ಅಡ್ವಾಣಿ ರಾಜೀನಾಮೆ : ರಾಜ್ಯ ನಾಯಕರ ಪ್ರತಿಕ್ರಿಯೆ
ಬೆಂಗಳೂರು, ಜೂ.3 : ಬಿಜೆಪಿ ಪಕ್ಷದ ಭಿನ್ನಮತ ಸ್ಪೋಟಗೊಂಡಿದ್ದು ಪಕ್ಷದ ಮೂರು ಸಮಿತಿಗಳ ಸದಸ್ಯತ್ವಕ್ಕೆ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ರಾಜೀನಾಮೆ ನೀಡಿದ್ದಾರೆ. ತಮ್ಮ ಸಂಪೂರ್ಣ ಜೀವನವನ್ನು ಬಿಜೆಪಿ ಕಟ್ಟಿ ಬೆಳೆಸಲು ಮೀಸಲಿಟ್ಟಿದ್ದ ಅಡ್ವಾಣಿ ಅವರ ರಾಜೀನಾಮೆ ಬಿಜೆಪಿಗೆ ದೊಡ್ಡ ಹಿನ್ನಡೆ ಉಂಟು ಮಾಡಿದೆ.
ಪಕ್ಷದ ವಿವಿಧ ನಾಯಕರು ಅಡ್ವಾಣಿ ಅವರ ರಾಜೀವಾಮೆಗೆ ಹಲವಾರು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪಕ್ಷದ ಭಿನ್ನಮತದಿಂದಾಗಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲು ಯಾವ ನಾಯಕರು ತಯಾರಿಲ್ಲ. ನರೇಂದ್ರ ಮೋದಿ ಅವರಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಅಡ್ವಾಣಿ ರಾಜೀನಾಮೆ ನೀಡಿದ್ದಾರೆ ಎಂಬುದು ಬಹಿರಂಗ ಸತ್ಯ. (ಅಡ್ವಾಣಿ ರಾಜೀನಾಮೆ ಪತ್ರ)
ಲೋಕಸಭೆಯಲ್ಲಿ ಎರಡು ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ 182 ಸ್ಥಾನಗಳನ್ನು ಗೆಲ್ಲುವಲ್ಲಿ ಅಡ್ವಾಣಿ ಅವರ ಪರಿಶ್ರಮ ಎಷ್ಟಿತ್ತು ಎಂದು ಎಲ್ಲರಿಗೂ ತಿಳಿದಿದೆ. ತತ್ವ ಸಿದ್ಧಾಂತಗಳೊಂದಿಗೆ ಎಂದು ರಾಜಿ ಮಾಡಿಕೊಳ್ಳದ ಅಡ್ವಾಣಿ ಅವರ ನಿಷ್ಟುರ ನಿಲುವುಗಳೇ ಪಕ್ಷದ ಬೆಳವಣಿಗೆಗೆ ಕಾರಣವಾಗಿತ್ತು. ಅಡ್ವಾಣಿ ರಾಜೀನಾಮೆ ಬಗ್ಗೆ ಕರ್ನಾಟಕದ ವಿವಿಧ ಪಕ್ಷಗಳ ರಾಜಕಾರಣಿಗಳು ಏನು ಹೇಳಿದರು ಎಂದು ತಿಳಿಯೋಣ.

