ಬಿಜೆಪಿ ನಾಯಕರಿಗೆ ನಮೋನಿಯಾ : ವೀರಪ್ಪ ಮೊಯ್ಲಿ

ಭಾನುವಾರ ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮೊಯ್ಲಿ, ಬಿಜೆಪಿ ನಾಯಕರಿಗೆ ನಮೋನಿಯಾ ಪ್ರಾರಂಭವಾಗಿದೆ. ಇದು ನ್ಯೂಮೋನಿಯಾದ ಮತ್ತೊಂದು ರೂಪ. ಆದ್ದರಿಂದ ಮೋದಿ ಮಂತ್ರ ಜಪಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮೋದಿ ಮೇನಿಯಾ ಅನ್ನುವುದು ಬಿಜೆಪಿಯ ಸೃಷ್ಟಿ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಮೋದಿ ದೇಶದ ಹೀರೋ ಆಗಲು ಸಾಧ್ಯವಿಲ್ಲ ಎಂದು ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದರು.(ಮೋದಿ ಯುಗ ಪ್ರಾರಂಭ)
ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಈಗಾಗಲೇ ನೆಲ ಕಚ್ಚಿದೆ. ಮೋದಿ ಮೋಡಿಯಿಂದಾಗಿ ಯುಪಿಎ ಅಧಿಕಾರ ಪಡೆಯುವುದು ಮತ್ತಷ್ಟು ಸುಲಭವಾಗಲಿದೆ ಎಂದು ಅವರು ವಿಶ್ಲೇಷಿಸಿದರು. ದೇಶದ ಅಲ್ಪಸಂಖ್ಯಾತರು ಮೋದಿಯನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ.(ಮೋದಿ ಯಾರು, ಏನು ಹೇಳಿದರು)
ಮೋದಿ ಪ್ರಧಾನಿ ಅಭ್ಯರ್ಥಿಯಾಗುವ ಸುದ್ದಿ ಕೇಳಿ ಪಕ್ಷದ ಹಿರಿಯ ನಾಯಕ ಅಡ್ವಾಣಿ ಅವರು ಹಾಸಿಗೆ ಹಿಡಿದಿದ್ದಾರೆ. ಇನ್ನು ದೇಶದ ಸಾಮಾನ್ಯ ಜನರ ಆರೋಗ್ಯದ ಕತೆಯೇನು? ಗುಜರಾತ್ ನರಮೇಧದ ಇತಿಹಾಸ ಹೊಂದಿರುವ ವ್ಯಕ್ತಿಯನ್ನು ದೇಶ ಸ್ವೀಕರಿಸುವುದಿಲ್ಲ ಎಂದು ಹೇಳಿದರು.
ಜವಾಬ್ದಾರಿ ನೆನಪಿಸಲಾಗಿದೆ : ಮುಂದಿನ ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಯಾವುದೇ ರಾಜ್ಯದ ಮುಖ್ಯಮಂತ್ರಿಗಳಿಗೆ ಇಷ್ಟು ಲೋಕಸಭೆ ಸ್ಥಾನ ಗೆಲ್ಲಬೇಕೆಂದು ಟಾರ್ಗೆಟ್ ನೀಡಿಲ್ಲ. ಚುನಾವಣೆ ಹತ್ತಿರವಾಗುತ್ತಿದೆ ಎಂದು ನೆನಪು ಮಾಡಲಾಗಿದೆ.
ರಾಜ್ಯಗಳಲ್ಲಿ ಪಾರದರ್ಶಕ ಆಡಳಿತ ನಡೆಸಿ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಮಾಧ್ಯಮಗಳ ತಪ್ಪುಗ್ರಹಿಕೆಯಿಂದಾಗಿ ಇಂತಹ ಸುದ್ದಿ ಹರಡಿದೆ ಎಂದು ಅವರು ಆರೋಪಿಸಿದರು.
ಯಡಿಯೂರಪ್ಪ ಸುಮ್ಮನಿರಲಿ : ಕೆಜೆಪಿ ಅಧ್ಯಕ್ಷ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಮೊಯ್ಲಿ, ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿಲ್ಲ ಎಂದು ಯಡಿಯೂರಪ್ಪ ಹೇಳಿಕೆ ನೀಡಬಾರದು.
ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು, ಅಧಿಕಾರ ನಡೆಸಲು ಆಶೀರ್ವಾದ ಮಾಡಿದ್ದಾರೆ. ಯಡಿಯೂರಪ್ಪ ಈ ರೀತಿಯ ಹೇಳಿಕೆ ನೀಡಬಾರದು. ಸಿದ್ದರಾಮಯ್ಯ ಅವರ ಸರ್ಕಾರ 5 ವರ್ಷದ ಅವಧಿಯನ್ನು ಯಶಸ್ವಿಯಾಗಿ ಪೂರೈಸಲಿದೆ ಎಂದರು.












Click it and Unblock the Notifications