಟೂ ದೇಗುಲ ದರ್ಶನದಲ್ಲಿ ನಿರತನಾಗಿದ್ದಾನೆ.
ಈ ಮಧ್ಯೆ, ಮನೆಗೆ ಮರಳಿದ ಮುದ್ದಿನ ಮಗನಿಗೆ ಆರತಿ ಎತ್ತಿ ಸ್ವಾಗತಿಸಿದ ಶ್ರೀಶಾಂತ್ ಮಾತಾಪಿತೃಗಳು ತಮ್ಮ ಪುತ್ರನಿಗೆ ಬೇಗನೆ ಒಂದು ಮದುವೆ ಮಾಡಿಬಿಡುವ ಆಲೋಚನೆ ನಡೆಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಸೆಪ್ಟೆಂಬರಿನಲ್ಲಿ ಕೇರಳ ಕ್ರಿಕೆಟ್ ಕಲಿ ಶಾಂತಕುಮಾರನ್ ಶ್ರೀಶಾಂತ್ ಚತುರ್ಭುಜರಾಗಲಿದ್ದಾರೆ.

ಗುರುವಾಯೂರಿನಲ್ಲಿ ಓಣಂಗೆ ಶ್ರೀಶಾಂತ್ ಗಟ್ಟಿಮೇಳ:
ಮುಂದಿನ ಓಣಂ ಸಂದರ್ಭದಲ್ಲಿ ಗುರುವಾಯೂರಿನ ಶ್ರೀಕೃಷ್ಣನ ಸನ್ನಿಧಿಯಲ್ಲಿ ಶ್ರೀಶಾಂತ್ ಗೆ ಗಟ್ಟಿಮೇಳ ಮೊಳಗಿಸಲು ಮಾತಾಪಿತೃಗಳು ಗುರುಹಿರಿಯರು ನಿಶ್ಚಯಿಸಿದ್ದಾರೆ ಎಂದು ತಿಳಿದುಬಂದಿದೆ.

ಜೈಪುರ ರಾಜಮನೆತನದ ಹುಡುಗಿ:
ಜೈಪುರದ ರಾಜಮನೆತನದ ಕುಡಿಯೊಂದು ಶ್ರೀಶಾಂತನ ಕೈಹಿಡಿಯಲಿದ್ದಾರೆ. ಜೈಪುರದ ಹುಡುಗಿಯೊಂದಿಗೆ ಮದುವೆಯಾಗುವುದಾಗಿ ಸ್ಪಾಟ್ ಫಿಕ್ಸಿಂಗ್ ನಡೆಸುವುದಕ್ಕೂ ಮುನ್ನವೇ ಶ್ರೀಶಾಂತ್ ಹೇಳಿದ್ದರಾದರೂ ಪ್ರಕರಣದಲ್ಲಿ ತಗುಲಿಹಾಕಿಕೊಳ್ಳುತ್ತಿದ್ದಂತೆ ಹುಡುಗಿ ಮನೆಯವರು ಮದುವೆಗೆ ಹಿಂದೆಮುಂದೆ ನೋಡಿದ್ದರು.

ದೆಹಲಿ ಕೋರ್ಟ್ ಅಭಿಪ್ರಾಯದಿಂದ ಆನೆಬಲ:
ಆದರೆ ಈಗ ಜಾಮೀನಿನ ಮೇಲೆ ಬಿಡುಗೆಯಾಗಿರುವುದೂ ಅಲ್ಲದೆ ಪ್ರಕರಣದಲ್ಲಿ ಏನೇನೂ ಹುರುಳಿಲ್ಲ ದೆಹಲಿ ಕೋರ್ಟ್ ಅಭಿಪ್ರಾಯಪಟ್ಟಿರುವುದರಿಂದ ಶ್ರೀಶಾಂತ್ ಮಾತಾಪಿತೃಗಳು ತಮ್ಮ ಮಗನ ಬಗ್ಗೆ ಹೆಚ್ಚು ಆಸ್ಥೆ ವಹಿಸಿದ್ದಾರೆ. ಇದೇ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗಲೇ ಮದುವೆ ಶಾಸ್ತ್ರ ಮುಗಿಸಿದ ಅಂಕಿತ್ ಚೌಹಾಣ್ ಮತ್ತು ನೇಹಾ ಸಂಬರಿ ಅವರ ಪ್ರೇಮ ಕಥಾನಕವೂ ಶ್ರೀಗೆ ಪ್ರೇರಣೆಯಾಗಿದೆ. ಟೆಕ್ಕಿ ನೇಹಾ ಜತೆಗಿನ ಅಂಕಿತ್ ಪ್ರೇಮ 8 ವರ್ಷ ಹಳೆಯದ್ದು.

ಜೈಲಿನಲ್ಲಿ ಹುಡುಗಿಯ ತಂದೆ-ಶ್ರೀ ಭೇಟಿ:
ಅಂಕಿತ್ ಚೌಹಾಣ್ ಅವರಲ್ಲಿ ನೇಹಾ ಸಂಬರಿ ತುಂಬು ವಿಶ್ವಾಸ ವ್ಯಕ್ತಡಿಸಿದಂತೆ ಶ್ರೀ ಗೆಳತಿಯೂ ಶ್ರೀಶಾಂತನಲ್ಲಿ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ ಎಂದು ಶ್ರೀ ಕುಟುಂಬದ ಮೂಲಗಳು ತಿಳಿಸಿವೆ. ಶ್ರೀ ತಿಹಾರ್ ಜೈಲಿನಲ್ಲಿ ಕಣ್ಣಿರು ಹಾಕುತ್ತಿದ್ದಾಗ ಹುಡುಗಿಯ ತಂದೆ ಆತನನ್ನು ಭೇಟಿ ಮಾಡಿದ್ದರು ಎಂದೂ ತಿಳಿದುಬಂದಿದೆ.

ಅಯ್ಯಪ್ಪಸ್ವಾಮಿ ಆಶೀರ್ವಾದ ಕೋರಿ:
ಈ ಗುಂಗಿನಲ್ಲೇ ಇರುವ ಶ್ರೀ ಕೇರಳದಲ್ಲಿ ಕಂಡಕಂಡ ದೇವರುಗಳಿಗೆ ಅಡ್ಡಬೀಳುತ್ತಿದ್ದಾರೆ. ಇನ್ನೇನು ವಿಶ್ವಖ್ಯಾತಿಯ ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನದ 18 ಮೆಟ್ಟಿಲು ಹತ್ತಲಿದ್ದಾರೆ.












Click it and Unblock the Notifications