ಡಿ.ವಿ.ಸದಾನಂದಗೌಡ
ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದು ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿ. ಅಂತಹ ಹಿರಿಯ ನಾಯಕರ ರಾಜೀನಾಮೆ ಬಗ್ಗೆ ನಾನು ಪ್ರತಿಕ್ರಿಯ ನೀಡುವುದಿಲ್ಲ. ಬಿಜೆಪಿ ನಾಯಕರಿಗೆ ಅಡ್ವಾಣಿ ಅವರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ನಾನು ಒತ್ತಾಯಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂಗೌಡ ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ
ಎಲ್.ಕೆ.ಅಡ್ವಾಣಿ ಅವರಂತಹ ಹಿರಿಯರು ಪಕ್ಷಕ್ಕೆ ರಾಜೀನಾಮೆ ನೀಡಬಾರದಿತ್ತು. ಅವರ ರಾಜೀನಾಮೆ ಕಾರಣಗಳ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೆಜೆಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕೆ.ಎಸ್.ಈಶ್ವರಪ್ಪ
ಬಿಜೆಪಿ ಪಕ್ಷವನ್ನು ಕಟ್ಟಲು ಎಲ್.ಕೆ.ಅಡ್ವಾಣಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಪಕ್ಷದ ಲಕ್ಷಾಂತರ ಕಾರ್ಯಕರ್ತರನ್ನು ಅವರು ಬೆಳೆಸಿದ್ದಾರೆ. ಅವರ ರಾಜೀನಾಮೆ ನೋವು ತಂದಿದೆ. ಕಾರ್ಯಕಾರಣಿ ಸಭೆಗೆ ಅವರು ಗೈರು ಹಾಜರಾಗಿದ್ದರು. ಆದರೆ, ಅವರು ಏಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಧನಂಜಯ್ ಕುಮಾರ್
ಬಿಜೆಪಿ ಪಕ್ಷದಲ್ಲಿ ಗುಂಪುಗಾರಿಕೆಯಿಂದಾಗಿ ಹಿರಿಯ ನಾಯಕರಿಗೆ ಗೌರವ ಸಿಗುತ್ತಿಲ್ಲ. ಎಲ್.ಕೆ.ಅಡ್ವಾಣಿ ಅವರು ತಡವಾಗಿಯಾದರೂ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್ ಹೇಳಿದ್ದಾರೆ.

ಸಿದ್ದರಾಮಯ್ಯ
ಪಕ್ಷವನ್ನು ಕಟ್ಟಿ ಬೆಳೆಸಿದ ಅಡ್ವಾಣಿ ಅವರ ಶ್ರಮವನ್ನು ಬಿಜೆಪಿಯವರು ಮರೆತಿದ್ದಾರೆ. ಕೇವಲ 2 ಸ್ಥಾನ ಗಳಿಸುತ್ತಿದ್ದ ಲೋಕಸಭೆಯಲ್ಲಿ, ಬಿಜೆಪಿ 182 ಸ್ಥಾನಗಳನ್ನು ಗಳಿಸುವಲ್ಲಿ ಅಡ್ವಾಣಿ ಶ್ರಮ ಅಪಾರ. ಅವರು ಯಾಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಪಕ್ಷದ ಆಂತರಿಕ ವಿಷಯ. ಅಡ್ವಾಣಿ ಅವರ ರಾಜೀನಾಮೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭ ತರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ
ಬಿಜೆಪಿ ಪಕ್ಷ ಕೆಲವು ನಾಯಕರ ವೈಯಕ್ತಿಕ ಹಿತಾಸಕ್ತಿಗಳಿಂದ ತುಂಬಿ ಹೋಗಿದೆ. ಆದ್ದರಿಂದ ಅಡ್ವಾಣಿ ಅವರು ರಾಜೀನಾಮೆ ನೀಡಿದ್ದಾರೆ. ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಅವರು ರಾಜೀನಾಮೆ ನೀಡಬಾರದಿತ್ತು. ಅಡ್ವಾಣಿ ಅವರಿಲ್ಲದ ಪಕ್ಷ ಸತ್ವ ಹೀನವಾಗಿದೆ ಎಂದು ವಿಪಕ್ಷ ನಾಯಕ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪೇಜಾವರ ವಿಶ್ವೇಶ್ವತೀರ್ಥ ಸ್ವಾಮೀಜಿ
ಯುವಕರಿಗೆ ಅವಕಾಶ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಅಡ್ವಾಣಿ ರಾಜೀನಾಮೆ ನೀಡಿರುವುದು ಸೂಕ್ತವಲ್ಲ. ಅವರ ರಾಜೀನಾಮೆಗೆ ಇದು ಸೂಕ್ತ ಸಂದರ್ಭವಾಗಿರಲಿಲ್ಲ. ಪಕ್ಷದ ನಾಯಕರು ಅವರ ಮನವೊಲಿಸುತ್ತಾರೆ ಎಂದು ನಂಬಿದ್ದೇನೆ ಎಂದು ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ.












Click it and Unblock the Notifications